ಬದಲಾದ ಬೆಂಗಳೂರಿಗೆ ಬರಲಾಗಿ...

ಬೆಂಗಳೂರಿಗೆ ವಾಪಸ್ಸಾಗಿ ಇಲ್ಲಿ ತಳವೂರುವುದು ನನಗಿದ್ದ ಕನಸುಗಳಲ್ಲಿ ಒಂದಾಗಿತ್ತು. ಹಾಗೆ ನೋಡಿದರೆ ನಿಜವಾದ ಬೆಂಗಳೂರಿಗ ವಲಸೆ ಹೋಗುವುದೇ ಇಲ್ಲ. ಇಲ್ಲಿಯೇ ಪಿಂಚನಿ ದೊರೆಯಬಹುದಾದ ಒಳ್ಳೆಯ ಕೆಲಸ ಸಿಕ್ಕರೆ, ಹೊರಗೆ ದೊರೆಯಬಹುದಾದ ತುಸು ಹೆಚ್ಚು ಹಣ, ಅಥವಾ ಹುದ್ದೆಯನ್ನು ನಾವು ತಿರಸ್ಕರಿಸುವವರೇ. ಸುಮ್ಮನೆ ಯಾಕೆ ರಿಸ್ಕ್ ತೆಗೆದುಕೊಳ್ಳಬೇಕು? ಇದ್ದಹಾಗೆ ಇರಲು ಸಾಧ್ಯವಾದರೆ ಅದಕ್ಕಿಂತ ಹೆಚ್ಚಿನ ತೃಪ್ತಿ ಬೇರೇನಿದೆ. ಹೀಗಾಗಿಯೇ ಬೆಂಗಳೂರಿಗರ ಮನಸ್ಥಿತಿಯನ್ನು ವಿವರಿಸಲು ಸರಿಯಾದ ವಿಶೇಷಣವೆಂದರೆ ‘ಅಡ್ಜಸ್ಟ್’ ಅನ್ನವ ಪದವೇ ಇರಬಹುದು. ಬೆಂಗಳೂರಿಗೆ ಆಗಾಗ ಬಂದು ಹೋಗುತ್ತಿರುವ ನನಗೆ ಒಳ-ಹೊರಗಿನ ಎರಡೂ ನೋಟಗಳು ಸಿಕ್ಕಿರುವುದರಿಂದ ಇಲ್ಲಿನ ಬದಲಾವಣೆಗಳು ಯಾವ ದಿಗ್ಭ್ರಾಂತಿಯನ್ನೂ ಉಂಟುಮಾಡಿಲ್ಲ. ಊರು, ಒಂದು ರೀತಿಯಲ್ಲಿ ಹಿಂದಿನಷ್ಟೇ ಆರಾಮವಾಗಿ ಸೋಮಾರಿಯಾಗಿದೆ. ಆಗಾಗ ತಕ್ಷಣದ ಚಟುವಟಿಕೆ ಕಾಣುತ್ತದೆ. ಹಾಗೂ ಎಷ್ಟು ಅಸ್ತವ್ಯಸ್ತವಾಗಬಹುದೋ ಅಷ್ಟೂ ಅಸ್ತವ್ಯಸ್ತವಾಗಿದೆ. ಇಲ್ಲಿ ಸಹನಶೀಲತೆ, ಅಸಹನೆ, ಸಹಿಷ್ಣುತೆ ಎಲ್ಲವೂ ಏಕಕಾಲಕ್ಕೆ ಆಗುವುದನ್ನ ನಾವು ಕಾಣುತ್ತಿದ್ದೇವೆ. ನಮಗೆ ನಮ್ಮ ರಜನಿ ಸಾರ್ [ಹೆಸರು: ಶಿವಾಜಿರಾವ್ ಗಾಯಕ್ ವಾಡ್, ತಾಯ್ನುಡಿ: ಮರಾಠಿ, ಕನ್ನಡ ಚೆನ್ನಾಗಿ ಬಲ್ಲ ತಮಿಳು ಸಿನೇಮಾದ ಸೂಪರ್ ಹೀರೋ] ಸಿನೇಮಾಗಳೆಂದರೆ ಪ್ರೀತಿ. ಆತ ಬೆಂಗಳೂರಿಗ, ಕನ್ನಡಿಗ ಅನ್ನುವ ಹೆಮ್ಮೆ. ಆದರೂ ಆತನಿರುವ ನಾಡು ನೀರನ್ನು ಕೇಳಿದರೆ ನಾವು ಉರಿದೇಳುತ್ತೇವೆ. ನೀರು ಕನ್ನಡತನದ ಪ್ರತೀಕವಾದಾಗ ಊರೆಲ್ಲ ಹಳದಿ-ಕೆಂಪು ಬಾವುಟಗಳು ಹಾರಾಡುತ್ತವೆ. ಈ ಬಣ್ಣ ಮತ್ತು ಈ ಬಣ್ಣದ ಬಾವುಟಗಳು ಅಪಾಯಕಾಲದ ಕವಚಗಳಾಗಿ ಇರುತ್ತವೆ.






ಕನ್ನಡ ಭಾಷೆ, ತಂತ್ರಾಂಶ ಮತ್ತು ಬ್ಲಾಗ್ ಲೋಕ

ಇಪ್ಪತ್ತು ವರುಷಗಳ ಹಿಂದೆ ಬರವಣಿಗೆ ಎನ್ನುವುದು ಕಾಗದದ ಮೇಲೆ ಸೇರಿಸುವ ಅಕ್ಷರಜಾಲವಾಗಿತ್ತು. ಹಾಗೂ ಬರೆದದ್ದು ಪ್ರಕಟಗೊಳ್ಳಲು ಹಲವು ಸಹಜ ಅಡಚಣೆಗಳೂ ಇದ್ದುವು. ಈಗ ತಂತ್ರಜ್ಞಾನದ ವೃದ್ಧಿಯೊಂದಿಗೆ ಇಂದು ಕೀಲಿಮಣೆಯ ಮೇಲೆ ಹಲವುಬಾರಿ ಬೆರಳುಗಳನ್ನಾಡಿಸಿ, ಒಂದು ಗುಂಡಿಯನ್ನು ಒತ್ತಿದರೆ ಬರೆದದ್ದು ಜಗತ್ತಿಗೇ ತಿಳಿಯುತ್ತದೆ. ಅಚ್ಚು ಮಾಧ್ಯಮದಲ್ಲೂ ಇದು ತುಂಬಾ ಸರಳವಾಗಿದೆಯೆಂದು ಗೆಳೆಯರೊಬ್ಬರು ಹೇಳಿದರು. ಡಿಟಿಪಿಯ ತಂತ್ರಜ್ಞಾನ ಬಂದಿರುವುದರಿಂದ ಮೊದಲು 1000 ಪ್ರತಿಗಳಿಗೆ ಕಡಿಮೆ ಅಚ್ಚು ಮಾಡುವುದು ಕಷ್ಟ ಎಂದು ಒದ್ದಾಡುತ್ತಿದ್ದುದಕ್ಕೆ ವಿರುದ್ಧವಾಗಿ 150 ಪ್ರತಿಗಳನ್ನು ಅಚ್ಚು ಹಾಕಬಹುದಾದ ಸಾಧ್ಯತೆಯಿದೆಯಂತೆ. ಅಕ್ಷರ ಜೋಡಣೆಯನ್ನು ಕಂಪ್ಯೂಟರಿನಲ್ಲಿ ಕಾಯ್ದಿರಿಸಬಹುದಾದ್ದರಿಂದ, ಸರಕಾರಿ, ಲೈಬ್ರರಿ ಆರ್ಡರುಗಳು ಬಂದಾಗ ಇನ್ನಷ್ಟು ಪ್ರತಿಗಳನ್ನು ಅಚ್ಚು ಹಾಕಬಹುದು...



ಯುದ್ಧಾನಂತರದ ಅಫಘಾನಿಸ್ತಾನ - ವಿರೋಧಾಭಾಸದ ನಡುವೊಂದಿಷ್ಟು ದೇಶಭಕ್ತಿ

ಅಫಘಾನಿಸ್ತಾನದ ಉಸ್ತುವಾರಿ ತಾಲಿಬಾನ್ ಕೈಯಿಂದ ಸ್ಥಳೀಯರ, ಪ್ರಜಾಪ್ರತಿನಿಧಿಗಳ ಕೈಗೆ ಸೇರಿ ಹಲವು ವರ್ಷಗಳಾಗಿವೆ. ಹಾಗೆಂದು ಆ ದೇಶದ ಸಂಪೂರ್ಣ ಸೂತ್ರಗಳು ಪ್ರಜಾಪ್ರಭುತ್ವದ ಅಡಿಪಾಯದ ಮೇಲೆ ನಡೆಯುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಹಳೆಯ ಯುದ್ಧಕೋರರು, ಮಾದಕ ವಸ್ತುಗಳನ್ನು ಮಾರಾಟ ಮಾಡುವ ಮಾಫಿಯಾ ಹಾಗೂ ಮತಾಂಧ ಮೂಲಭೂತವಾದಿಗಳು ಇನ್ನೂ ದೇಶದ ಬಹಳಷ್ಟು ಪ್ರಾಂತಗಳಲ್ಲಿ ಇದ್ದಾರೆ. ಆದರೂ ಆ ದೇಶದಲ್ಲಿ ಕೆಲವು ಗಮ್ಮತ್ತಿನ ವಿಚಾರಗಳು ನನಗೆ ಕಂಡುವು.




ಯುಐಡಿ: ಯಾಕೆ ವಿಫಲವಾಗಬಹುದು, ಯಾಕೆ ಸಫಲವಾಗಬೇಕು

ಭಾರತದಲ್ಲಿ ವಾಸವಿರುವ ಪ್ರತಿಯೊಬ್ಬ ವ್ಯಕ್ತಿಗೂ ಅಸ್ತಿತ್ವದ ಗುರುತಿನ ಚೀಟಿ ಕೊಡಬೇಕೆಂದೇ ನಿಯಮಿಸಲ್ಪಟ್ಟ ಯುನಿಕ್ ಐಡಿ ಅಥಾರಿಟಿಯ ಮುಂದಿರುವುದು ಸುಲಭವಾದ ಸವಾಲೇನೂ ಅಲ್ಲ. ಈ ಸ್ಥರದ ಕೆಲಸ ಈವರೆಗೆ ಯಾವುದೇ ದೇಶದಲ್ಲಿ ನಡೆದಿಲ್ಲ. ಒಂದು ನೂರು ಕೋಟಿಕೂ ಹೆಚ್ಚಿನ ಜನಸಂಖ್ಯೆಯ ಗುರುತನ್ನು ಸಂಗ್ರಹಿಸಿ ಪ್ರತಿಯೊಬ್ಬರಿಗೂ ಒಂದು ವಿಶಿಷ್ಟ ಸಂಖ್ಯೆಯನ್ನು ನೀಡಿ ಆ ಸಂಖ್ಯೆ ಹೊಂದಿದ ವ್ಯಕ್ತಿಯ ಗುರುತನ್ನು ಒಂದೆಡೆ ಕಾಯ್ದಿಡುವುದಲ್ಲದೇ - ಬೇಕೆಂದಾಗ ತ್ವರಿತ ಗತಿಯಲ್ಲಿ ಆ ಗುರುತನ್ನು ಪರಿಶೀಲಿಸಿ ಧೃವೀಕರಿಸಹೊರಟಿರುವ ಈ ಯೋಜನೆ ಮಹತ್ವಾಕಾಂಕ್ಷೆಯಿಂದ ಕೂಡಿದೆ. ಯುಐಡಿ ಮುಂದಿರುವ ಸವಾಲುಗಳು ಮಹತ್ತರವಾದವು. ಅಂಥ ಸವಾಲನ್ನು ಎದುರಿಸಲು ಸಿದ್ಧರಾಗಿ ನಿಂತಿರುವ ನಂದನ್ ನಿಲೇಕಣಿ ಸಫಲರಾಗುವರೇ? ನಂದನ್ ಅವರ ಕೆಲಸ ಚುನಾವಣೆಗಳಿಗೆ ಗುರುತಿನ ಚೀಟಿ ಕೊಡಲು ಹೊರಟ ಶೇಷನ್ ಗಿಂತ ಎಷ್ಟು ಭಿನ್ನ ಹಾಗೂ ಎಷ್ಟು ಜಟಿಲ... ಹಾಗೂ ಅವರ ಸಾಫಲ್ಯಕ್ಕೆ ಮಾಪಕಗಳು ಏನು?





ಹೊಸ ಓದು: ಬಡ್ಡಿವ್ಯಾಪಾರಿಯ ಸಾವು - ಕಥನ ತಂತ್ರದ ಕೆಲವು ವಿಚಾರಗಳು

ಕೋಟ ನೀಲಿಮಾರ ಡೆಥ್ ಆಫ್ ಎ ಮನೀಲೆಂಡರ್ ಅನ್ನುವ ಇತ್ತೀಚಿನ ಪುಸ್ತಕ ಈಚೆಗೆ ಬರುತ್ತಿರುವ ಭಾರತೀಯರು ಬರೆಯುತ್ತಿರುವ ಇಂಗ್ಲೀಷ್ ಸಾಹಿತ್ಯದ ಸಂದರ್ಭದಲ್ಲಿ, ಒಂದು ಭಿನ್ನ ಲಹರಿಯನ್ನು ತರುತ್ತದೆ. ಇಂಗ್ಲೀಷಿನಲ್ಲಿ ಬರೆಯುವ ಭಾರತೀಯ ಬರಹಗಾರರು ಪಶ್ಚಿಮಾಭಿಮುಖವಾಗಿ ಯಾರನ್ನೋ ಮೆಚ್ಚಿಸಲು ಮಾತ್ರ ಬರೆಯುತ್ತಿದ್ದಾರೆ ಎನ್ನುವ ಆರೋಪ ಹೊರಿಸುವುದು ಅಸಮಂಜನವೇ ಸರಿ. ಆದರೆ ಇತ್ತೀಚಿನ ಬೆಳವಣಿಗೆಯನ್ನು ಕಂಡಾಗ, ಭಾರತ ಕೇಂದ್ರಿತವಾಗಿ ಬರುತ್ತಿರುವ ಬರವಣಿಗೆಯಲ್ಲಿ ನಮಗೆ ಐದು ಭಿನ್ನ ಎಳೆಗಳು ಕಾಣಿಸುತ್ತಿವೆ.

  • ಮೊದಲ ಎಳೆ ಭಾರತದ ಮೇಲ್ವರ್ಗವನ್ನು ಪ್ರತಿನಿಧಿಸುವ [ಆದರೆ ಸಾಹಿತ್ಯವನ್ನು ಪ್ರತಿನಿಧಿಸಲಾರದ] ಶೋಭಾ ಡೇ, ಚೇತನ್ ಭಗತ್ ಗಳು ಹರಿಯಬಿಡುತ್ತಿರುವ ಸಾಹಿತ್ಯ.
  • ಎರಡನೆಯ ಎಳೆ ಅರವಿಂದ ಅಡಿಗ, ಅರುಂಧತಿ ರಾಯ್ ಪ್ರತಿನಿಧಿಸುವ ಸಾಹಿತ್ಯ. ಇದರಲ್ಲಿ ಭಾರತದ ಮೂಲ ಎಳೆಗಳಿದ್ದರೂ, ಅವರುಗಳ ಮನಸ್ಸಿನಲ್ಲಿರು ಓದಗ ವೃಂದ ವಿಶ್ವವ್ಯಾಪಿಯಾದ್ದರಿಂದ ಅವರ ಬರವಣಿಗೆಯೂ ಸಾಕಷ್ಟು ಗ್ಲೋಬಲೈಸ್ಡ್ ಬರವಣಿಗೆಯಾಗಿರುತ್ತದೆ.
  • ನಿಜಕ್ಕೂ ವಿಶ್ವ ಸಾಹಿತ್ಯದ ವೇದಿಕೆಯ ಮೇಲೆ ಬರೆಯುತ್ತಾ ಭಾರತವನ್ನು ಆಗಾಗ ಸಂದರ್ಭ ಮಾಡಿಕೊಂಡು ಬರೆವ ಲೇಖಕರಾದ ವಿಕ್ರಂ ಸೇಠ್ ಮತ್ತು ಅಮಿತಾವ್ ಘೋಷ್ ಮೂರನೆಯ ಎಳೆಗೆ ಸೇರುತ್ತಾರೆ.
  • ನಾಲ್ಕನೆಯ ಎಳೆಯಲ್ಲಿ ಭಾರತೀಯ ಸಂಜಾತರಾಗಿ, ಇತರೆ ದೇಶದ ಪಾಸ್ ಪೋರ್ಟ್ ಹೊಂದಿರುವ, ಆಗಾಗ ಇಲ್ಲಿಗೆ ವಾಪಸ್ಸಾಗುವ, ತಮ್ಮ ನೆನಪಿನ ಗಣಿಯಿಂದ - ಅಥವಾ ಪ್ರವಾಸೀ ಬೆರಗಿನಿಂದ ಭಾರತವನ್ನು ನೋಡುವ ಆದರೂ ಸಮರ್ಥವಾಗಿ ಬರೆಯಬಲ್ಲ ಸಲ್ಮಾನ್ ರಶ್ದೀ, ಝುಂಪಾ ಲಹಿರಿಗಳದ್ದು.
  • ಐದನೆಯ ಎಳೆಯಲ್ಲಿ ರಾಜಾರಾವ್ ಶಶಿ ದೇಶಪಾಂಡೆ, ಕೆ.ಆರ್. ಉಷಾರಂತೆ ಸ್ಥಳೀಯ ಸಂವೇದನೆಯನ್ನು ಇಂಗ್ಲೀಷಿನಲ್ಲಿ ಸಮರ್ಥವಾಗಿ ಬಿಂಬಿಸುವ, ಸಾಧ್ಯವಾಗಿದ್ದರೆ ತಮ್ಮ ತಮ್ಮ ಭಾಷೆಗಳಲ್ಲಿಯೇ ಸಾಹಿತ್ಯ ರಚಿಸಬಹುದಾಗಿದ್ದ ಪರಂಪರೆಯ ಬರಹಗಾರರು. ಈ ಪರಂಪರೆಗೆ ಈಚಿನ ಸೇರ್ಪಡೆ ಕೋಟ ನೀಲಿಮಾ ಎನ್ನುವ ಲೇಖಕಿಯದ್ದು ಅನ್ನಿಸುತ್ತದೆ.






ಅಸ್ತಿತ್ವದ ಗುರುತಿನ ಚೀಟಿ

ಹಲವು ವರ್ಷಗಳ ಹಿಂದೆ ರಜೆಗೆ ಬೆಂಗಳೂರಿಗೆ ಬಂದಿದ್ದ ಪುಟ್ಟ ಹುಡುಗ ತಾನಿಳಿದುಕೊಂಡಿದ್ದ ಮನೆಯಲ್ಲಿದ್ದ ಹಿರಿಯರೊಬ್ಬರನ್ನು "ನೀನು ಯಾರು?" ಎಂದು ಕೇಳಿದ. ಅದಕ್ಕೆ ಆ ಹಿರಿಯರು ಒಂದು ದೀರ್ಘ ಆಲೋಚನೆಗೆ ಬಿದ್ದು "ಮಗೂ, ಆ ವಿಷಯವನ್ನೇ ತಿಳಿದುಕೊಳ್ಳಲು ಅನೇಕ ದಾರ್ಶನಿಕರು ಪ್ರಯತ್ನಿಸಿದ್ದಾರೆ, ಹಾಗೂ ಆ ವಿಷಯವನ್ನು ಅರ್ಥಮಾಡಿಕೊಳ್ಳಲೆಂದೇ ನಾನು ವೇದಾಂತದ ಕ್ಲಾಸುಗಳಿಗೆ ಹೋಗುತ್ತಿದ್ದೇನೆ!" ಎಂದಿದ್ದರು.





ಬಂಡವಾಳಶಾಹಿ ತತ್ವದ ನಿರಂತರತೆ?

ಈಚೆಗೆ ನಡೆದ ಒಂದು ಸೆಮಿನಾರಿನಲ್ಲಿ ಬಂಡವಾಳಶಾಹಿ ಸೂತ್ರಗಳು ನಿರಂತರವೇ, ಅಥವಾ ಆ ತತ್ವದ ಭವಿಷ್ಯ ಸೀಮಿತವಾಗಿದೆಯೇ ಎಂಬ ಪ್ರಶ್ನೆಯನ್ನು ಚರ್ಚೆಗೊಳಪಡಿಸಿದ್ದರು. ಮ್ಯಾನೇಜ್ ಮಂಟ್ ಪಠಿಸುವ ಐಐಎಂನಂತಹ ಸಂಸ್ಥೆಯಲ್ಲಿ ಅಭ್ಯಾಸ ಮಾಡುವ ವಿದ್ಯಾರ್ಥಿಗಳು ಈ ಪ್ರಶ್ನೆಯನ್ನು ಕೇಳಹತ್ತಿದ್ದದ್ದೇ ಕುತೂಹಲದ, ಸೋಜಿಗದ ವಿಷಯ. ಅನೇಕ ಬಾರಿ ಮಾತಿನಲ್ಲಿ ಅನಂತಮೂರ್ತಿಯವರು ಐಐಎಂಅನ್ನು ವ್ಯಾಪಾರಿಗಳ ಕಾಶಿ ಎಂದು ಲಘುವಾಗಿ ಗೇಲಿಮಾಡಿರುವದುಂಟು. ಈ ಇಂಥ ಕಾಶಿಯಲ್ಲಿ "ವಿಶ್ವನಾಥನು ದೇವರೇ?" ಎಂದು ಪ್ರಶ್ನಿಸುವ ಪರಿ ನನಗೆ ತುಸು ಸೋಜಿಗವನ್ನುಂಟುಮಾಡಿತ್ತು. ಆದರೆ ಮಾರುಕಟ್ಟೆಯ ಮಹಾತ್ಮನ ನಂಬಿಕೆ ಆಧಾರವಾಗಿಯೇ ತಮ್ಮ ಭವಿಷ್ಯದ ಕನಸುಗಳನ್ನು ಕಟ್ಟಿದ್ದ ವಿದ್ಯಾರ್ಥಿಗಳಿಗೆ ಅಮೇರಿಕದ ದೊಡ್ಡ - ನೂರೈವತ್ತು ವರ್ಷಗಳಿಗೂ ಹೆಚ್ಚುಕಾಲ ಆ ಸೂತ್ರಗಳ ಆಧಾರದ ಮೇಲೆಯೇ ನಡೆದ ದೊಡ್ಡ ವಿತ್ತೀಯ ಸಂಸ್ಥೆಗಳು ಇದ್ದಕ್ಕಿದ್ದ ಹಾಗೆ ರಾತ್ರೋರಾತ್ರಿ ಕುಸಿದದ್ದು ಕಂಡು ತಮ್ಮ ನಂಬಿಕೆಗಳನ್ನು ಪ್ರಶ್ನಿಸಿಕೊಳ್ಳುವ ಅಂತರಾವಲೋಕನಕ್ಕೆ ಎಡೆಮಾಡಿದ್ದಿರಬಹುದು.





ಬಡವರು ಮತ್ತು ರಾಷ್ಟ್ರೀಕೃತ ಬ್ಯಾಂಕುಗಳು.

ಬಡಕುಟುಂಬಗಳ ಜೀವನದಲ್ಲಿ ಬೇಕಾದ ವಿತ್ತೀಯ ಸೇವೆಗಳ ಬಗೆಗಿನ ಮಾಹಿತಿಯನ್ನು ಪರಿಶಿಲಿಸೋಣ. 1971ರಲ್ಲಿ ನಡೆಸಿದ್ದ ರಾಷ್ಟ್ರೀಯ ದಶಮಾನ ಸರ್ವೆಯ ಪ್ರಕಾರ ಗ್ರಾಮೀಣ ಕುಟುಂಬಗಳ ಸುಮಾರು 30 ಪ್ರತಿಶತ ಸಾಲದ ಮೊತ್ತ ಮಾತ್ರ ಸಂಸ್ಥಾಗತ ಮೂಲಗಳಿಂದ [ಬ್ಯಾಂಕು, ಸಹಕಾರ ಸಂಘ - ಹೀಗೆ] ಬಂದಿದ್ದರೆ ಮಿಕ್ಕ 70 ಪ್ರತಿಶತ ಸಾಲದ ಮೊತ್ತವನ್ನು ಇತರ ಮೂಲಗಳಿಂದ ಈ ಕುಟುಂಬಗಳು ಪಡೆದಿದ್ದವು. ಬ್ಯಾಂಕುಗಳ ರಾಷ್ಟ್ರೀಕರಣ ಆಗಷ್ಟೇ ಆಗಿತ್ತು. 1981ಕ್ಕೆ ಬರುವ ವೇಳೆಗೆ ಸುಮಾರು 60 ಪ್ರತಿಶತ ಸಾಲದ ಮೊತ್ತ ಸಂಸ್ಥಾಗತ ಮೂಲಗಳಿಂದ ಬರಲು ಪ್ರಾರಂಭವಾಗಿತ್ತು. ನಗರ ಪ್ರದೇಶಗಳ ಮಾಹಿತಿಯೂ ಇದಕ್ಕಿಂತ ತೀವ್ರ ಭಿನ್ನತೆಯನ್ನೇನೂ ತೋರಿರಲಿಲ್ಲ. 1991ರ ವೇಳೆಗೆ ಸಂಸ್ಥಾಗತ ಮೂಲಗಳ ಪಾಲು 56 ಪ್ರತಿಶತಕ್ಕೆ ಇಳಿದಿತ್ತು. 2003ರಲ್ಲಿ ಪ್ರಪಂಚ ಬ್ಯಾಂಕು ನಡೆಸಿದ ಒಂದು ದೊಡ್ಡ ಅಧ್ಯಯನದಲ್ಲಿ ಸಂಸ್ಥೆಗಳ ಪಾಲು ತುಸುವೇ ಬೆಳಿದಿದ್ದು 1971-1981 ನಡುವೆ ಕಂಡಂಥಹ ಯಾವ ದೊಡ್ಡ ಬದಲಾವಣೆಯೂ ಕಂಡುಬರಲಿಲ್ಲ.





ಬಡ್ಡಿವ್ಯಾಪಾರಿಗಳ ಕಥೆಗಳು

ಗ್ರಾಮೀಣ ಪ್ರದೇಶಗಳಲ್ಲಿನ ಬಡ್ಡಿವ್ಯಾಪಾರಿಗಳೆಂದರೆ ನಮ್ಮ ಮನಸ್ಸಿಗೆ ಯಾವ ಚಿತ್ರ ಬರುತ್ತದೆ? ಬಡ್ಡಿವ್ಯಾಪಾರಿಗಳೆಂದರೆ ದುಷ್ಟರು, ಶೋಷಕರು, ಬಡವರ ಜಮೀನನ್ನು ಒತ್ತುವರಿಮಾಡಿಕೊಳ್ಳುವವರು, ಹಾಗೂ ನಾನಾ ರೀತಿಯಲ್ಲಿ ಹಿಂಸಿಸುವ ಹೃದಯಹೀನರು ಅನ್ನುವ ಚಿತ್ರ ನಮ್ಮ ಮನಸ್ಸಿನಲ್ಲಿ ಬಂದರೆ ಅದು ಆಶ್ಚರ್ಯವನ್ನು ಉಂಟುಮಾಡಬಾರದು. ನಾನು ಪುಟ್ಟವನಾಗಿದ್ದಾಗಿನಿಂದಲೂ ಓದಿದ ಸಾಹಿತ್ಯ, ಕಂಡ ಸಿನೇಮಾ ಹಾಗೂ ಬೆಳೆದು ನಿಂತಾಗ ಓದಿದ ಬೌದ್ಧಿಕ ಬರಹಗಳೆಲ್ಲ ಈ ಚಿತ್ರವನ್ನು ನಮ್ಮ ಮುಂದಿಡುವುದರಲ್ಲಿ ಸಫಲವಾಗಿದ್ದುವು. ಇದೂ ಸಾಲದೆಂಬಂತೆ, ಸರಕಾರ ಯಾವುದೇ ಯೋಜನೆಯನ್ನು ರೂಪಿಸುವಾಗ ನಮಗೆ "ಬಡವರನ್ನು ಸಾಲಮುಕ್ತರನ್ನಾಗಿ ಮಾಡುವುದೂ", "ಬಡ್ಡಿವ್ಯಾಪಾರಿಗಳ ಹಿಡಿತದಿಂದ ಬಿಡಿಸುವುದೂ" ಮುಖ್ಯ ಕಾರ್ಯಕ್ರಮಗಳಾಗಿ ಕಾಣುತ್ತಿದ್ದುವು.




ಕಾಬೂಲಿವಾಲಾನ ಕಥಾನಕ

ಕಾಬೂಲಿಗೆ ಕೆಲಸದ ಮೇಲೆ ಹೋಗಬೇಕು ಅನ್ನುವ ಮಾತು ಬಂದ ಕೂಡಲೇ ನನಗೆ ಎಲ್ಲೆಡೆಯಿಂದಲೂ ಎಲ್ಲ ರೀತಿಯ ಉಪದೇಶಗಳು ಬರತೊಡಗಿದುವು. ಮೂಲಭೂತವಾಗಿ ಎಲ್ಲರೂ ಹೇಳಿದ್ದು ಇಷ್ಟೇ - ಅಲ್ಲಿಗೆ ಹೋಗುವುದು ತುಂಬಾ ಅಪಾಯದಿಂದ ಕೂಡಿದ್ದು, ಯಾವಾಗ ಏನುಬೇಕಾದರೂ ಆಗಬಹುದು. ಹೀಗಿದ್ದರೂ ಕಳೆದ ನಾಲ್ಕುತಿಂಗಳಲ್ಲಿ ಎರಡು ಬಾರಿ ಅಲ್ಲಿಗೆ ಹೋಗಿಬಂದಿರುವೆ. ಮೊದಲ ಯಾತ್ರೆ ನಡೆದಾಗ ಅಲ್ಲಿನ ಚುನಾವಣೆಯ ತಯಾರಿ ನಡೆದಿತ್ತು. ಎರಡನೆಯ ಯಾತ್ರೆಯ ಸಮಯಕ್ಕೆ ಆ ಚುನಾವಣೆಯ ಫಲಿತಾಂಶ ಬರಬಹುದೆನ್ನುವ ಸುದ್ದಿಯಿತ್ತಾದರೂ, ಚುನಾವಣೆಯಲ್ಲಿ ನಡೆದಿರಬಹುದಾದ ಅವ್ಯವಹಾರದ ಕಾರಣವಾಗಿ ತನಿಖೆ ಇನ್ನೂ ನಡೆಯುತ್ತಿದೆ.





ಖರ್ಚಿನಿಂದ ಉಳಿತಾಯ: ಕೆಲವು ಮಾದರಿಗಳು

ಹಲವು ವರ್ಷಗಳ ನನ್ನ ಸ್ನೇಹಿತನೊಬ್ಬ ಹೀಗೆ ಹೇಳುತ್ತಿದ್ದುದುಂಟು: "ಈ ನಡುವೆ ನನಗೆ ದುಡ್ಡಿಗೆ ಬಹಳ ಕಷ್ಟವಾಗಿಬಿಟ್ಟಿದೆ. ಯಾಕೆಂದರೆ ನನ್ನ ಆದಾಯವೆಲ್ಲಾ ಸೇವಿಂಗ್ಸ್ ನಲ್ಲಿಯೇ ಖರ್ಚಾಗಿಬಿಡುತ್ತದೆ!" ಇದು ಒಂದು ರೀತಿಯಿಂದ ಯೋಚಿಸಬೇಕಾದ, ಗಹನವಾದ ವಿಚಾರ. ಉಳಿತಾಯ ಮಾಡಿದಷ್ಟೂ ಹಣವನ್ನು ನಾವು ಪುನಃ ಸಂಪಾದಿಸಿದ ಹಾಗೆಯೇ. ಇಷ್ಟಾದರೂ, ಬಡವರಿಗೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ ವಾಸವಾಗಿರುವವರಿಗೆ ಸಾಲ ಪಡೆವ ಮಾರ್ಗಗಳನ್ನು ಸರಕಾರಗಳೂ, ಖಾಸಗೀ ಸಂಸ್ಥೆಗಳೂ ಒದಗಿಸಿಕೊಡುತ್ತವೆಯೇ ಹೊರತು, ಉಳಿತಾಯ ಮಾಡುವ ಹೆಚ್ಚಿನ ಮಾರ್ಗಗಳನ್ನು ನಾವು ಕಂಡಿಲ್ಲ. ಮೈಕ್ರೋಫೈನಾನ್ಸ್ ವಿಷಯಕ್ಕೆ ಬಂದಾಗಲೂ ಸಾಲ ಕೊಡುವ ಅನೇಕ ಮಾದರಿಗಳು ನಮಗೆ ಸಿಗುತ್ತವಾದರೂ ’ಚಿಕ್ಕ ಉಳಿತಾಯದ’ ಮಾದರಿಗಳು ಕಡಿಮೆಯೇ. ಬಡವರಿಗೆ ಉಳಿತಾಯ ಮಾಡುವ ಕ್ಷಮತೆಯಿಲ್ಲವೆನ್ನುವ ಪ್ರತಿಪಾದನೆಯನ್ನು ನಾವು ಅಲ್ಲಲ್ಲಿ ಕಾಣುತ್ತೇವಾದರೂ, ಆ ವಾದದಲ್ಲಿ ಪೂರ್ಣ ಸತ್ಯವಿಲ್ಲ. ಬ್ಯಾಂಕುಗಳ ಮಾಹಿತಿಯನ್ನು ನಾವು ಗಮನಿಸಿದಾಗ ಅನೇಕ ಹಿಂದುಳಿದ ಪ್ರಾಂತಗಳಲ್ಲಿ ಬ್ಯಾಂಕುಗಳಲ್ಲಿ ಇರುವ ಠೇವಣಿಯ ಮೊತ್ತ ಆ ಶಾಖೆಗಳು ಕೊಡುವ ಸಾಲದ ಮೊತ್ತಕ್ಕಿಂತ ಐದಾರು ಪಟ್ಟು ಹೆಚ್ಚಿರುವುದನ್ನು ನಾವು ನೋಡಬಹುದು. ಹೀಗಾಗಿ ಬಿಹಾರ, ಉತ್ತರಪ್ರದೇಶ, ರಾಜಾಸ್ಥಾನದಂತಹ ರಾಜ್ಯಗಳ ಉಳಿತಾಯದ ಹಣ ಮುಂಬಯಿನ ದೊಡ್ಡ ವ್ಯಾಪಾರಗಳ ಮೂಲಧನವಾಗುತ್ತಿರುವುದನ್ನು ನಾವು ಕಾಣಬಹುದು.




ಚಿಕ್ಕಸಾಲ, ಬಡತನ, ಮತ್ತು ಮಹಿಳೆಯರು: ಒಂದು ಕಥನ

ಬಡನದ ನಿರ್ಮೂಲನೆಯ ವಿಷಯಕ್ಕೆ ಬಂದಾಗ ಯಾವರೀತಿಯ ಪ್ರಣಾಲಿಗಳು ಯಶಸ್ವಿಯಾಗಿರುತ್ತವೆ ಎಂದು ಹೇಳುವುದು ಕಷ್ಟದ ಮಾತು. ನಮ್ಮ ಯೋಚನೆ ಮೂಲಭೂತವಾಗಿ ಬಡವರ ಆದಾಯವನ್ನು ಹೆಚ್ಚಿಸುವದರತ್ತ ಇರಬೇಕೇ ಅಥವಾ ಅವರ ಜೀವನದಲ್ಲಿರಬಹುದಾದ ಏರುಪೇರುಗಳನ್ನು ಕಡಿಮೆ ಮಾಡುವತ್ತ ವ್ಯೂಹವನ್ನು ರಚಿಸಬೇಕೇ ಅನ್ನುವುದು ಒಂದು ರೀತಿಯ ದ್ವಂದ್ವದ ಮಾತೇ. [ಮೈಕ್ರೊಫೈನಾನ್ಸ್] ಚಿಕ್ಕಸಾಲದ ಕಾರ್ಯಕ್ರಮಗಳು ಬಡತನವನ್ನು ಕಡಿಮೆ ಮಾಡುವತ್ತ ಕೆಲಸ ಮಾಡುತ್ತವೆ ಎನ್ನುವ ಮಾತನ್ನ ಸಾಲ ಕೊಡುವ ಪ್ರತೀ ಸಂಸ್ಥೆಯೂ ಪ್ರತಿಪಾದಿಸುತ್ತಾ ಬಂದಿದ್ದರೂ ಈ ಕಾರ್ಯಕ್ರಮದಿಂದಾಗಿ ಬಡತನದ ಮೇಲೆ ಮೂಲಭೂತವಾದ ಪರಿಣಾಮವಾಗಿದೆಯೆಂದೂ, ಎಲ್ಲಕ್ಕಿಂತ ಇದೇ ಸಶಕ್ತ ಕಾರ್ಯಕ್ರಮವೆಂದೂ ಪ್ರಶ್ನಾತೀತವಾಗಿ ನಿರೂಪಿಸಲು ಯಾವುದೇ ಅಧ್ಯಯನಕ್ಕೆ ಸಾಧ್ಯವಾಗಿಲ್ಲ.





ಮಹಾತ್ಮಾ ಗಾಂಧಿ ಮತ್ತು ಮಾ ಬ್ಲಾ ಪೆನ್ನು

"ನನ್ನ ಜೀವನವೇ ನನ್ನ ಸಂದೇಶ" ಎಂದು ಮಹಾತ್ಮಾ ಗಾಂಧಿ ಹೇಳಿದ್ದು ಯಾವಗ ಅನ್ನುವುದನ್ನು ನಾವೆಲ್ಲರೂ ಮರೆತಿದ್ದರೂ ಅದನ್ನು ಆಗಾಗ ಪ್ರಯೋಗಿಸುವುದನ್ನು ಮಾತ್ರ ಮರೆಯುವುದಿಲ್ಲ. ಆದರೆ ಮಹಾತ್ಮ ಕೊಟ್ಟ ಸಂದೇಶವೇನು ಅದನ್ನು ನಾವು ಅರ್ಥೈಸುವುದು ಹೇಗೆ ಅನ್ನುವುದು ಮಾತ್ರ ಗಹನ ಚರ್ಚೆಯ ವಿಷಯವಾಗಬಹುದು. ಮಾಹಾತ್ಮ ಗಾಂಧಿಯನ್ನು ಓದಿಕೊಂಡಿದ್ದರೂ ಆತನ ಬಗ್ಗೆ ಪಾಂಡಿತ್ಯವಿಲ್ಲದ, ಯಾವ ಗಾಂಧೀವಾದದ ವಿಚರವನ್ನೂ ಪಾಲಿಸದ ನಾನು ಈ ವಿಷಯದಲ್ಲಿ ಹಠಾತ್ ಆಸಕ್ತಿ ಪಡೆಯುವುದಕ್ಕೆ ಕಾರಣವಿದೆ. ಈಚೆಗೆ ಪತ್ರಿಕೆಗಳಲ್ಲಿ ಮತ್ತು ನಗರದ ಹಲವೆಡೆ ಪೋಸ್ಟರುಗಳಲ್ಲಿ ಕಂಡ ಮಾ ಬ್ಲಾ [Mont Blanc] ಪೆನ್ನಿನ ಜಾಹೀರಾತನ್ನು ಕಂಡಾಗ ಈ ಪ್ರಶ್ನೆ ಸಹಜವಾಗಿ ನನ್ನಲ್ಲಿ ಉದ್ಭವವಾಯಿತು.





ಕನಸುಗಾರ ಯೂನಸ್ ಮತ್ತು ಲಾಭವಿಲ್ಲದ ವ್ಯಾಪಾರ

ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ತಮ್ಮ ಗ್ರಾಮೀಣ್ ಬ್ಯಾಂಕಿನ ಚಿಕ್ಕ ಸಾಲದ ಕಾರ್ಯಕ್ರಮದ ಮೂಲಕ ಖ್ಯಾತಿಯನ್ನು ಪಡೆದವರು. ಬಾಂಗ್ಲಾದೇಶದಂತಹ ಪುಟ್ಟ ದೇಶದಲ್ಲಿ ಬಡವರಿಗೆ ಅದರಲ್ಲೂ ಮುಖ್ಯವಾಗಿ ಹೆಂಗಸರಿಗೆ ವಿತ್ತೀಯ ಸೇವೆಗಳನ್ನೊದಗಿಸಿದ್ದೇ ಅಲ್ಲದೇ ಬ್ಯಾಂಕಿಂಗ್ ನಡೆಸಬಹುದಾದ ರೀತಿಯನ್ನೇ ಮೂಲಭೂತವಾಗಿ ಪ್ರಶ್ನಿಸಿ ಅದಕ್ಕೆ ಒಂದು ವಿಭಿನ್ನ ರೂಪವನ್ನು ಕೊಟ್ಟವರು.




ಭೂಗತ ಜಗತ್ತಿನ ಒಳನೋಟಗಳು

ಸುಧೀರ್ ವೆಂಕಟೇಶ್ ಅವರ ಗ್ಯಾಂಗ್ ಲೀಡರ್ ಫರ್ ಎ ಡೇ ಒಂದು ಕುತೂಹಲಕಾರಿ ಪುಸ್ತಕ. ನಿಜಕ್ಕೂ ಈ ಪುಸ್ತಕ ಗಂಭೀರ ಬರವಣಿಗೆ ಮತ್ತು ಜನಪ್ರಿಯ ಬರವಣಿಗೆಯ ಮಧ್ಯೆ ತೂರಾಡುತ್ತಾ, ಕಡೆಗೆ ಅನೇಕ ಪ್ರಶ್ನೆಗಳನ್ನು ಎಬ್ಬಿಸಿ ಅವುಗಳನ್ನು ಉತ್ತರಿಸಲು ಪ್ರಯತ್ನಿಸದೆಯೇ ನಿಂತುಬಿಡುತ್ತದೆ. ಹೀಗೆ ಎಲ್ಲಕ್ಕೂ ಉತ್ತರವನ್ನು ನೀಡುವುದು ಸುಧೀರ್ ಅವರ ಉದ್ದೇಶವೂ ಅಲ್ಲ, ಅದು ಸಾಧ್ಯವೂ ಆಗುವುದಿಲ್ಲ ಎನ್ನುವ ಭಾವನೆ ನಮಗೆ ಬರುವುದರಲ್ಲಿ ಯಾವ ಸೋಜಿಗವೂ ಇಲ್ಲ. ಆದರೂ ಈ ಪುಸ್ತಕವನ್ನು ನಾವು ಓದಿ ಚರ್ಚಿಸಬೇಕಾದ ಅವಶ್ಯಕತೆಯಿದೆ.





ತಿರುಮಲೇಶರ ಕಾವ್ಯ

ಕನ್ನಡದಲ್ಲಿ ಕಾವ್ಯದಲ್ಲಿ ನನಗೆ ಪ್ರಿಯರಾದ ಕವಿ ತಿರುಮಲೇಶ. ಅದಕ್ಕೆ ಕಾರಣವಿಷ್ಟೇ - ತಿರುಮಲೇಶ ಯಾವಾಗಲೂ ಏನಾದರೂ ಹೊಸತನ್ನು ಹೇಳುತ್ತಾರೆ, ಹೊಸರೀತಿಯಲ್ಲಿ ಹೇಳುತ್ತಾರೆ. ’ಮುಖವಾಡಗಳು’ ಸಂಕಲನದಿಂದ ’ಅವಧ’ದ ವರೆಗೆ ಬಂದಿರುವ ಅವರ ಐದು ಕವನ ಸಂಗ್ರಹಗಳಲ್ಲಿ ವಿಶೇಷ ವೈವಿಧ್ಯತೆಯಿದೆ. ಅಡಿಗರ ಜಾಡಿನಲ್ಲಿಯೇ ಕವಿತೆಗಳನ್ನು ಬರೆಯಲು ಪ್ರಾರಂಭಿಸಿದ ತಿರುಮಲೇಶರು ನಂತರ ತಮ್ಮದೇ ಪ್ರತ್ಯೇಕತೆಯನ್ನು ಶೋಧಿಸುತ್ತಾ ತಮ್ಮದೇ ಮಾರ್ಗವನ್ನು ಕಂಡುಕೊಂಡು ಮುಂದೆ ಸಾಗಿದರು.




ರುದ್ರಮಾತಾದ ರಾಮಜೀಭಾಯಿ

ನಾನು ಕೆಲಸ ಮಾಡುವ ಸಂಸ್ಥೆಯಲ್ಲಿ ಯಾವಾಗಲೂ ಕೇಳಿಬರುವ ಮಾತುಗಳು ವ್ಯಾಪಾರ, ವ್ಯಾಪಾರದ ಬೆಳವಣಿಗೆ, ಲಾಭಾಂಶ, ಗುರಿ-ಸಾಧನೆಗಳಿಗೆ ಸಂಬಂಧಿಸಿದ್ದು. ನಮ್ಮ ವಿದ್ಯಾರ್ಥಿಗಳೂ ಸಹ ಕಾರ್ಯಕ್ಷೇತ್ರದ ಧ್ಯೇಯ, ಅದನ್ನು ಆರ್ಜಿಸಲು ನಡೆಸಬೇಕಾದ ತಯಾರಿ, ಹಾಗೂ ಯಶಸ್ವೀ ವ್ಯಪಾರವನ್ನು ಸಮರ್ಥವಾಗಿ ನಡೆಸುವ ಮಾತನ್ನು ಆಡುತ್ತಿರುತ್ತಾರೆ. ಹೀಗಾಗಿ ಯಾವುದೇ ವಿಚಾರವನ್ನೋ-ವ್ಯಾಪಾರವನ್ನೋ ಪರಿಗಣಿಸುವಾಗ ಅದರ ಭವಿಷ್ಯವೇನು ಆ ವ್ಯಾಪಾರದಿಂದ ಬರುವ ಲಾಭಾಂಶವೇನು - ಹಾಗೂ ಅದನ್ನು ಸಾಧಿಸಲು ಹಾಕಿಕೊಳ್ಳಬೇಕಾದ ಯೋಜನೆಗಳೇನು ಎನ್ನುವ ವಿಚಾರಗಳನ್ನು ಮಥಿಸುತ್ತಲೇ ಇರುತ್ತೇವೆ. ಹೆಚ್ಚು ಕೆಲಸಕ್ಕೆ ಹೆಚ್ಚು ಹಣ - ಸಮರ್ಥ ಕೆಲಸಕ್ಕೆ ಕೊಡಬೇಕಾದ ಪ್ರೋತ್ಸಾಹ ಹೀಗೆಲ್ಲಾ ಮ್ಯಾನೇಜ್ಮೆಂಟಿನ ಥಿಯರಿಗಳನ್ನು ಒಗೆಯುತ್ತಿರುವ ವ್ಯಾಪಾರದ ಮಕ್ಕಾದಿಂದ ರುದ್ರಮಾತಾ ಅನ್ನುವ ಪುಟ್ಟ ಹೋಬಳಿಗೆ ಹೋದರೆ ಕಾಣಬಹುದಾದ ಸತ್ಯವೇ ಬೇರೆ ರೀತಿಯದ್ದು!




ವಾಡಾಗಳ ಅರಗಿನರಮನೆ

ನಿರುನಾ ಗ್ರಾಮದಲ್ಲಿ ಮಾತ್ರವಲ್ಲ ಇಡೀ ಕಛ್ ಪ್ರಾಂತದಲ್ಲೇ ನಿಜಕ್ಕೂ ಪ್ರತಿಭಾವಂತ ಕಲಾವಿದರಿದ್ದಾರೆ. ಆದರೆ ಈ ಬಾರಿ ನಾವು ರೋಗನ್ ಕಲೆಯಿಂದ ಮುಂದಕ್ಕೆ ಹೋಗಿ ಮರ ಮತ್ತು ಅರಗಿನ ಕಲಸ ಮಾಡುವ ’ವಾಡಾ’ಬುಡಕಟ್ಟಿನ ಜನಗಳ ಬಗ್ಗೆ ಯೋಚಿಸೋಣ. ವಾಡಾ ಬುಡಕಟ್ಟಿನವರು ಮೂಲಭೂತವಾಗಿ ಅಲೆಮಾರಿಗಳು, ಅರಣ್ಯ ಪ್ರಾಂತದಲ್ಲಿ ತಿರುಗಾಡುತ್ತಿರುವ ಈ ಬುಡಕಟ್ಟಿನ ಜನಾಂಗಕ್ಕೆ ಒಂದೇ ಜಾಗದಲ್ಲಿದ್ದು ಕೆಲಸ ಮಾಡುವುದು ತುಸು ಮುಜುಗರದ ಮಾತೇ. ಆದರೆ ಅರಣ್ಯ ಪ್ರದೇಶದಲ್ಲಿರುವುದರಿಂದ ಮರಗಳ ಬಗೆಗಿನ ಅವರ ಜ್ಞಾನ ಅದ್ಭುತವಾದದ್ದು. ಅವರ ಕರಕುಶಲತೆಯನ್ನು ನೋಡಿಯೇ ನಂಬಬೇಕು. ಆದರೆ ಕಲಾವಿದರಿಗೆ ತಮ್ಮ ಕಲೆಯ ಆಧಾರವಾಗಿಯೇ ಜೀವನ ಹೊರೆಯುವುದು ಸಾಧ್ಯವಿಲ್ಲ ಎನ್ನುವುದನ್ನು ನಿರೂಪಿಸಲೋ ಎಂಬಂತೆ ಇವರುಗಳು ಸೈಡ್ ಬಿಜನೆಸ್ ಆಗಿ ಸಾರಾಯಿ ತಯಾರಿಸುವ ಕೆಲಸವನ್ನೂ ಮಾಡುತ್ತಾರೆ.






ಸೆಪ್ಟೆಂಬರ್ ೫ ರ ವಿಚಾರಗಳು

ಸುಮಾರು ಹದಿನೈದು ವರ್ಷಕಾಲ ಮೇಷ್ಟರ ಕೆಲಸ ಮಾಡಿದಾಗ ಸಹಜವಾಗಿಯೇ ಒಂದು ಸೀನಿಯಾರಿಟಿ ಬಂದುಬಿಡುತ್ತದೆ. ಜೊತೆಗೆ "ನಾನು ಮೇಷ್ಟರ ಕೆಲಸ ಪ್ರಾರಂಭಮಾಡಿದಾಗ ವಿದ್ಯಾರ್ಥಿಗಳು ಎಷ್ಟು ಮರ್ಯಾದೆಯಿಂದ ಇದ್ದರು.. ಈಗ ಕಾಲ ಬದಲಾಗಿದೆ" ಎಂದು ಕರುಬುವ ಪರಿಸ್ಥಿತಿ ಉಂಟಾಗಿದ್ದರೆ ಆ ಮೇಷ್ಟರಿಗೆ ಮಧ್ಯವಯಸ್ಸು ದಾಟುತ್ತಿದೆ ಅನ್ನುವುದು ಖಾತರಿ. ಆದ್ದರಿಂದಲೇ ವಿದ್ಯಾರ್ಥಿಗಳಿಗೂ ಅವರ ಗುರುಗಳಿಗೂ ಇರುವ ಸಂಬಂಧ ಕಾಲಕ್ಕೆ ತಕ್ಕಂತೆ ಬದಲಾಗುತ್ತದೆ ಅನ್ನುವುದು ಎಷ್ಟು ನಿಜವೋ ವ್ಯಕ್ತಿಯ ಸಮಯ, ವಯಸ್ಸಿಗೆ ತಕ್ಕಂತೆ ಬದಲಾಗುತ್ತದೆ ಅನ್ನುವುದೂ ಅಷ್ಟೇ ನಿಜ. ಆದರೂ ನಾವುಗಳು "ಇಂದಿನ ವಿದ್ಯಾರ್ಥಿಗಳೇ ಬೇರೆ" ಎಂದು ಕರುಬುವುದನ್ನು ನಮ್ಮ ಭವ್ಯ ಚರಿತ್ರೆಯಲ್ಲಿ ಬದುಕುವುದನ್ನೂ ಬಿಡುವುದಿಲ್ಲ.





ರೋಗನ್ ಕಲೆ, ಎಷ್ಟು ಬೆಲೆ?

ಗುಜರಾತಿನ ಕಛ್ ಪ್ರಾಂತದಲ್ಲಿ ಆದ ೨೦೦೧ರ ಭೂಕಂಪದ ಕಂಪನಗಳು ಈಗ್ಗೆ ಕಡಿಮೆಯಾಗುತ್ತಾ ಬಂದಿದೆಯೇನೋ. ಭೂಕಂಪವಾದ ನಂತರ ವಿಶ್ವದ ವಿವಿಧೆಡೆಗಳಿಂದ ಕಛ್ ಪ್ರಾಂತಕ್ಕೆ ಅನೇಕ ರೀತಿಯ ಅನುದಾನಗಳು ಬಂದುವು. ನಾನಾ ರೀತಿಯ ಸಂಸ್ಥೆಗಳು ಭೂಕಂಪದ ತಕ್ಷಣದ ದಿನಗಳಲ್ಲಿ ಆ ಜಿಲ್ಲೆಗೆ ಬಂದು ಗ್ರಾಮಗಳನ್ನು ದತ್ತು ತೆಗೆದು ಆ ಪ್ರಾಂತದ ಪುನರ್ನಿರ್ಮಾಣಕ್ಕೆ ಕೈಕೈ ಕೂಡಿಸಿದುವು. ಆದರೆ ಎಂಟು ವರ್ಷಗಳ ನಂತರ ಆ ಪ್ರಾಂತದ ಜನ ಹೇಗೆ ಜೀವಿಸುತ್ತಿದ್ದಾರೆ? ಭೂಕಂಪದಿಂದ ತತ್ತರಿಸಿದ ಹಲವು ಸಮುದಾಯಗಳು ಈಗ ಜೀವನ ಹೇಗೆ ನಡೆಸುತ್ತಿವೆ? ಈ ಎಲ್ಲ ಸಹಾಯ ಮತ್ತು ಒಳ್ಳೆಯತನದ ಫಲಿತವಾಗಿ ಏನಾದರೂ ಆಗಿದೆಯೇ ಅನ್ನುವುದು ಕುತೂಹಲದ ಮಾತು.





ಮ್ಯಾಗ್ಸಸೇ ಪ್ರಶಸ್ತಿ ಪಡೆದ ದೀಪ್ ಜೋಶಿ ಮತ್ತು ಅವರು ಬೆಳೆಸಿದ ಪ್ರದಾನ್ ಸಂಸ್ಥೆ

ಏಶಿಯಾದ ನೊಬೆಲ್ ಎಂದೇ ಪ್ರಖ್ಯಾತವಾಗಿರುವ ರ್‍ಯಾಮನ್ ಮ್ಯಾಗಸಸೇ ಪುರಸ್ಕಾರವನ್ನು ಈ ಬಾರಿ ಪಡೆದವರಲ್ಲಿ ಭಾರತೀಯ ದೀಪ್ ಜೋಶಿ ಸಹ ಸೇರಿದ್ದಾರೆ. ಎಂದೂ ತಮ್ಮ ಧ್ವನಿಯನ್ನು ಏರಿಸದ, ಬೆಳ್ಳಿಗಡ್ಡಧಾರಿ, ಒಂದು ಥರದಲ್ಲಿ ಋಷಿಯ ಅವತಾರದಂತಿರುವ ಹಿರಿಯ ದೀಪ್‍ಗೆ ಈ ಪುರಸ್ಕಾರ ಬಂದದ್ದು ಸಹಜವೂ ಸಮರ್ಪಕವೂ ಆಗಿದೆ. ಯಾವ ಆರ್ಭಟವೂ ಇಲ್ಲದೇ, ಎಲ್ಲವನ್ನೂ ಒಂದು ಸ್ಪಷ್ಟ ಆಲೋಚನೆ, ದೂರದರ್ಶಿತ್ವದಿಂದ ಯೋಜನಾಬದ್ಧವಾಗಿ ಕಾರ್ಯರೂಪಕ್ಕಿಳಿಸಿರುವ ದೀಪ್‍ ಒಂದು ರೀತಿಯಿಂದ ಅಜಾತ ಶತ್ರು. ಅವರ ಬಗ್ಗೆ ಕುಹಕದ ಧ್ವನಿಯಾಗಲೀ, ಬೇಸರದ ಧ್ವನಿಯಾಗಲೀ ನಾನು ಈ ವರೆಗೆ ಕೇಳಿಯೇ ಇಲ್ಲ. ಆದರೆ ದೀಪ್ ಜೋಶಿಯ ಮಹತ್ವವನ್ನು ಅರ್ಥಮಾಡಿಕೊಳ್ಳಲು ನಾವು ಆತನ ಜೀವನದಲ್ಲಿ ಹಣಕಿಹಾಕದೇ ಆತನ ಕೆಲಸ ಮತ್ತು ಆತ ನಡೆಸಿದ ಸಂಸ್ಥೆಯ ನಿಲುವನ್ನು ಅರ್ಥಮಾಡಿಕೊಳ್ಳುವುದರಲ್ಲಿಯೇ ಮ್ಯಾಗಸಸೆಯ ಮಹತ್ವವೂ ಇದೆ.





ಒಳಿತು ಮಾಡಿ ಲಾಭ ಗಳಿಸುವ ವ್ಯಾಪಾರ: ಮೂರು ಮಾದರಿಗಳು

ಕೆಲವು ವ್ಯಾಪಾರಗಳು ನಾವು ದಿನೇ ದಿನೇ ನೋಡುವ ವ್ಯಾಪಾರಗಳಿಗಿಂತ ಭಿನ್ನವಾಗಿರುತ್ತವೆ. ವ್ಯಾಪಾರದ ಉದ್ದೇಶವೇನೋ ಲಾಭ ಗಳಿಸುವುದು. ಆದರೆ ಲಾಭ ಗಳಿಸುವ ಪ್ರಕ್ರಿಯೆಯಲ್ಲಿ ಒಳಿತನ್ನೂ ಮಾಡಲು ಸಾಧ್ಯವಾದರೆ? ಅನೇಕ ಬಾರಿ ಈ ವ್ಯಾಪಾರಗಳ ಉದ್ದೇಶ ನಿಜಕ್ಕೂ ಒಳಿತನ್ನು ಮಾಡಬೇಕೆನ್ನುವುದೇ ಅಥವಾ ಒಳ್ಳೆಯ ಹೆಸರು ಬರಲಿ ಅನ್ನುವ ಸೀಮಿತ ಉದ್ದೇಶದಿಂದ ಇಂಥ ವ್ಯಾಪಾರವನ್ನು ಮಾಡುತ್ತಿದ್ದಾರೆಯೇ ಅನ್ನುವ ವಿಷಯ ಗ್ರಹಿಸುವುದು ಕಷ್ಟವಾಗುತ್ತದೆ. ಬಡವರನ್ನು ಗ್ರಾಹಕರನ್ನಾಗಿ ನೋಡುವುದೂ ಒಂದು ವಿಕಾಸದ ಪರಿಕಲ್ಪನೆಯ ವಿಚಾರಧಾರೆಯ ಸೆಲೆ. ಮ್ಯಾನೇಜ್‍ಮೆಂಟ್ ಗುರು ಎನ್ನಿಸಿಕೊಳ್ಳುವ ಸಿ,ಕೆ.ಪ್ರಹ್ಲಾದ್ ಇದನ್ನು ಪಿರಮಿಡ್ ಕೆಳಸ್ಥರದಲ್ಲಿರುವ ಖಜಾನೆ ಎಂದು ಕರೆದು ಬಡವರನ್ನು ಅನೇಕ ದೊಡ್ಡ ಕಂಪನಿಗಳ ಗ್ರಾಹಕರನ್ನಾಗಿಸುವುದರಲ್ಲಿ ಸಫಲರಾಗಿದ್ದಾರೆ! ಆದರೆ ಲಾಭವನ್ನೂ ಒಳಿತನ್ನೂ ಮಾಡುವುದು ಎಷ್ಟರ ಮಟ್ಟಿಗೆ ಸಾಧ್ಯ?



ಮರೆತೇನೆಂದರು ಮರೆಯಲಿ ಹ್ಯಾಂಗ?

ನಮ್ಮ ದೇಶದಲ್ಲಿ ಮೈಕ್ರೋಫೈನಾನ್ಸ್ ಅಂದಕೂಡಲೇ ಕಾರಣವಿರಲೀ ಇಲ್ಲದಿರಲೀ ಮುಂಚೂಣಿಯಲ್ಲಿ ನಿಲ್ಲುವ ಹೆಸರು ಎಸ್.ಕೆ.ಎಸ್ ಎನ್ನುವ ಸಂಸ್ಥೆಯದ್ದು. ಹಾಗೂ ಅದರ ಸಂಸ್ಥಾಪಕ ಅನ್ನಿಸಿಕೊಳ್ಳುವ ವಿಕ್ರಂ ಆಕುಲಾರ ಹೆಸರು. ಎಸ್.ಕೆ.ಎಸ್ [ಸ್ವಯಂ ಕೃಷಿ ಸಂಘಂ] ಬಗ್ಗೆ ಮೊದಲಿಗೆ ಯೋಚಿಸಿದ್ದು ಅದನ್ನು ಕಾರ್ಯರೂಪಕ್ಕೆ ಇಳಿಸಿದ್ದು ವಿಕ್ರಂ ಅನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಪುಟ್ಟದಾಗಿ ಪ್ರಾರಂಭಿಸಿ ಇಂದು ದೇಶಾದ್ಯಂತ ಹಬ್ಬಿರುವ ಈ ಸಂಸ್ಥೆ ದೇಶದಲ್ಲಿಯೇ ಅತ್ಯಂತ ದೊಡ್ಡ ಮೈಕ್ರೊಫೈನಾನ್ಸ್ ಸಂಸ್ಥೆಯಾಗಿದೆ. ವಿಕ್ರಂಗೂ ಈ ಸಂಸ್ಥೆ ಸಾಕಷ್ಟು ಖ್ಯಾತಿಯನ್ನು ತಂದು ನೀಡಿದೆ. ಅಮೆರಿಕದಿಂದ ಎಲ್ಲವನ್ನೂ ಬಿಟ್ಟು ಭಾರತಕ್ಕೆ ಬಂದು ಬಡವರಿಗೆ ಸೇವೆಯನ್ನೊದಗಿಸುವ ಕೆಲಸ ಮಾಡುತ್ತಿರುವುದಕ್ಕೆ ಟೈಂ ಪತ್ರಿಕೆಯ ನೂರು ಜನರ ಯಾದಿಯಲ್ಲಿ, ವೀಕ್ ಪತ್ರಿಕೆಯ ೨೦ ಮಹತ್ವದ ಭಾರತೀಯರ ಯಾದಿಯಲ್ಲಿ ವಿಕ್ರಂ ಹೆಸರು ದಾಖಲಾದದ್ದಲ್ಲದೇ ದೊಡ್ಡ ವಾರ್ತಾವಾಹಿನಿಗಳಲ್ಲಿ ಆತನ ಸಂದರ್ಶನಗಳೂ ಬಂದಿವೆ. ಆದರೂ ವಿಕ್ರಂ ೧೯೯೭ರಲ್ಲಿ ಪ್ರಾರಂಭಿಸಿ, ಇಷ್ಟೆಲ್ಲಾ ಖ್ಯಾತಿಯನ್ನು ನೀಡಿದ ಸಂಸ್ಥೆಯಲ್ಲಿನ ತಮ್ಮ ಬಹುತೇಕ ಹೂಡಿಕೆಯನ್ನು ಕಳೆದ ವರ್ಷವಷ್ಟೇ ಮಾರಿ ಸಂಸ್ಥೆಯ ದಿನನಿತ್ಯದ ಕಾರ್ಯವನ್ನು ಹೊಸ ಹೂಡಿಕೆದಾರರಿಗೆ ಒಪ್ಪಿಸಿ ಕೈತೊಳೆದುಕೊಂಡರು.




ಆತ್ಮಹತ್ಯೆಗಳು: ರೈತರೇ ಏಕೆ?

ಒಂದು ವ್ಯಾಪಾರ ವಿಫಲಗೊಂಡಾಗ ಆ ವ್ಯಾಪಾರಿ ಏನು ಮಾಡಬಹುದು? ಸ್ವಲ್ಪ ಯೋಚಿಸಿ ನೋಡಿದರೆ ನಮಗೆ ಅನೇಕ ಉತ್ತರಗಳು ಕಾಣಸಿಗುತ್ತವೆ. ಆ ವ್ಯಾಪಾರಿ ಹಳೆಯ ವ್ಯಾಪಾರವನ್ನು ಮುಚ್ಚಿ ಹೊಸ ವ್ಯಾಪಾರಕ್ಕೆ ಕಾಲಿಡಬಹುದು, ವ್ಯಾಪಾರವನ್ನೇ ಬಿಟ್ಟು ಹೊಸ ನೌಕರಿಯನ್ನು ಹಿಡಿಯಬಹುದು, ವಿಫಲಗೊಂಡ ವ್ಯಾಪಾರವನ್ನು ಯಾರಿಗಾದರೂ ಮಾರಿ ಸುಮ್ಮನಾಗಬಹುದು, ಆದರೆ ವಿಫಲ ವ್ಯಾಪಾರಿಗಳು ತಮ್ಮ ಪ್ರಾಣ ಕಳೆದುಕೊಳ್ಳುವುದನ್ನು ನಾವು ನೋಡುವುದಿಲ್ಲ. ಎಲ್ಲೋ ಆಗಾಗ ವ್ಯಾಪಾರಿಗಳು ಸಾಲದ ಹೊರೆಯನ್ನು ತಾಳಲಾರದೇ ಪ್ರಾಣ ತೆಗೆದುಕೊಂಡದ್ದನ್ನು ನಾವು ಕಾಣುತ್ತೇವಾದರೂ ಈ ಆತ್ಮಹತ್ಯೆಗಳ ಸಂಖ್ಯೆ ರೈತರ ಆತ್ಮಹತ್ಯೆಗಳ ಸಂಖ್ಯೆಗೆ ಹೋಲಿಸಿದರೆ ತೀರಾ ಕಡಿಮೆಯೇ.







ಯಂತ್ರ-ಮಾನವ ದ್ವಂದ್ವ!

ಹಲವು ವರ್ಷಗಳ ಹಿಂದೆ ಕೆನಡಾದ ಕ್ಯುಬೆಕ್ ಪ್ರಾಂತಕ್ಕೆ ಅಲ್ಲಿನ ಸಹಕಾರ ಸಂಘಗಳನ್ನು ಅಧ್ಯಯನ ಮಾಡಲು ಹೋಗಿದ್ದೆ. ಆಗ ಫ್ರಾಂಮ್ಟನ್ ಅನ್ನುವ ಒಂದು ಪುಟ್ಟ ಹಳ್ಳಿಯಲ್ಲಿದ್ದ ಸಹಕಾರ ಸಂಘವನ್ನು ಭೇಟಿಮಾಡುವ ಅವಕಾಶ ಸಿಕ್ಕಿತ್ತು. ಆ ಹಳ್ಳಿಯ ಸಹಕಾರ ಸಂಘ [ಕೇಸ್ ಪಾಪ್ಯುಲೇರ್]ದ ಮ್ಯಾನೇಜರ್ ಒಂದು ರೀತಿಯ ದುಃಖದಲ್ಲಿದ್ದ. ನಮ್ಮ ದೇಶದ ಹಾಗೆಯೇ ಮೂರು ಮಜಲಿನ ಸಹಕಾರೀ ವ್ಯವಸ್ಥೆಯಲ್ಲಿ ಫ್ರಾಂಮ್ಟನ್ ಹಳ್ಳಿಸ್ಥರದ ಸಹಕಾರೀ ಸಂಸ್ಥೆ. ಅದರ ಮೇಲೆ ಹಲವು ಪ್ರಾಂತೀಯ ಸಂಸ್ಥೆಗಳ ಒಕ್ಕೂಟ ಹಾಗೂ ಆಮೇಲೆ ರಾಜ್ಯಸ್ಥರದ ಸಹಕಾರೀ ಬ್ಯಾಂಕು. ಎಲ್ಲವೂ ನಮ್ಮಂತೆಯೇ. ವ್ಯತ್ಯಾಸವಿಷ್ಟೇ - ಒಟ್ಟಾರೆ ಆ ಸಹಕಾರ ವ್ಯವಸ್ಥೆ ಹೆಚ್ಚಿನ ಖರ್ಚಿನದ್ದಾಗಿದ್ದು ಲಾಭವನ್ನು ಮಿಕ್ಕ ಬ್ಯಾಂಕುಗಳಷ್ಟು ಆರ್ಜಿಸುತ್ತಿರಲಿಲ್ಲ. ಅದಕ್ಕಾಗಿ ವ್ಯವಸ್ಥೆಯಲ್ಲಿ ಆಂತರಿಕ ಅಧ್ಯಯನಗಳೂ ರಣನೀತಿಗಳೂ ತಯಾರಾಗತೊಡಗಿದ್ದುವು.




ನಾ ಹೇಗೆ ಬಡವನು ನಾ ಹೇಗೆ ಪರದೇಶಿ..

ಅಭಿವೃದ್ಧಿಯ ಮಾತನಾಡುವಾಗಲೆಲ್ಲಾ ಬಡತನದ ರೇಖೆಯ ಮಾತು ಸಹಜವಾಗಿ ಬರುತ್ತದೆ. ಬಡತನದ ರೇಖೆಯ ಮೇಲಿರುವ ಜನಸಂಖ್ಯೆ ಪ್ರಮಾಣ ಅಭಿವೃದ್ಧಿಯ ಅನೇಕ ಮಾಪಕಗಳಲ್ಲಿ ಒಂದು. ಭಾರತದಲ್ಲಿ ಈ ರೇಖೆಯನ್ನು ನಿರ್ಧರಿಸಲು ಕ್ಯಾಲೋರಿಫಿಕ್ ವ್ಯಾಲ್ಯೂ ಆಧಾರದ ಮೇಲೆ [ಅಂದರೆ ಇಂತಿಷ್ಟು ಶಕ್ತಿಯನ್ನು ಆರ್ಜಿಸಲು ಬೇಕಾದ ಆಹಾರವನ್ನು ಕೊಳ್ಳಲು ಆಗುವ ಖರ್ಚಿನ ಆಧಾರದ ಮೇಲೆ] ವಾರ್ಷಿಕ ಆದಾಯವನ್ನು ನಿಗದಿ ಮಾಡಲಾಗಿದೆ. ಪ್ರತೀ ವರ್ಷ ಸರಕಾರ ಇಂತಿಷ್ಟು ಮಂದಿ ಬಡತನದ ರೇಖೆಯನ್ನು ಉಲ್ಲಂಘಿಸಿದ್ದಾರೆಂದು ಘೋಷಿಸಿ ತನ್ನ ಬೆನ್ನನ್ನು ತಟ್ಟಿಕೊಳ್ಳುತ್ತದೆ. ಸರಕಾರದ ಯಾವುದೇ ಅಂಕಿ ಅಂಶಗಳನ್ನು ಅನುಮಾನದಿಂದ ನೋಡುವ ಜನ ಈ ಮಾಪನವನ್ನು ಸಹಜವಾಗಿ ಪ್ರಶ್ನಿಸುತ್ತಾರೆ. ವಿಶ್ವದಾದ್ಯಂತ ಬಡತನವನ್ನು ಅಳೆಯಲು [ಸ್ಥಳೀಯ ಹಣದ ಖರೀದಿಯ ಶಕ್ತಿಯನುಸಾರ] ದಿನಕ್ಕೊಂದು ಡಾಲರ್ ಸಮಾನವಾದ ಆದಾಯವನ್ನು ಮಾಪಕವನ್ನಾಗಿ ಇಟ್ಟುಕೊಳ್ಳಲಾಗಿದೆ. ಈಗೀಗ ಇದನ್ನು ಎರಡು ಹಂತಗಳಲ್ಲಿ ಅಳೆಯುವುದೂ ಉಂಟು. ದಿನಕ್ಕೊಂದು ಡಾಲರ್‌ಗಿಂತ ಕಡಿಮೆ ಆರ್ಜಿಸುವ ಅತೀ-ಬಡವರು ಹಾಗೂ ಎರಡು ಡಾಲರ್‌ವರೆಗೆ ಆದಾಯವಿರುವ ಬಡವರು.






ವಲಸೆ ಕಾರ್ಮಿಕರ ಹಣಪಾವತಿಯ ತಂತ್ರಜ್ಞಾನ

ಕಳೆದ ವರ್ಷ ನಾವುಗಳು ಕ್ಯಾತದೇವರಗುಡಿಯ ಅರಣ್ಯದ ಪ್ರಾಂತಕ್ಕೆ ಪ್ರವಾಸ ಹೋದಾಗ ಜಂಗಲ್ ಲಾಡ್ಜಸ್‍ನ ಗೈಡ್ ಕಂ ಡ್ರೈವರ್ ಹರ್ ಬಹದ್ದೂರ್ ಥಾಪಾ ಜೊತೆ ಮಾತು ಬೆಳೆಸಿದ್ದೆ. ಥಾಪಾ ಹಿಮಾಚಲ ಪ್ರದೇಶದವನು, ಭಾರತೀಯ ಸೇನೆಯಲ್ಲಿದ್ದು ಯಾವುದೋ ಲಕ್-ಬೈ-ಚಾನ್ಸ್ ಆಗಿ ಇಲ್ಲಿ ಕೆಲಸ ಸಿಕ್ಕಿತ್ತಂತೆ. ದೂರದ ಹಿಮಾಚಲಕ್ಕೆ ಅವನು ಹಣ ಪಾವತಿಸುವುದು ಹೇಗೆ ಅನ್ನುವ ಕುತೂಹಲ ನನ್ನಲ್ಲಿತ್ತು. ವಲೆಸೆ ಹೋಗುವ ಕೆಲಸಗಾರರಿಗೆ ಇದು ದೊಡ್ಡ ಸವಾಲೆನ್ನುವುದನ್ನು ನಾವುಗಳು ಅನೇಕ ಅಧ್ಯಯನಗಳಲ್ಲಿ ಕಂಡುಕೊಂಡಿದ್ದೆವು. ಸಾಮಾನ್ಯವಾಗಿ ವಲೆಸೆ ಹೋಗುವ ಕೆಲಸಗಾರರು ತಮ್ಮ ಮುಕದ್ದಂ [ಮೇಸ್ತ್ರಿಗಳ] ಮೂಲಕವೇ ಎಲ್ಲ ವ್ಯವಹಾರವನ್ನೂ ಮಾಡುತ್ತಾರೆ. ಆದರೆ ಮುಕದ್ದಂ ಇಲ್ಲದ ಕೆಲಸದಲ್ಲಿರುವ ಈತ ಕರ್ನಾಟಕದಲ್ಲಿ ಸಂಪಾದಿಸುವ ಹಣವನ್ನು ಹಿಮಾಚಲಕ್ಕೆ ತಲುಪಿಸುವುದೂ ಅಥವಾ ಸೂರತ್‍ನ ವಜ್ರದ ಯೂನಿಟ್ಟುಗಳಲ್ಲಿ ಕೆಲಸ ಮಾಡುವ ಒಡಿಯಾ ಕೆಲಸಗಾರರು ಒರಿಸ್ಸಾಗೆ ಹಣ ತಲುಪಿಸುವುದೂ ಒಂದು ಸವಾಲೇ ಆಗಿತ್ತು. ಕಾರಣಗಳು ಅನೇಕ.



ಗೋದಾವರಿಯ ಅಕ್ಷರಸ್ಥರೂ, ಧರ್ಮಪುರಿಯ ವಿದ್ಯಾವಂತರೂ..

ಈಚೆಗೆ ಒಂದು ಅಧ್ಯಯನಕ್ಕಾಗಿ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆ ಮತ್ತು ತಮಿಳುನಾಡಿನ ಧರ್ಮಪುರಿ ಜಿಲ್ಲೆಗಳಿಂದ ನಾವು ಮಾಹಿತಿಯನ್ನು ಸಂಗ್ರಹಿಸಿದೆವು. ಪಶ್ಚಿಮ ಗೋದಾವರಿ ಜಿಲ್ಲೆ ಎಲ್ಲ ರೀತಿಯಿಂದಲೂ ಧರ್ಮಪುರಿಗಿಂತ ಹೆಚ್ಚು ವಿಕಾಸ ಕಂಡಿರುವ ಜಿಲ್ಲೆ ಅನ್ನುವುದರಲ್ಲಿ ಅನುಮಾನವಿಲ್ಲ. ಇಲ್ಲಿ ಮಳೆಯೂ ಧರ್ಮಪುರಿಗಿಂತ ಹೆಚ್ಚು. ಪಶ್ಚಿಮ ಗೋದಾವರಿಯಲ್ಲಿ ೮೦ ಪ್ರತಿಶತ ಕೃಷಿ ಭೂಮಿಗೆ ನೀರಾವರಿಯ ವ್ಯವಸ್ಥೆ ಇದ್ದರೆ ಧರ್ಮಪುರಿಯಲ್ಲಿ ಅದು ಅರ್ಧಕ್ಕಿಂತಲೂ ಕಡಿಮೆ. ಸೆನ್ಸಸ್ ಮತ್ತು ಜಿಲ್ಲಾ ಮಾಹಿತಿಯನ್ನು ಗಮನಿಸಿದಾಗ ನಮಗೆ ಒಟ್ಟಾರೆ ಎಲ್ಲ ವಿಭಾಗಗಳಲ್ಲೂ ಧರ್ಮಪುರಿ ಹಿಂದುಳಿದಿರುವುದು ಕಾಣಿಸುತ್ತದೆ. ಉದಾಹರಣೆಗೆ, ಆರುವರುಷಕ್ಕೆ ಕಡಿಮೆ ವಯಸ್ಸಿನ ಮಕ್ಕಳ ಮಾಹಿತಿಯನ್ನು ಕಂಡಾಗ ಪ್ರತಿ ಸಾವಿರ ಗಂಡು ಮಕ್ಕಳಿಗೆ ಕೇವಲ ೮೩೩ ಹೆಣ್ಣು ಮಕ್ಕಳಿದ್ದಾರೆ. ಹಾಗಾಗಿ ಈ ಜಿಲ್ಲೆಯಲ್ಲಿ ಭ್ರೂಣ ಹತ್ಯೆ ಆಗುತ್ತಿರಬಹುದಾದ ಸಾಧ್ಯತೆಯನ್ನೂ ನಾವುಗಳು ತಳ್ಳಿಹಾಕುವಂತಿಲ್ಲ.



ಎರಡು ವರ್ಷಗಳ ನಂತರ... ಮುಚ್ಚಿದ ಪ್ರೀಮಿಯರ್

ವಿಸ್ತರಿಸಿಕೊಳ್ಳಲು ಸಹಾಯಕ ಕೋಚಿಂಗಿಗೆ ಹೋಗುತ್ತಿದ್ದಾಗ ಒಂದು ದಿನ ಅಲ್ಲಿ ಪಾಠ ಮಾಡುತ್ತಿದ್ದ ವಿಶ್ವನಾಥ್ ಹೇಳಿದ್ದರು: "ನಮ್ಮ ವಿತ್ತೀಯ ನಿರ್ಮತಿಯ ತಲ್ಲಣಗಳನ್ನು ಹೆಚ್ಚು ಅರ್ಥಮಾಡಿಕೊಳ್ಳಬೇಕಾದರೆ, ನೀನು ಶೂಮೇಕರನ ಸ್ಮಾಲ್ ಇಸ್ ಬ್ಯೂಟಿಫುಲ್ ಓದು. ನಾನು ಪ್ರೀಮಿಯರ್ ಬುಕ್ ಷಾಪಿನ ಶಾನ್‌ಭಾಗಿಗೆ ಹೇಳಿದ್ದೇನೆ. ನಮ್ಮವರಿಗೆ ಆತ ೧೫% ರಿಯಾಯಿತಿಯಲ್ಲಿ ಪುಸ್ತಕಗಳನ್ನು ಮಾರುತ್ತಾರೆ". ಹೀಗೆ ಸ್ಮಾಲ್ ಇಸ್ ಬ್ಯೂಟಿಫುಲ್ ಅನ್ನುವ ಪುಸ್ತಕವನ್ನು ಹುಡುಕಿ ಹೊರಟ ನನಗೆ ಆ ಪುಸ್ತಕದ ಟೈಟಲ್ಲಿನ ಅರ್ಥದ ಪದರ-ಮಜಲುಗಳು ಶಾನಭಾಗರ ಪ್ರೀಮಿಯರ್ ಬುಕ್ ಷಾಪ್ ನೋಡಿದಾಗ ತಟ್ಟಿತು. ಪುಟ್ಟ ಅಂಗಡಿಯಲ್ಲಿ ಎಷ್ಟೊಂದು ಭಂಡಾರವನ್ನು ಅಡಕಮಾಡಿ ಇಡಬಹುದು ಅನ್ನುವುದಕ್ಕೆ ಪ್ರೀಮಿಯರ್ ಸಂಕೇತವಾಯಿತು. ಆದರೆ ಅದನ್ನು ಬ್ಯೂಟಿಫುಲ್ ಎಂದು ಕರೆಯುವುದಕ್ಕೆ ಮಾತ್ರ ಸಾಧ್ಯವಾಗಿರಲಿಲ್ಲ. ಅದರ ಆತ್ಮ ಬ್ಯೂಟಿಫುಲ್ ಆದರೂ ಆ ಅಂಗಡಿಯಲ್ಲಿ ಪುಸ್ತಕಗಳನ್ನು ಆಯುವುದಕ್ಕೆ ಪಳಗಿದ ಕೈಗಳೇ  ಬೇಕಾಗಿದ್ದುವು.





ಸೊರಗಿದ ಪ್ರೀಮಿಯರ್....

ಅಹಮದಾಬಾದಿನಲ್ಲಿ ನನಗೆ ಸಿಗದಿರುವ ಹಾಗೂ ತಹತಹಿಸುವ ಅಂಶ ಒಂದು ಒಳ್ಳೆಯ ಪುಸ್ತಕದಂಗಡಿ ಇಲ್ಲದ್ದು. ಬೆಂಗಳೂರಿನಿಂದ ಬಂದಿರುವ ನನಗೆ ಎಂ.ಜಿ ರಸ್ತೆಯ ಆಸುಪಾಸಿನಲ್ಲಿರುವ ಹೊಸ-ಹಳೆಯ ಪುಸ್ತಕಗಳನ್ನು ಮಾರುವ ಅದ್ಭುತ ಪುಸ್ತಕದಂಗಡಿಗಳು, ಮೆಜೆಸ್ಟಿಕ್ಕಿನಲ್ಲಿ ಸಪ್ನಾ, ಕನ್ನಡಪುಸ್ತಕಗಳಿಗೆ ಸಾಹಿತ್ಯ ಭಂಡಾರ, ಗಾಂಧಿಬಜಾರಿನ ಅಂಕಿತಾ ಹಾಗೂ ರೆಸಿಡೆಂನ್ಷಿಯಲ್ ಪ್ರದೇಶಗಳಲ್ಲೂ ಇರುವ ಜಯನಗರದ ನಾಗಶ್ರೀ, ಪ್ರಿಸಂ ಎಲ್ಲವನ್ನೂ ಪರಿಗಣಿಸಿದಾಗ ಅಹಮದಾಬಾದಿನ ಬಗ್ಗೆ ಅಸಮಾಧಾನವಾಗುವುದು ಸಹಜವೇ. ಮೊದಲಬಾರಿಗೆ ನಾನು ವಿದ್ಯಾರ್ಥಿಯಾಗಿ ಗುಜರಾತ್ ಪ್ರವೇಶಮಾಡಿದಾಗ ಪುಟ್ಟ ನಗರವಾದ ಆಣಂದದ ಸ್ಟೇಷನ್ ರೋಡಿನಲ್ಲಿ ನಡೆದಾಡುತ್ತಾ "ಬುಕ್ಸ್" ಎಂದು ಸ್ವಾಗತಿಸುತ್ತಿದ್ದ ದೊಡ್ಡ ಫಲಕವನ್ನು ನೋಡಿ ವಿಚಿತ್ರ ಪುಳಕದಿಂದ ಅದರ ಸಮೀಪಕ್ಕೆ ಹೋದರೆ ನನಗೆ ಕಂಡದ್ದು ಕೆಂಪು ಬಣ್ಣದ "ಚೋಪಡಿ" ಎಂದು ಕರವ ಲೆಕ್ಕಪತ್ರದ ಲೆಡ್ಜರುಗಳು. ಈ ಚೋಪಡಿಗಳಲ್ಲಿ ಕಾಣುವುದು ಯಾವ ಆಯಕರ ಆಫೀಸರನೂ ಅರ್ಥೈಸಲು ಸಾಧ್ಯವಾಗದಂತಹ ಮೋಡಿ ಅಕ್ಷರಗಳ ಮಾಯಾಲೋಕ.

ಮುಂದೆ..............


ಗುರುಪ್ರಸಾದ್ ಕಾಗಿನೆಲೆ - ಈ ವರೆಗೆ

ಈಚೆಗಷ್ಟೇ ನಾನು ಗುರುವಿನ ಶಕುಂತಳಾ ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ಹಾಕಿಕೊಂಡಿದ್ದ ಟಿಪ್ಪಣಿಗಳಾಧಾರದ ಮೇಲೆ ಅವರ ಬಗೆಗೆ ಬರೆದಿದ್ದೆ. ಆ ಬರಹದ ಕಡೆಯ ಸಾಲುಗಳಿಂದ ಅವರ ಈ ವರೆಗಿನ ಬರವಣಿಗೆಯ ಅವಲೋಕನ ಮಾಡುತ್ತೇನೆ. 

"ಗುರುಪ್ರಸದ್ ನನ್ನ ಮಟ್ಟಿಗೆ ಕನ್ನಡದಲ್ಲಿ ಬರೆಯುತ್ತಿರುವ ಸಮಕಾಲೀನರಲ್ಲಿ ಒಂದು ಭಿನ್ನ ಧ್ವನಿ ಅನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಭಿನ್ನತೆಯೊಂದೇ ಅವರ ಗುಣವಲ್ಲ. ಅವರಿಗೆ ಕಥೆ ಕಟ್ಟುವ ಕಲೆ ಕೈವಶವಾಗಿದೆ. ಅವರ ಸಂದರ್ಭಕ್ಕೆ ತಕ್ಕಂತೆ ಮಾನವ ವ್ಯಾಪಾರಗಳ ಬಗ್ಗೆ ಅದರ ಅರ್ಥಹೀನತೆ-ಅರ್ಥವಂತಿಕೆಯ ಬಗ್ಗೆ ಅವರು ಸಮರ್ಥವಾಗಿ ಬರೆಯಬಲ್ಲರು. ಗ್ಲೋಬಲ್ ಆಗುತ್ತಿರುವ ನಮ್ಮ ಸಮಾಜದ ತಲ್ಲಣಗಳನ್ನು ಅವರು ಸೂಕ್ಷ್ಮವಾಗಿ ಗ್ರಹಿಸಬಲ್ಲರು. ಕನ್ನಡ ಲೋಕ ಅವರನ್ನು ಉತ್ಸಾಹದಿಂದ ಬರಮಾಡಿಕೊಂದು ಪ್ರೋತ್ಸಾಹಿಲಿ ಅನ್ನುವ ಆಶಯ ನನ್ನದು. ಈ ಮುಖ್ಯವಾದ ಧ್ವನಿಗೆ ಸಿಗಬೇಕಾದ ಪ್ರಾಮುಖ್ಯತೆ ಸಿಗಲೆಂದು ಹಾರೈಸುತ್ತೇನೆ."

ಹೀಗೆ ಬರೆಯುತ್ತಿದ್ದಾಗ ನನಗೆ ಗುರುವಿನ ಮಿಕ್ಕ ಕೃತಿಗಳ ಪರಿಚಯವಿರಲಿಲ್ಲ. ಅವರ ಕಾದಂಬರಿ ಬಿಳಿಯ ಚಾದರ ಬಿಡುಗಡೆಯಾಗಿರಲಿಲ್ಲ ಹಾಗೂ ಅವರ ಎರಡೂ ಪುಸ್ತಕಗಳಾದ ನಿರ್ಗುಣ ಮತ್ತು ಪ್ರಬಂಧಗಳ ಸಂಕಲನವಾದ ವೈದ್ಯ-ಮತ್ತೊಬ್ಬ ನಾನು ಓದಿರಲಿಲ್ಲ. ಈಗ ನಾನು ಅವುಗಳೆಲ್ಲವನ್ನೂ ಓದಿದ್ದೇನೆ. ಓದಿದ ನಂತರವೂ ನನ್ನ ಮೇಲಿನ ಅಭಿಪ್ರಾಯದಲ್ಲಿ ಮೂಲಭೂತ ಬದಲಾವಣೆಯೇನೂ ಆಗಿಲ್ಲ. ಆದರೂ ಒಬ್ಬ ಲೇಖಕನ ಕಾಳಜಿಗಳು ಹಾಗೂ ಬರಹಗಾರ ತೆರೆದುಕೊಳ್ಳುವ ರೀತಿಯಬಗ್ಗೆ ಕೆಲ ಒಳನೋಟಗಳನ್ನು ನಾನು ಈ ಹೊಸ ಓದಿನ ಮೂಲಕ ಪಡೆಯಲು ಪ್ರಯತ್ನಿಸುತ್ತಿದ್ದೇನೆ. 




ಚಿಕ್ಕಸಾಲಕ್ಕೆ ವಲಸೆಬಂದ ವಿಕಾಸವಾದಿಗಳು

ಎರಡು ದಶಕಗಳ ಕೆಳಗೆ ಮೈಕ್ರೊಫೈನಾನ್ಸ್ [ಚಿಕ್ಕಸಾಲ]ದ ಮೊದಲ ಅಲೆ ಪ್ರಾರಂಭವಾಯಿತು ಎನ್ನಬಹುದು. ಚಿಕ್ಕಸಾಲವೆಂದರೆ ಸ್ವ-ಸಹಾಯ ಗುಂಪುಗಳೆಂದು ನಾವುಗಳು ಸರಳವಾಗಿ ಅರ್ಥ ಮಾಡಿಕೊಳ್ಳುತ್ತಿದ್ದೆವು. ನಮ್ಮ ದೇಶಕ್ಕೆ ನಮ್ಮದೇ ಆದ ಸಹಕಾರೀ ತತ್ವದ ಮೇಲೆ ಆಧಾರಿತವಾದ ಮಹಿಳೆಯರಿಂದಲೇ ಚಲಾಯಿಸಲ್ಪಡುತ್ತಿದ್ದ ಲಕ್ಷಾಂತರ ಗುಂಪುಗಳು ಹೆಚ್ಚಾಗಿ ದಕ್ಷಿಣ ಭಾರತದಲ್ಲಿದ್ದುವು. ಈ ಗುಂಪುಗಳ ಜೊತೆಗೆ ಅಹಮದಾಬಾದಿನ ಸೇವಾ ಬ್ಯಾಂಕನ್ನು ಚಿಕ್ಕಸಾಲಿಗರೆಂದು ಕರೆಯುವುದು ಪ್ರತೀತಿಯಾಗಿತ್ತು. ಈ ಗುಂಪುಗಳನ್ನು ಆಯೋಜಿಸುತ್ತಿದ್ದ ಪ್ರದಾನ್, ಮೈರಾಡಾ, ಧಾನ್ ಫೌಂಡೇಷನ್, ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮೀಣ ವಿಕಾಸ ವಿಭಾಗದಂತಹ ಸ್ವಯಂ ಸೇವಾ ಸಂಸ್ಥೆಗಳು, ತಮ್ಮದೇ ಮಹಿಳಾ ಸೇವಾ ಸಹಕಾರಿ ಬ್ಯಾಂಕಿನ ಮೂಲಕ ಚಿಕ್ಕಸಾಲವನ್ನು ನೀಡುತ್ತಿದ್ದ ಅಹಮದಾಬಾದಿನ ಸೇವಾ ಈ ಎಲ್ಲ ಸಂಸ್ಥೆಗಳಿಗೂ ತಾವು ನಡೆಸುತ್ತಿದ್ದ ವಿಕಾಸ ಕಾರ್ಯದ ಒಂದು ಭಾಗವಾಗಿ, ಬ್ಯಾಂಕುಗಳು ನೀಡುವ ವಿತ್ತೀಯ ಸೇವೆಗೆ ಪೂರಕವಾಗಿ, ಹಾಗೂ ಬ್ಯಾಂಕುಗಳು ಇಂಥ ಸೇವೆಗಳನ್ನು ಬಡವರಿಗೆ ನೀಡದಿದ್ದಾಗ ಅವುಗಳಿಗೆ ಸವಾಲಾಗಿ ಈ ಸಂಸ್ಥೆಗಳು ಕೆಲಸ ಮಾಡುತ್ತಿದ್ದುವು.



ಬುದ್ಧಿವಂತಿಕೆಯ ಗೆರೆ

ಒಂದು ಸ್ವಯಂ ಸೇವಾ ಸಂಸ್ಥೆ ಯಾವ ಕೆಲಸವನ್ನು ಎಷ್ಟು ಮಾಡಬೇಕು - ಎಲ್ಲಿ ಅದನ್ನು ನಿಲ್ಲಿಸಬೇಕು ಅನ್ನುವುದು ಕುತೂಹಲದ ವಿಷಯ. ಇದು ನಮ್ಮ ಗ್ರಾಮೀಣ ಪ್ರಾಂತದಲ್ಲಿ ಕೆಲಸ ಮಾಡುತ್ತಿರುವ ಒಳ್ಳೆಯ ಸಂಸ್ಥೆಗಳ ಮುಂದೆ ಆಗಾಗ ತಲೆಯೆತ್ತಿ ನಿಲ್ಲುವ ದ್ವಂದ್ವ. ಉತ್ತರ ಭಾರತದ ಅನೇಕ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿರುವ ಪ್ರದಾನ್ [ಪ್ರೊಫೆಷನಲ್ ಅಸಿಸ್ಟೆಂಸ್ ಫರ್ ಡೆವೆಲಪ್ಮೆಂಟ್ ಆಕ್ಷನ್] ಸಂಸ್ಥೆಯ ಕಾರ್ಯಕಲಾಪಗಳು ಹೀಗೆ ಗ್ರಾಮೀಣ ಬಡವರ ಬದುಕಿನ ಅನೇಕ ಮಜಲುಗಳನ್ನು ಮುಟ್ಟಿ ಹೋಗುತ್ತದೆ. ಕೆಲ ವರ್ಷಗಳ ಹಿಂದೆ ನಾನು ಝಾರ್ಖಂಡ್ ರಾಜ್ಯದ ಗೊಡ್ಡಾ ಜಿಲ್ಲೆಗೆ ಅವರ ಕೆಲಸವನ್ನು ನೋಡಲು ಹೋಗಿದ್ದೆ. ಅಲ್ಲಿ ಕೆಲಸ ಪ್ರಾರಂಭವಾದದ್ದು ಸ್ವ-ಸಹಾಯ ಗುಂಪುಗಳನ್ನು ಏರ್ಪಾಟು ಮಾಡಿ ಆ ಮೂಲಕ ಉಳಿತಾಯ-ಸಾಲದ ಚಟುವಟಿಕೆಯನ್ನು ತಮ್ಮ ನಡುವೆಯೇ ನಡೆಸಿಕೊಳ್ಳುವುದರ ಮೂಲಕ. ಆದರೆ ಬಡವರು ಕೇವಲ ಉಳಿತಾಯ ಮಾಡುವುದು - ಸುಲಭವಾಗಿ ಸಾಲ ಪಡೆಯುವುದು - ಈ ಎರಡರಿಂದಾಗಿಯೇ ಅಭಿವೃದ್ಧಿಯಾಗುತ್ತದೆ ಎಂದು ನಾವು ನಂಬುವುದಕ್ಕೆ ಆಗುವುದಿಲ್ಲ. ಏಕೆಂದರೆ ಹೀಗೆ ಸಾಲವಾಗಿ ಪಡೆದ ಹಣವನ್ನು ಹೇಗೆ ಉಪಯೋಗಿಸಬೇಕು ಅದರಿಂದ ಹೇಗೆ ಹೆಚ್ಚು ಆದಾಯ ಪಡೆಯಬೇಕು ಅನ್ನುವ ಪ್ರಶ್ನೆಯನ್ನೂ ನಾವು ಎದುರಿಸಬೇಕಾಗುತ್ತದೆ. ಮೈಕ್ರೋಫೈನಾನ್ಸ್ [ಚಿಕ್ಕಸಾಲ] ದಿಂದ ಲೈವ್ಲಿಹುಡ್ ಫೈನಾನ್ಸ್ [ಜೀವನೋಪಾಧಿಯ ಸಾಲ]ಕ್ಕೆ ಬೆಳೆಯುವ ಬಗ್ಗೆ ಸಾಕಷ್ಟು ಚರ್ಚೆ ಈಚಿನ ದಿನಗಳಲ್ಲಿ ನಡೆಯುತ್ತಿದೆ.




ವೈಟ್ ಹೊಟೇಲ್: ಕೋಣೆಗೊಬ್ಬ ಕಲಾವಿದ - ಕಲಾವಿದನಿಗೊಂದು ಕೋಣೆ.

ಛಳಿಗಾಲದಲ್ಲಿ ನಡುಗಾಡುತ್ತಾ ಇಲ್ಲಿಗೆ ಬಂದು ಪಾಠಮಾಡುವುದು ಗಮ್ಮತ್ತಿನ ವಿಷಯವೇನೂ ಅಲ್ಲ. ಭಾಷೆ ಬಾರದ, ಊಟ ಒಗ್ಗದ, ಈ ಜಾಗದಲ್ಲಿ ನಾನು ಅನಕ್ಷರಸ್ಥ - ಬರೇ ಫ್ರೆಂಚ್ ಮತ್ತು ಫ್ಲೆಮಿಷ್ ಮಾತನಾಡುವ ಈ ಬಹುಭಾಷಾ ನಗರದಲ್ಲಿ ನಾನು ಇಳಿದಾಗಲೆಲ್ಲಾ ಒಂದೊಂದು ಹೆಜ್ಜೆಗೂ ಜನರನ್ನು ಮುಂದಿನ ಅಡಿ ಎಲ್ಲಿಡಬೇಕೆಂದು ಕೇಳಿಕೊಳ್ಳುತ್ತಾ ನಡೆಯಬೇಕು. ನಕ್ಷೆಗಳನ್ನು ನೋಡಿ ಓಡಾಡುವ ಜನರ ಮಧ್ಯೆ ಮತ್ತೆ ಮತ್ತೆ ದಾರಿ ಕೇಳುವ ವಿಚಿತ್ರಕ್ಕಿಳಿಯಬೇಕು. ಹಲವು ಬಾರಿ ನಕ್ಷೆಗಳೂ ಅವರ ಭಾಷೆಯಲ್ಲೇ ಇರುತ್ತವೆ. ಹೋಗಲಿ ಕಂಪ್ಯೂಟರನ್ನು ತಗೆದು ಗೂಗಲ್ ಭಗವಾನನ ಮೊರೆ ಹೋಗಬೇಕೆಂದರೆ ಆತನೂ ಸ್ಥಳೀಯ ಭಾಷೆಯನ್ನು ಬಿಟ್ಟು ಆಂಗ್ಲಕ್ಕೆ ಬರಲು ಸಮಯ ತೆಗೆದುಕೊಳ್ಳುತ್ತಾನೆ. ಹೀಗೆ ೨೪ ರಾಷ್ಟ್ರಗಳ ಪ್ರತಿನಿಧಿಸುವ ವಿದ್ಯಾರ್ಥಿವೃಂದಕ್ಕೆ ಭಾರತೀಯ ಮೈಕ್ರೊಫೈನಾನ್ಸ್ ಬಗ್ಗೆ ಲೆಕ್ಚರುಗಳನ್ನು ಕುಟ್ಟುವುದು ಸುಲಭವಲ್ಲ. ಮೊದಲ ದಿನದಂದೇ ನಾನು ಕ್ಲಾಸಿಗೆ ಹೇಳಿಬಿಟ್ಟೆ.



ಹೃದ್ರೋಗಿಗಳು ಕಡಿಮೆಯಾಗುತ್ತಾರೆ

ಬರಹಗಾರರು ನಗುವುದನ್ನ ಮರೆತಿಲ್ಲ. ಅವರು ಬರೆದ ಘನಘಂಭೀರ ಕೃತಿಗಳನ್ನು ವಿಮರ್ಶಕರು ಕುಯ್ದುಕುಯ್ದು ಒಳಗೆ ಅರ್ಥವನ್ನು ಹುಡುಕುವುದನ್ನು ನೋಡಿ ಅದನ್ನು ಅರ್ಥೈಸುವ ರೀತಿಯನ್ನ ನೋಡಿ, ವಿಮರ್ಶಕರ ಪದಪ್ರಯೋಗವನ್ನು ನೋಡಿ ನಗುತ್ತಲೇ ಇದ್ದಾರೆ. 

ಹೀಗೆ ಹೇಳಿದಾಗ ಬರಹಗಾರರಿಗೂ ವಿಮರ್ಶಕರಿಗೂ ವ್ಯತ್ಯಾಸವಿದೆ ಅನ್ನುವುದನ್ನು ನಾವು ಗಮನಿಸಬೇಕು. ಕವಿ, ಕಥೆಗಾರ, ನಾಟಕಕಾರರನ್ನು ಜನ ಬರಹಗಾರರೆಂದು ಗುರುತಿಸುತ್ತಲೇ ವಿಮರ್ಶಕರನ್ನು ಬೇರೆಯಾಗಿ ಇಟುಬಟ್ಟಿದ್ದಾರೆ! ಆದರೆ ಘಂಭೀರ ಕೃತಿಗಳಲ್ಲೂ ಹಾಸ್ಯವನ್ನು ಹುಡುಕುವುದು, ಖುಷಿಯನ್ನು ಹುಡುಕುವ ಜವಾಬ್ದಾರಿ ಇರುವುದು ಓದುಗನ ಮೇಲೆ ಅವಲಂಬಿತವಾಗಿದೆ. ಓದುಗನೇ ಆ ಕೃತಿಯನ್ನು ಘಂಭೀರವಾಗಿ ಸ್ವೀಕರಿಸಿದರೆ ಅದು ಬರಹಗಾರನ ತಪ್ಪೇ? 




ರಾಮಲಿಂಗ ರಾಜು ಎನ್ನುವ ಎನ್ ಮೈನಸ್ ವನ್ ಹೀರೋ

ಎಲ್ಲರ ನಂಬಿಕೆಗೆ ದ್ರೋಹ ಮಾಡಿರಬಹುದು ಆದರೆ ರಾಮಲಿಂಗ ರಾಜು ಕ್ರಿಮಿನಲ್ ಅಲ್ಲ ಎಂದು ತೆಲುಗು ಚಾನೆಲ್‌ಗಳು ನಡೆಸಿದ ಎಸ್.ಎಂ.ಎಸ್. ಪೋಲ್ ತಿಳಿಸಿದೆಯಂತೆ. ಇದೊಂದು ಆಸಕ್ತಿಯ ಸುದ್ದಿ! ಈ ರೀತಿಯ ಸಿಂಪತಿ ರಾಜುವಿಗೆ ಬರುವುದರಲ್ಲಿ ಅಷ್ಟು ಆಶ್ಚರ್ಯವಾಗಬಾರದೇನೋ. ಯಾಕೆಂದರೆ ಅವರು ಸತ್ಯಂ ವಧಾ ಮಾಡಿದ್ದಲ್ಲದೇ ಕನ್ನೇಶ್ವರ ಧರ್ಮಂ ಚರಾ ಮಾಡಿದ್ದಾರೆ!  "ಇದರಿಂದ ನನಗೆ ಒಂದು ರೂಪಾಯಿಯ ಲಾಭವೂ ನನಗಾಗಿಲ್ಲ", ಎಂದ ಮೇಲೆ ಅವರು ಅಪರಾಧಿ ಹೇಗಾಗುತ್ತಾರೆ? ಆದರೆ ನಮ್ಮ ಪ್ರಶ್ನೆ "ನಿಮಗಂತೂ ಲಾಭವಾಗಿಲ್ಲ.. ಆದರೆ ಇದರಿಂದ ಯಾರಿಗೆ ಲಾಭವಾಯಿತು?" ಅನ್ನುವುದು.




ಶುಷ್ಕ ವಕ್ರ ಈ ನಗೆ

ಹಾಸ್ಯದ ಬಗ್ಗೆ ವಿಶ್ಲೇಷಣೆ ಬರೆಯಬೇಕು ಎಂದು ಹಾಸ್ಯ ಬರೆಯುವ ಲೇಖಕರನ್ನಾಗಲೀ ಅಥವಾ ವಿಮರ್ಶಕರನ್ನಾಗಲೀ ಕೇಳುವುದೇ ಒಂದು ವಿಡಂಬನೆಯಲ್ಲವೇ. ಇನ್ನು ಆ ಬಗ್ಗೆ ಗಂಭೀರವಾಗಿ ಬರೆದರೆ ವಿಮರ್ಶಕರ ಮೀಮಾಂಸೆಯಾಗುತ್ತದೆ. ಆದರೆ ಅದನ್ನೇ ಲೇವಡಿ ಮಾಡಿದರೆ ಹೇಳಿದ ಕೆಲಸವನ್ನು ಮಾಡದಂತೆ ಆಗುತ್ತದೆ! ಈ ಇಕ್ಕಟ್ಟಿನಲ್ಲಿ ನನ್ನನ್ನು ಸಿಕ್ಕಿಹಾಕಿ ಎಲ್ಲ ಕುಹಕವನ್ನೂ ತೆರೆಮರೆಯಲ್ಲಿ ನೋಡುತ್ತಿರುವ ವಿಜಯ ಕರ್ನಾಟಕದ ಸಂಪಾದಕ ವೃಂದದ ಖುಷಿಯೇ ರೈ ಹಾಸ್ಯ. ಇದು ಡ್ರ್ರೈ ಹಾಗೂ ರೈ [ಐಶ್ವರ್ಯ, ಪ್ರಕಾಶ್...] ಹಾಸ್ಯಕ್ಕಿಂತ ಭಿನ್ನ.



  

ಮಕ್ಕಳಿಸ್ಕೂಲು ಮನೇಲಲ್ಲ

ಆಂಧ್ರಪ್ರದೇಶ - ರಂಗಾರೆಡ್ಡಿ ಜೆಲ್ಲೆ - ಶಂಕರಪಲ್ಲಿ ಮಂಡಲದ ಪೊದ್ದುಟೂರು ಗ್ರಾಮ ಸರಪಂಚ್ ಕಟಿಕೇ ಶ್ರೀನಿವಾಸ್ ಸಾಮಾನ್ಯ ಗ್ರಾಮೀಣ ರಾಜಕಾರಣಿಯಂತೆ ಕಾಣುವುದಿಲ್ಲ. ಯುವಕನೂ ವಿದ್ಯಾವಂತನೂ ಆಗಿರುವ ಆತ ತನ್ನ ಗ್ರಾಮದ ಬಗ್ಗೆ ಯೋಚಿಸುತ್ತಲೇ ಆ ಗ್ರಾಮದ ನಸೀಬು ವಿಸ್ತಾರವಾದ ಆರ್ಥಿಕ-ರಾಜಕೀಯ-ಸಾಮಾಜಿಕ ಆಗುಹೋಗುಗಳ ಜೊತೆ ಹೇಗೆ ಬೆಸೆದಿದೆ ಎಂದು ನೋಡಬಲ್ಲವ. ಹೀಗಾಗಿ ಆತನ ಜೊತೆ ಮಾತನಾಡುವುದೂ ಒಂದು ಒಳ್ಳೆಯ ಅನುಭವವೇ. ಆತ ಯಾವ ಪಕ್ಷಕ್ಕೆ ಸೇರಿದವ ಅನ್ನುವುದು ಮುಖ್ಯವಲ್ಲ, ಆದರೆ ಸರಪಂಚರಲ್ಲಿ ಇಂಥ ಯೋಚನಾಧೋರಣೆ ಇರುವುದು ನಿಜಕ್ಕೂ ಒಂದು ಉತ್ತಮ ಲಕ್ಷಣ ಅನ್ನಿಸುತ್ತದೆ.

ಆತನ ಸಹಜ ಬುದ್ಧಿವಂತಿಕೆಗೆ ತುಸುವಾದರೂ ಪೂರಕವಾಗಿರಬಹುದಾದ ಕಾರಣ ಆತ ಹಿಂದೆ ಎಂ.ವಿ.ಫೌಂಡೇಶನ್ [ಎಂ.ವಿ.ಎಫ್] ಜೊತೆಗೆ ಒಡನಾಡಿ ಅಲ್ಲಿನ ಗ್ರಾಮಾಂತರ ಶಾಲೆಯಲ್ಲಿ ಸ್ವಯಂ-ಪ್ರೇರಣೆಯಿಂದ ಪಾಠಮಾಡಿದ್ದ. ಎಂ.ವಿ.ಎಫ್ ರಂಗಾರೆಡ್ಡಿ ಜಿಲ್ಲೆಯಲ್ಲಿ ಹಲವಾರು ವರುಷಗಳಿಂದ ಕಷ್ಟ ಎನ್ನಿಸಬಹುದಾದ ಕೆಲಸವನ್ನು ಮಾಡುತ್ತಿದೆ. ಆ ಸಂಸ್ಥೆಯ ಮೂಲೋದ್ದೇಶ ಮಕ್ಕಳಿಗೆ ತಮ್ಮ ಸಹಜವಾದ ಹಕ್ಕುಗಳನ್ನು ಕೊಡಿಸುವುದು. ಹೀಗಾಗಿ ಅವರು ಹೇಳುವ ಮಾತುಗಳು ರಾಜಿಗೆ ಒಗ್ಗದ ಈ ಅಂಶಗಳ ಆಧಾರದಿಂದ ಕೂಡಿದೆ:


  

ಸ್ಲಂಡಾಗ್/ವೈಟ್ ಟೈಗರ್: ಸಂಭ್ರಮದ ನಡುವೆ ನೈತಿಕ ನಿಲುವಿನ ಕೆಲವು ಪ್ರಶ್ನೆಗಳು.

ಸ್ಲಂಡಾಗ್ ಮಿಲಿಯನೇರ್ ಮತ್ತು ಅರವಿಂದ ಅಡಿಗರ ಪುಸ್ತಕಗಳಿಗೆ ಅನಿರೀಕ್ಷಿತವಾದ ಪ್ರಚಾರ ಸಿಕ್ಕು ಎಲ್ಲೆಡೆ ಅದರ ಚರ್ಚೆಯಾಗುತ್ತಿರುವುದು ಒಳ್ಳೆಯ ಸಂಕೇತವೇ. ಈ ಎರಡೂ ಕೃತಿಗಳು ಜಗತ್ತಿನ ಸದಭಿರುಚಿಯ ಸಂಕೇತವೇ ಅನ್ನುವ ಪ್ರಶ್ನೆಗಳನ್ನು ಎಬ್ಬಿಸಿವೆ. ನಾನು ಈವರೆಗೂ ಮಾತನಾಡಿರುವ ಅನೇಕ ಜನರು ಇಲ್ಲವೇ ಈ ಎರಡೂ ಕೃತಿಗಳನ್ನು ಮೆಚ್ಚಿದ್ದಾರೆ, ಇಲ್ಲವೇ ಎರಡನ್ನೂ ಸಹಿಸಿಲ್ಲ. ಎರಡೂ ಕೃತಿಗಳ ಬಗ್ಗೆ ನನ್ನ ತಕರಾರನ್ನು ಚರ್ಚೆಗೆ ಹಚ್ಚಬೇಕಾದ್ದು ಮುಖ್ಯ. ಯಾಕೆಂದರೆ ಈ ಎರಡೂ ಕೃತಿಗಳು ಹಾಗೂ ಅವುಗಳಿಗೆ ದೊರಕಿರುವ ಮನ್ನಣೆ ನಾವು ಈ ವರ್ಷದಲ್ಲಿ ಸೃಜನಶೀಲತೆಯನ್ನು ಯಾವ ಮಾಪನದಲ್ಲಿ ನೋಡುತ್ತಿದ್ದೇವೆ ಅನ್ನುವ ಪ್ರಶ್ನೆಯನ್ನು ಎಬ್ಬಿಸುತ್ತವೆ.




ಸತ್ಯಂ ತಲ್ಲಣಗಳು

"ನೀವೆಲ್ಲರೂ ನಂಬಿರುವಂತೆ - ಹಾಗೂ ಕಂಪನಿಯ ಲೆಕ್ಕಪತ್ರದನುಸಾರವಾಗಿ ಇರಬೇಕಿದ್ದ ಏಳುಸಾವಿರ ಕೋಟಿ ರೂಪಾಯಿಗಳು ಇಲ್ಲ. ಆದರೆ ಇದರಿಂದ ನನಗೆ ಒಂದು ರೂಪಾಯಿಯ ಲಾಭವೂ ಆಗಿಲ್ಲ. ತಪ್ಪಾಯಿತು ಕ್ಷಮಿಸಿ". ಐದು ಪುಟಗಳ ದೊಡ್ಡ ಪತ್ರಬರೆದ ರಾಮಲಿಂಗ ರಾಜು ಹೇಳಿದ್ದರ ಮಜಕೂರು ಇಷ್ಟೇ. ಮಿಕ್ಕ ನಾಲ್ಕಾರು ಪುಟಗಳು ಏನೊಂದನ್ನೂ ವಿವರಿಸಲಾಗದ ಅನವಶ್ಯಕ ವಿವರಗಳು. ಹೀಗೆ ಹಣ ಮಾಯವಾಗುವುದರ ಸುಳಿವು ಯಾರಿಗೂ ಉಂಟಾಗಲಿಲ್ಲ. ಹಿಂದೆ ನಡೆದ ಅನೇಕ ಇಂತಹ ಭ್ರಷ್ಟ ನಡಾವಳಿಯಲ್ಲಿ ಈ ಇಂಥ ಪತನಕ್ಕೆ ಮುನ್ನ ಯಾವುದಾದರೂ ಸುದ್ದಿಯಿದ್ದೇ ಇರುತ್ತಿತ್ತು. ಅದು ಹರ್ಷದ್ ಮೆಹತಾ ಬಿಗ್ ಬುಲ್ ಆಗಿ ಉತ್ತುಂಗಕ್ಕೇರುತ್ತಿದ್ದ ಕಥೆಯೇ ಇರಬಹುದು, ಕೇತನ್ ಪಾರೀಕನ ಕಥೆಯೇ ಇರಬಹುದು, ಅಥವಾ ವಿಪರೀತವಾಗಿ ಬಿಸಿಯೇರಿದ್ದ ಆರ್ಥಿಕ ಸಂಸ್ಥೆಗಳ ಆಕರ್ಷಣೆಯ ಸಿ ಆರ್‍ ಬಿ ಸಂಸ್ಥೆಯಿಂದ ಪ್ರಾರಂಭವಾದ ಎನ್.ಬಿ.ಎಫ್.ಸಿ ಹಗರಣವೇ ಆಗಿರಬಹುದು.. ಇಲ್ಲವೇ ಡಾಟ್.ಕಾಂ ಕಂಪನಿಗಳು ಒಂದರ ನಂತರ ಒಂದು ಪತನಗೊಂಡ ಪರಿಯೇ ಇರಬಹುದು. ಎನ್ರಾನ್ ಸಂಸ್ಥೆ 




ರಾಮ್ ಗುಹಾ ಬರೆದ ಕ್ರಿಕೆಟ್ ರಾಜ್ಯ

ಈ ಬಾರಿ ರಾಮ್ ಗುಹಾ ಜೊತೆಗೆ ಮತಷ್ಟು ಸಮಯ ಕಳೆಯಲಿದ್ದೇನೆ; ನನ್ನ ಬಾಲ್ಯದ ಕ್ರಿಕೆಟ್ಟಿಗೆ ಪಯಣ ಮಾಡಲಿದ್ದೇನೆ. ಇತ್ತೀಚೆಗೆ ನಾನು ಓದಿದ ಪುಸ್ತಕಗಳಲ್ಲಿ ರಾಮ್ ಗುಹಾರ ಕ್ರಿಕೆಟ್ಟಿನ ಬಗೆಗಿನ ಪುಸ್ತಕವೂ ಒಂದು. ರಾಮ್ ಗುಹಾರ ಅನೇಕ ಬರವಣಿಗೆಗಳನ್ನು ನಾನು ಓದಿದ್ದೇನೆ, ಹಾಗೂ ಅವುಗಳನ್ನು ಇಷ್ಟಪಟ್ಟಿದ್ದೇನೆ. ವರಿಯರ್ ಎಲ್ವಿನ್ ಅವರ ಜೀವನ ಚರಿತ್ರೆ ರಾಮ್ ಅವರ ಅದ್ಭುತವಾದ ಸಂಶೋಧನಾ ಪ್ರತಿಭೆಯನ್ನು ತೋರುವ ಪುಸ್ತಕ. ರಾಮ್ ಒಳ್ಳೆಯ ಲೇಖಕರಷ್ಟೇ ಅಲ್ಲ, ಬರೇ ಬರವಣಿಗೆಯ ಆಧಾರದ ಮೇಲೆಯೇ ಜೀವನವನ್ನು ನಡೆಸುತ್ತಿರುವ ಅಪರೂಪದ ವ್ಯಕ್ತಿಗಳಲ್ಲಿ ಒಬ್ಬರು. ರಾಮ್ ಅವರ ಬರವಣಿಗೆಯನ್ನು ಶ್ರೇಣೀಕರಿಸುವುದು ಕಷ್ಟದ ಮಾತು.