ಕಾಬೂಲಿವಾಲಾನ ಕಥಾನಕ

ಕಾಬೂಲಿಗೆ ಕೆಲಸದ ಮೇಲೆ ಹೋಗಬೇಕು ಅನ್ನುವ ಮಾತು ಬಂದ ಕೂಡಲೇ ನನಗೆ ಎಲ್ಲೆಡೆಯಿಂದಲೂ ಎಲ್ಲ ರೀತಿಯ ಉಪದೇಶಗಳು ಬರತೊಡಗಿದುವು. ಮೂಲಭೂತವಾಗಿ ಎಲ್ಲರೂ ಹೇಳಿದ್ದು ಇಷ್ಟೇ - ಅಲ್ಲಿಗೆ ಹೋಗುವುದು ತುಂಬಾ ಅಪಾಯದಿಂದ ಕೂಡಿದ್ದು, ಯಾವಾಗ ಏನುಬೇಕಾದರೂ ಆಗಬಹುದು. ಹೀಗಿದ್ದರೂ ಕಳೆದ ನಾಲ್ಕುತಿಂಗಳಲ್ಲಿ ಎರಡು ಬಾರಿ ಅಲ್ಲಿಗೆ ಹೋಗಿಬಂದಿರುವೆ. ಮೊದಲ ಯಾತ್ರೆ ನಡೆದಾಗ ಅಲ್ಲಿನ ಚುನಾವಣೆಯ ತಯಾರಿ ನಡೆದಿತ್ತು. ಎರಡನೆಯ ಯಾತ್ರೆಯ ಸಮಯಕ್ಕೆ ಆ ಚುನಾವಣೆಯ ಫಲಿತಾಂಶ ಬರಬಹುದೆನ್ನುವ ಸುದ್ದಿಯಿತ್ತಾದರೂ, ಚುನಾವಣೆಯಲ್ಲಿ ನಡೆದಿರಬಹುದಾದ ಅವ್ಯವಹಾರದ ಕಾರಣವಾಗಿ ತನಿಖೆ ಇನ್ನೂ ನಡೆಯುತ್ತಿದೆ.





ಖರ್ಚಿನಿಂದ ಉಳಿತಾಯ: ಕೆಲವು ಮಾದರಿಗಳು

ಹಲವು ವರ್ಷಗಳ ನನ್ನ ಸ್ನೇಹಿತನೊಬ್ಬ ಹೀಗೆ ಹೇಳುತ್ತಿದ್ದುದುಂಟು: "ಈ ನಡುವೆ ನನಗೆ ದುಡ್ಡಿಗೆ ಬಹಳ ಕಷ್ಟವಾಗಿಬಿಟ್ಟಿದೆ. ಯಾಕೆಂದರೆ ನನ್ನ ಆದಾಯವೆಲ್ಲಾ ಸೇವಿಂಗ್ಸ್ ನಲ್ಲಿಯೇ ಖರ್ಚಾಗಿಬಿಡುತ್ತದೆ!" ಇದು ಒಂದು ರೀತಿಯಿಂದ ಯೋಚಿಸಬೇಕಾದ, ಗಹನವಾದ ವಿಚಾರ. ಉಳಿತಾಯ ಮಾಡಿದಷ್ಟೂ ಹಣವನ್ನು ನಾವು ಪುನಃ ಸಂಪಾದಿಸಿದ ಹಾಗೆಯೇ. ಇಷ್ಟಾದರೂ, ಬಡವರಿಗೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ ವಾಸವಾಗಿರುವವರಿಗೆ ಸಾಲ ಪಡೆವ ಮಾರ್ಗಗಳನ್ನು ಸರಕಾರಗಳೂ, ಖಾಸಗೀ ಸಂಸ್ಥೆಗಳೂ ಒದಗಿಸಿಕೊಡುತ್ತವೆಯೇ ಹೊರತು, ಉಳಿತಾಯ ಮಾಡುವ ಹೆಚ್ಚಿನ ಮಾರ್ಗಗಳನ್ನು ನಾವು ಕಂಡಿಲ್ಲ. ಮೈಕ್ರೋಫೈನಾನ್ಸ್ ವಿಷಯಕ್ಕೆ ಬಂದಾಗಲೂ ಸಾಲ ಕೊಡುವ ಅನೇಕ ಮಾದರಿಗಳು ನಮಗೆ ಸಿಗುತ್ತವಾದರೂ ’ಚಿಕ್ಕ ಉಳಿತಾಯದ’ ಮಾದರಿಗಳು ಕಡಿಮೆಯೇ. ಬಡವರಿಗೆ ಉಳಿತಾಯ ಮಾಡುವ ಕ್ಷಮತೆಯಿಲ್ಲವೆನ್ನುವ ಪ್ರತಿಪಾದನೆಯನ್ನು ನಾವು ಅಲ್ಲಲ್ಲಿ ಕಾಣುತ್ತೇವಾದರೂ, ಆ ವಾದದಲ್ಲಿ ಪೂರ್ಣ ಸತ್ಯವಿಲ್ಲ. ಬ್ಯಾಂಕುಗಳ ಮಾಹಿತಿಯನ್ನು ನಾವು ಗಮನಿಸಿದಾಗ ಅನೇಕ ಹಿಂದುಳಿದ ಪ್ರಾಂತಗಳಲ್ಲಿ ಬ್ಯಾಂಕುಗಳಲ್ಲಿ ಇರುವ ಠೇವಣಿಯ ಮೊತ್ತ ಆ ಶಾಖೆಗಳು ಕೊಡುವ ಸಾಲದ ಮೊತ್ತಕ್ಕಿಂತ ಐದಾರು ಪಟ್ಟು ಹೆಚ್ಚಿರುವುದನ್ನು ನಾವು ನೋಡಬಹುದು. ಹೀಗಾಗಿ ಬಿಹಾರ, ಉತ್ತರಪ್ರದೇಶ, ರಾಜಾಸ್ಥಾನದಂತಹ ರಾಜ್ಯಗಳ ಉಳಿತಾಯದ ಹಣ ಮುಂಬಯಿನ ದೊಡ್ಡ ವ್ಯಾಪಾರಗಳ ಮೂಲಧನವಾಗುತ್ತಿರುವುದನ್ನು ನಾವು ಕಾಣಬಹುದು.




ಚಿಕ್ಕಸಾಲ, ಬಡತನ, ಮತ್ತು ಮಹಿಳೆಯರು: ಒಂದು ಕಥನ

ಬಡನದ ನಿರ್ಮೂಲನೆಯ ವಿಷಯಕ್ಕೆ ಬಂದಾಗ ಯಾವರೀತಿಯ ಪ್ರಣಾಲಿಗಳು ಯಶಸ್ವಿಯಾಗಿರುತ್ತವೆ ಎಂದು ಹೇಳುವುದು ಕಷ್ಟದ ಮಾತು. ನಮ್ಮ ಯೋಚನೆ ಮೂಲಭೂತವಾಗಿ ಬಡವರ ಆದಾಯವನ್ನು ಹೆಚ್ಚಿಸುವದರತ್ತ ಇರಬೇಕೇ ಅಥವಾ ಅವರ ಜೀವನದಲ್ಲಿರಬಹುದಾದ ಏರುಪೇರುಗಳನ್ನು ಕಡಿಮೆ ಮಾಡುವತ್ತ ವ್ಯೂಹವನ್ನು ರಚಿಸಬೇಕೇ ಅನ್ನುವುದು ಒಂದು ರೀತಿಯ ದ್ವಂದ್ವದ ಮಾತೇ. [ಮೈಕ್ರೊಫೈನಾನ್ಸ್] ಚಿಕ್ಕಸಾಲದ ಕಾರ್ಯಕ್ರಮಗಳು ಬಡತನವನ್ನು ಕಡಿಮೆ ಮಾಡುವತ್ತ ಕೆಲಸ ಮಾಡುತ್ತವೆ ಎನ್ನುವ ಮಾತನ್ನ ಸಾಲ ಕೊಡುವ ಪ್ರತೀ ಸಂಸ್ಥೆಯೂ ಪ್ರತಿಪಾದಿಸುತ್ತಾ ಬಂದಿದ್ದರೂ ಈ ಕಾರ್ಯಕ್ರಮದಿಂದಾಗಿ ಬಡತನದ ಮೇಲೆ ಮೂಲಭೂತವಾದ ಪರಿಣಾಮವಾಗಿದೆಯೆಂದೂ, ಎಲ್ಲಕ್ಕಿಂತ ಇದೇ ಸಶಕ್ತ ಕಾರ್ಯಕ್ರಮವೆಂದೂ ಪ್ರಶ್ನಾತೀತವಾಗಿ ನಿರೂಪಿಸಲು ಯಾವುದೇ ಅಧ್ಯಯನಕ್ಕೆ ಸಾಧ್ಯವಾಗಿಲ್ಲ.





ಮಹಾತ್ಮಾ ಗಾಂಧಿ ಮತ್ತು ಮಾ ಬ್ಲಾ ಪೆನ್ನು

"ನನ್ನ ಜೀವನವೇ ನನ್ನ ಸಂದೇಶ" ಎಂದು ಮಹಾತ್ಮಾ ಗಾಂಧಿ ಹೇಳಿದ್ದು ಯಾವಗ ಅನ್ನುವುದನ್ನು ನಾವೆಲ್ಲರೂ ಮರೆತಿದ್ದರೂ ಅದನ್ನು ಆಗಾಗ ಪ್ರಯೋಗಿಸುವುದನ್ನು ಮಾತ್ರ ಮರೆಯುವುದಿಲ್ಲ. ಆದರೆ ಮಹಾತ್ಮ ಕೊಟ್ಟ ಸಂದೇಶವೇನು ಅದನ್ನು ನಾವು ಅರ್ಥೈಸುವುದು ಹೇಗೆ ಅನ್ನುವುದು ಮಾತ್ರ ಗಹನ ಚರ್ಚೆಯ ವಿಷಯವಾಗಬಹುದು. ಮಾಹಾತ್ಮ ಗಾಂಧಿಯನ್ನು ಓದಿಕೊಂಡಿದ್ದರೂ ಆತನ ಬಗ್ಗೆ ಪಾಂಡಿತ್ಯವಿಲ್ಲದ, ಯಾವ ಗಾಂಧೀವಾದದ ವಿಚರವನ್ನೂ ಪಾಲಿಸದ ನಾನು ಈ ವಿಷಯದಲ್ಲಿ ಹಠಾತ್ ಆಸಕ್ತಿ ಪಡೆಯುವುದಕ್ಕೆ ಕಾರಣವಿದೆ. ಈಚೆಗೆ ಪತ್ರಿಕೆಗಳಲ್ಲಿ ಮತ್ತು ನಗರದ ಹಲವೆಡೆ ಪೋಸ್ಟರುಗಳಲ್ಲಿ ಕಂಡ ಮಾ ಬ್ಲಾ [Mont Blanc] ಪೆನ್ನಿನ ಜಾಹೀರಾತನ್ನು ಕಂಡಾಗ ಈ ಪ್ರಶ್ನೆ ಸಹಜವಾಗಿ ನನ್ನಲ್ಲಿ ಉದ್ಭವವಾಯಿತು.





ಕನಸುಗಾರ ಯೂನಸ್ ಮತ್ತು ಲಾಭವಿಲ್ಲದ ವ್ಯಾಪಾರ

ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ತಮ್ಮ ಗ್ರಾಮೀಣ್ ಬ್ಯಾಂಕಿನ ಚಿಕ್ಕ ಸಾಲದ ಕಾರ್ಯಕ್ರಮದ ಮೂಲಕ ಖ್ಯಾತಿಯನ್ನು ಪಡೆದವರು. ಬಾಂಗ್ಲಾದೇಶದಂತಹ ಪುಟ್ಟ ದೇಶದಲ್ಲಿ ಬಡವರಿಗೆ ಅದರಲ್ಲೂ ಮುಖ್ಯವಾಗಿ ಹೆಂಗಸರಿಗೆ ವಿತ್ತೀಯ ಸೇವೆಗಳನ್ನೊದಗಿಸಿದ್ದೇ ಅಲ್ಲದೇ ಬ್ಯಾಂಕಿಂಗ್ ನಡೆಸಬಹುದಾದ ರೀತಿಯನ್ನೇ ಮೂಲಭೂತವಾಗಿ ಪ್ರಶ್ನಿಸಿ ಅದಕ್ಕೆ ಒಂದು ವಿಭಿನ್ನ ರೂಪವನ್ನು ಕೊಟ್ಟವರು.




ಭೂಗತ ಜಗತ್ತಿನ ಒಳನೋಟಗಳು

ಸುಧೀರ್ ವೆಂಕಟೇಶ್ ಅವರ ಗ್ಯಾಂಗ್ ಲೀಡರ್ ಫರ್ ಎ ಡೇ ಒಂದು ಕುತೂಹಲಕಾರಿ ಪುಸ್ತಕ. ನಿಜಕ್ಕೂ ಈ ಪುಸ್ತಕ ಗಂಭೀರ ಬರವಣಿಗೆ ಮತ್ತು ಜನಪ್ರಿಯ ಬರವಣಿಗೆಯ ಮಧ್ಯೆ ತೂರಾಡುತ್ತಾ, ಕಡೆಗೆ ಅನೇಕ ಪ್ರಶ್ನೆಗಳನ್ನು ಎಬ್ಬಿಸಿ ಅವುಗಳನ್ನು ಉತ್ತರಿಸಲು ಪ್ರಯತ್ನಿಸದೆಯೇ ನಿಂತುಬಿಡುತ್ತದೆ. ಹೀಗೆ ಎಲ್ಲಕ್ಕೂ ಉತ್ತರವನ್ನು ನೀಡುವುದು ಸುಧೀರ್ ಅವರ ಉದ್ದೇಶವೂ ಅಲ್ಲ, ಅದು ಸಾಧ್ಯವೂ ಆಗುವುದಿಲ್ಲ ಎನ್ನುವ ಭಾವನೆ ನಮಗೆ ಬರುವುದರಲ್ಲಿ ಯಾವ ಸೋಜಿಗವೂ ಇಲ್ಲ. ಆದರೂ ಈ ಪುಸ್ತಕವನ್ನು ನಾವು ಓದಿ ಚರ್ಚಿಸಬೇಕಾದ ಅವಶ್ಯಕತೆಯಿದೆ.





ತಿರುಮಲೇಶರ ಕಾವ್ಯ

ಕನ್ನಡದಲ್ಲಿ ಕಾವ್ಯದಲ್ಲಿ ನನಗೆ ಪ್ರಿಯರಾದ ಕವಿ ತಿರುಮಲೇಶ. ಅದಕ್ಕೆ ಕಾರಣವಿಷ್ಟೇ - ತಿರುಮಲೇಶ ಯಾವಾಗಲೂ ಏನಾದರೂ ಹೊಸತನ್ನು ಹೇಳುತ್ತಾರೆ, ಹೊಸರೀತಿಯಲ್ಲಿ ಹೇಳುತ್ತಾರೆ. ’ಮುಖವಾಡಗಳು’ ಸಂಕಲನದಿಂದ ’ಅವಧ’ದ ವರೆಗೆ ಬಂದಿರುವ ಅವರ ಐದು ಕವನ ಸಂಗ್ರಹಗಳಲ್ಲಿ ವಿಶೇಷ ವೈವಿಧ್ಯತೆಯಿದೆ. ಅಡಿಗರ ಜಾಡಿನಲ್ಲಿಯೇ ಕವಿತೆಗಳನ್ನು ಬರೆಯಲು ಪ್ರಾರಂಭಿಸಿದ ತಿರುಮಲೇಶರು ನಂತರ ತಮ್ಮದೇ ಪ್ರತ್ಯೇಕತೆಯನ್ನು ಶೋಧಿಸುತ್ತಾ ತಮ್ಮದೇ ಮಾರ್ಗವನ್ನು ಕಂಡುಕೊಂಡು ಮುಂದೆ ಸಾಗಿದರು.




ರುದ್ರಮಾತಾದ ರಾಮಜೀಭಾಯಿ

ನಾನು ಕೆಲಸ ಮಾಡುವ ಸಂಸ್ಥೆಯಲ್ಲಿ ಯಾವಾಗಲೂ ಕೇಳಿಬರುವ ಮಾತುಗಳು ವ್ಯಾಪಾರ, ವ್ಯಾಪಾರದ ಬೆಳವಣಿಗೆ, ಲಾಭಾಂಶ, ಗುರಿ-ಸಾಧನೆಗಳಿಗೆ ಸಂಬಂಧಿಸಿದ್ದು. ನಮ್ಮ ವಿದ್ಯಾರ್ಥಿಗಳೂ ಸಹ ಕಾರ್ಯಕ್ಷೇತ್ರದ ಧ್ಯೇಯ, ಅದನ್ನು ಆರ್ಜಿಸಲು ನಡೆಸಬೇಕಾದ ತಯಾರಿ, ಹಾಗೂ ಯಶಸ್ವೀ ವ್ಯಪಾರವನ್ನು ಸಮರ್ಥವಾಗಿ ನಡೆಸುವ ಮಾತನ್ನು ಆಡುತ್ತಿರುತ್ತಾರೆ. ಹೀಗಾಗಿ ಯಾವುದೇ ವಿಚಾರವನ್ನೋ-ವ್ಯಾಪಾರವನ್ನೋ ಪರಿಗಣಿಸುವಾಗ ಅದರ ಭವಿಷ್ಯವೇನು ಆ ವ್ಯಾಪಾರದಿಂದ ಬರುವ ಲಾಭಾಂಶವೇನು - ಹಾಗೂ ಅದನ್ನು ಸಾಧಿಸಲು ಹಾಕಿಕೊಳ್ಳಬೇಕಾದ ಯೋಜನೆಗಳೇನು ಎನ್ನುವ ವಿಚಾರಗಳನ್ನು ಮಥಿಸುತ್ತಲೇ ಇರುತ್ತೇವೆ. ಹೆಚ್ಚು ಕೆಲಸಕ್ಕೆ ಹೆಚ್ಚು ಹಣ - ಸಮರ್ಥ ಕೆಲಸಕ್ಕೆ ಕೊಡಬೇಕಾದ ಪ್ರೋತ್ಸಾಹ ಹೀಗೆಲ್ಲಾ ಮ್ಯಾನೇಜ್ಮೆಂಟಿನ ಥಿಯರಿಗಳನ್ನು ಒಗೆಯುತ್ತಿರುವ ವ್ಯಾಪಾರದ ಮಕ್ಕಾದಿಂದ ರುದ್ರಮಾತಾ ಅನ್ನುವ ಪುಟ್ಟ ಹೋಬಳಿಗೆ ಹೋದರೆ ಕಾಣಬಹುದಾದ ಸತ್ಯವೇ ಬೇರೆ ರೀತಿಯದ್ದು!




ವಾಡಾಗಳ ಅರಗಿನರಮನೆ

ನಿರುನಾ ಗ್ರಾಮದಲ್ಲಿ ಮಾತ್ರವಲ್ಲ ಇಡೀ ಕಛ್ ಪ್ರಾಂತದಲ್ಲೇ ನಿಜಕ್ಕೂ ಪ್ರತಿಭಾವಂತ ಕಲಾವಿದರಿದ್ದಾರೆ. ಆದರೆ ಈ ಬಾರಿ ನಾವು ರೋಗನ್ ಕಲೆಯಿಂದ ಮುಂದಕ್ಕೆ ಹೋಗಿ ಮರ ಮತ್ತು ಅರಗಿನ ಕಲಸ ಮಾಡುವ ’ವಾಡಾ’ಬುಡಕಟ್ಟಿನ ಜನಗಳ ಬಗ್ಗೆ ಯೋಚಿಸೋಣ. ವಾಡಾ ಬುಡಕಟ್ಟಿನವರು ಮೂಲಭೂತವಾಗಿ ಅಲೆಮಾರಿಗಳು, ಅರಣ್ಯ ಪ್ರಾಂತದಲ್ಲಿ ತಿರುಗಾಡುತ್ತಿರುವ ಈ ಬುಡಕಟ್ಟಿನ ಜನಾಂಗಕ್ಕೆ ಒಂದೇ ಜಾಗದಲ್ಲಿದ್ದು ಕೆಲಸ ಮಾಡುವುದು ತುಸು ಮುಜುಗರದ ಮಾತೇ. ಆದರೆ ಅರಣ್ಯ ಪ್ರದೇಶದಲ್ಲಿರುವುದರಿಂದ ಮರಗಳ ಬಗೆಗಿನ ಅವರ ಜ್ಞಾನ ಅದ್ಭುತವಾದದ್ದು. ಅವರ ಕರಕುಶಲತೆಯನ್ನು ನೋಡಿಯೇ ನಂಬಬೇಕು. ಆದರೆ ಕಲಾವಿದರಿಗೆ ತಮ್ಮ ಕಲೆಯ ಆಧಾರವಾಗಿಯೇ ಜೀವನ ಹೊರೆಯುವುದು ಸಾಧ್ಯವಿಲ್ಲ ಎನ್ನುವುದನ್ನು ನಿರೂಪಿಸಲೋ ಎಂಬಂತೆ ಇವರುಗಳು ಸೈಡ್ ಬಿಜನೆಸ್ ಆಗಿ ಸಾರಾಯಿ ತಯಾರಿಸುವ ಕೆಲಸವನ್ನೂ ಮಾಡುತ್ತಾರೆ.






ಸೆಪ್ಟೆಂಬರ್ ೫ ರ ವಿಚಾರಗಳು

ಸುಮಾರು ಹದಿನೈದು ವರ್ಷಕಾಲ ಮೇಷ್ಟರ ಕೆಲಸ ಮಾಡಿದಾಗ ಸಹಜವಾಗಿಯೇ ಒಂದು ಸೀನಿಯಾರಿಟಿ ಬಂದುಬಿಡುತ್ತದೆ. ಜೊತೆಗೆ "ನಾನು ಮೇಷ್ಟರ ಕೆಲಸ ಪ್ರಾರಂಭಮಾಡಿದಾಗ ವಿದ್ಯಾರ್ಥಿಗಳು ಎಷ್ಟು ಮರ್ಯಾದೆಯಿಂದ ಇದ್ದರು.. ಈಗ ಕಾಲ ಬದಲಾಗಿದೆ" ಎಂದು ಕರುಬುವ ಪರಿಸ್ಥಿತಿ ಉಂಟಾಗಿದ್ದರೆ ಆ ಮೇಷ್ಟರಿಗೆ ಮಧ್ಯವಯಸ್ಸು ದಾಟುತ್ತಿದೆ ಅನ್ನುವುದು ಖಾತರಿ. ಆದ್ದರಿಂದಲೇ ವಿದ್ಯಾರ್ಥಿಗಳಿಗೂ ಅವರ ಗುರುಗಳಿಗೂ ಇರುವ ಸಂಬಂಧ ಕಾಲಕ್ಕೆ ತಕ್ಕಂತೆ ಬದಲಾಗುತ್ತದೆ ಅನ್ನುವುದು ಎಷ್ಟು ನಿಜವೋ ವ್ಯಕ್ತಿಯ ಸಮಯ, ವಯಸ್ಸಿಗೆ ತಕ್ಕಂತೆ ಬದಲಾಗುತ್ತದೆ ಅನ್ನುವುದೂ ಅಷ್ಟೇ ನಿಜ. ಆದರೂ ನಾವುಗಳು "ಇಂದಿನ ವಿದ್ಯಾರ್ಥಿಗಳೇ ಬೇರೆ" ಎಂದು ಕರುಬುವುದನ್ನು ನಮ್ಮ ಭವ್ಯ ಚರಿತ್ರೆಯಲ್ಲಿ ಬದುಕುವುದನ್ನೂ ಬಿಡುವುದಿಲ್ಲ.





ರೋಗನ್ ಕಲೆ, ಎಷ್ಟು ಬೆಲೆ?

ಗುಜರಾತಿನ ಕಛ್ ಪ್ರಾಂತದಲ್ಲಿ ಆದ ೨೦೦೧ರ ಭೂಕಂಪದ ಕಂಪನಗಳು ಈಗ್ಗೆ ಕಡಿಮೆಯಾಗುತ್ತಾ ಬಂದಿದೆಯೇನೋ. ಭೂಕಂಪವಾದ ನಂತರ ವಿಶ್ವದ ವಿವಿಧೆಡೆಗಳಿಂದ ಕಛ್ ಪ್ರಾಂತಕ್ಕೆ ಅನೇಕ ರೀತಿಯ ಅನುದಾನಗಳು ಬಂದುವು. ನಾನಾ ರೀತಿಯ ಸಂಸ್ಥೆಗಳು ಭೂಕಂಪದ ತಕ್ಷಣದ ದಿನಗಳಲ್ಲಿ ಆ ಜಿಲ್ಲೆಗೆ ಬಂದು ಗ್ರಾಮಗಳನ್ನು ದತ್ತು ತೆಗೆದು ಆ ಪ್ರಾಂತದ ಪುನರ್ನಿರ್ಮಾಣಕ್ಕೆ ಕೈಕೈ ಕೂಡಿಸಿದುವು. ಆದರೆ ಎಂಟು ವರ್ಷಗಳ ನಂತರ ಆ ಪ್ರಾಂತದ ಜನ ಹೇಗೆ ಜೀವಿಸುತ್ತಿದ್ದಾರೆ? ಭೂಕಂಪದಿಂದ ತತ್ತರಿಸಿದ ಹಲವು ಸಮುದಾಯಗಳು ಈಗ ಜೀವನ ಹೇಗೆ ನಡೆಸುತ್ತಿವೆ? ಈ ಎಲ್ಲ ಸಹಾಯ ಮತ್ತು ಒಳ್ಳೆಯತನದ ಫಲಿತವಾಗಿ ಏನಾದರೂ ಆಗಿದೆಯೇ ಅನ್ನುವುದು ಕುತೂಹಲದ ಮಾತು.





ಮ್ಯಾಗ್ಸಸೇ ಪ್ರಶಸ್ತಿ ಪಡೆದ ದೀಪ್ ಜೋಶಿ ಮತ್ತು ಅವರು ಬೆಳೆಸಿದ ಪ್ರದಾನ್ ಸಂಸ್ಥೆ

ಏಶಿಯಾದ ನೊಬೆಲ್ ಎಂದೇ ಪ್ರಖ್ಯಾತವಾಗಿರುವ ರ್‍ಯಾಮನ್ ಮ್ಯಾಗಸಸೇ ಪುರಸ್ಕಾರವನ್ನು ಈ ಬಾರಿ ಪಡೆದವರಲ್ಲಿ ಭಾರತೀಯ ದೀಪ್ ಜೋಶಿ ಸಹ ಸೇರಿದ್ದಾರೆ. ಎಂದೂ ತಮ್ಮ ಧ್ವನಿಯನ್ನು ಏರಿಸದ, ಬೆಳ್ಳಿಗಡ್ಡಧಾರಿ, ಒಂದು ಥರದಲ್ಲಿ ಋಷಿಯ ಅವತಾರದಂತಿರುವ ಹಿರಿಯ ದೀಪ್‍ಗೆ ಈ ಪುರಸ್ಕಾರ ಬಂದದ್ದು ಸಹಜವೂ ಸಮರ್ಪಕವೂ ಆಗಿದೆ. ಯಾವ ಆರ್ಭಟವೂ ಇಲ್ಲದೇ, ಎಲ್ಲವನ್ನೂ ಒಂದು ಸ್ಪಷ್ಟ ಆಲೋಚನೆ, ದೂರದರ್ಶಿತ್ವದಿಂದ ಯೋಜನಾಬದ್ಧವಾಗಿ ಕಾರ್ಯರೂಪಕ್ಕಿಳಿಸಿರುವ ದೀಪ್‍ ಒಂದು ರೀತಿಯಿಂದ ಅಜಾತ ಶತ್ರು. ಅವರ ಬಗ್ಗೆ ಕುಹಕದ ಧ್ವನಿಯಾಗಲೀ, ಬೇಸರದ ಧ್ವನಿಯಾಗಲೀ ನಾನು ಈ ವರೆಗೆ ಕೇಳಿಯೇ ಇಲ್ಲ. ಆದರೆ ದೀಪ್ ಜೋಶಿಯ ಮಹತ್ವವನ್ನು ಅರ್ಥಮಾಡಿಕೊಳ್ಳಲು ನಾವು ಆತನ ಜೀವನದಲ್ಲಿ ಹಣಕಿಹಾಕದೇ ಆತನ ಕೆಲಸ ಮತ್ತು ಆತ ನಡೆಸಿದ ಸಂಸ್ಥೆಯ ನಿಲುವನ್ನು ಅರ್ಥಮಾಡಿಕೊಳ್ಳುವುದರಲ್ಲಿಯೇ ಮ್ಯಾಗಸಸೆಯ ಮಹತ್ವವೂ ಇದೆ.





ಒಳಿತು ಮಾಡಿ ಲಾಭ ಗಳಿಸುವ ವ್ಯಾಪಾರ: ಮೂರು ಮಾದರಿಗಳು

ಕೆಲವು ವ್ಯಾಪಾರಗಳು ನಾವು ದಿನೇ ದಿನೇ ನೋಡುವ ವ್ಯಾಪಾರಗಳಿಗಿಂತ ಭಿನ್ನವಾಗಿರುತ್ತವೆ. ವ್ಯಾಪಾರದ ಉದ್ದೇಶವೇನೋ ಲಾಭ ಗಳಿಸುವುದು. ಆದರೆ ಲಾಭ ಗಳಿಸುವ ಪ್ರಕ್ರಿಯೆಯಲ್ಲಿ ಒಳಿತನ್ನೂ ಮಾಡಲು ಸಾಧ್ಯವಾದರೆ? ಅನೇಕ ಬಾರಿ ಈ ವ್ಯಾಪಾರಗಳ ಉದ್ದೇಶ ನಿಜಕ್ಕೂ ಒಳಿತನ್ನು ಮಾಡಬೇಕೆನ್ನುವುದೇ ಅಥವಾ ಒಳ್ಳೆಯ ಹೆಸರು ಬರಲಿ ಅನ್ನುವ ಸೀಮಿತ ಉದ್ದೇಶದಿಂದ ಇಂಥ ವ್ಯಾಪಾರವನ್ನು ಮಾಡುತ್ತಿದ್ದಾರೆಯೇ ಅನ್ನುವ ವಿಷಯ ಗ್ರಹಿಸುವುದು ಕಷ್ಟವಾಗುತ್ತದೆ. ಬಡವರನ್ನು ಗ್ರಾಹಕರನ್ನಾಗಿ ನೋಡುವುದೂ ಒಂದು ವಿಕಾಸದ ಪರಿಕಲ್ಪನೆಯ ವಿಚಾರಧಾರೆಯ ಸೆಲೆ. ಮ್ಯಾನೇಜ್‍ಮೆಂಟ್ ಗುರು ಎನ್ನಿಸಿಕೊಳ್ಳುವ ಸಿ,ಕೆ.ಪ್ರಹ್ಲಾದ್ ಇದನ್ನು ಪಿರಮಿಡ್ ಕೆಳಸ್ಥರದಲ್ಲಿರುವ ಖಜಾನೆ ಎಂದು ಕರೆದು ಬಡವರನ್ನು ಅನೇಕ ದೊಡ್ಡ ಕಂಪನಿಗಳ ಗ್ರಾಹಕರನ್ನಾಗಿಸುವುದರಲ್ಲಿ ಸಫಲರಾಗಿದ್ದಾರೆ! ಆದರೆ ಲಾಭವನ್ನೂ ಒಳಿತನ್ನೂ ಮಾಡುವುದು ಎಷ್ಟರ ಮಟ್ಟಿಗೆ ಸಾಧ್ಯ?



ಮರೆತೇನೆಂದರು ಮರೆಯಲಿ ಹ್ಯಾಂಗ?

ನಮ್ಮ ದೇಶದಲ್ಲಿ ಮೈಕ್ರೋಫೈನಾನ್ಸ್ ಅಂದಕೂಡಲೇ ಕಾರಣವಿರಲೀ ಇಲ್ಲದಿರಲೀ ಮುಂಚೂಣಿಯಲ್ಲಿ ನಿಲ್ಲುವ ಹೆಸರು ಎಸ್.ಕೆ.ಎಸ್ ಎನ್ನುವ ಸಂಸ್ಥೆಯದ್ದು. ಹಾಗೂ ಅದರ ಸಂಸ್ಥಾಪಕ ಅನ್ನಿಸಿಕೊಳ್ಳುವ ವಿಕ್ರಂ ಆಕುಲಾರ ಹೆಸರು. ಎಸ್.ಕೆ.ಎಸ್ [ಸ್ವಯಂ ಕೃಷಿ ಸಂಘಂ] ಬಗ್ಗೆ ಮೊದಲಿಗೆ ಯೋಚಿಸಿದ್ದು ಅದನ್ನು ಕಾರ್ಯರೂಪಕ್ಕೆ ಇಳಿಸಿದ್ದು ವಿಕ್ರಂ ಅನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಪುಟ್ಟದಾಗಿ ಪ್ರಾರಂಭಿಸಿ ಇಂದು ದೇಶಾದ್ಯಂತ ಹಬ್ಬಿರುವ ಈ ಸಂಸ್ಥೆ ದೇಶದಲ್ಲಿಯೇ ಅತ್ಯಂತ ದೊಡ್ಡ ಮೈಕ್ರೊಫೈನಾನ್ಸ್ ಸಂಸ್ಥೆಯಾಗಿದೆ. ವಿಕ್ರಂಗೂ ಈ ಸಂಸ್ಥೆ ಸಾಕಷ್ಟು ಖ್ಯಾತಿಯನ್ನು ತಂದು ನೀಡಿದೆ. ಅಮೆರಿಕದಿಂದ ಎಲ್ಲವನ್ನೂ ಬಿಟ್ಟು ಭಾರತಕ್ಕೆ ಬಂದು ಬಡವರಿಗೆ ಸೇವೆಯನ್ನೊದಗಿಸುವ ಕೆಲಸ ಮಾಡುತ್ತಿರುವುದಕ್ಕೆ ಟೈಂ ಪತ್ರಿಕೆಯ ನೂರು ಜನರ ಯಾದಿಯಲ್ಲಿ, ವೀಕ್ ಪತ್ರಿಕೆಯ ೨೦ ಮಹತ್ವದ ಭಾರತೀಯರ ಯಾದಿಯಲ್ಲಿ ವಿಕ್ರಂ ಹೆಸರು ದಾಖಲಾದದ್ದಲ್ಲದೇ ದೊಡ್ಡ ವಾರ್ತಾವಾಹಿನಿಗಳಲ್ಲಿ ಆತನ ಸಂದರ್ಶನಗಳೂ ಬಂದಿವೆ. ಆದರೂ ವಿಕ್ರಂ ೧೯೯೭ರಲ್ಲಿ ಪ್ರಾರಂಭಿಸಿ, ಇಷ್ಟೆಲ್ಲಾ ಖ್ಯಾತಿಯನ್ನು ನೀಡಿದ ಸಂಸ್ಥೆಯಲ್ಲಿನ ತಮ್ಮ ಬಹುತೇಕ ಹೂಡಿಕೆಯನ್ನು ಕಳೆದ ವರ್ಷವಷ್ಟೇ ಮಾರಿ ಸಂಸ್ಥೆಯ ದಿನನಿತ್ಯದ ಕಾರ್ಯವನ್ನು ಹೊಸ ಹೂಡಿಕೆದಾರರಿಗೆ ಒಪ್ಪಿಸಿ ಕೈತೊಳೆದುಕೊಂಡರು.




ಆತ್ಮಹತ್ಯೆಗಳು: ರೈತರೇ ಏಕೆ?

ಒಂದು ವ್ಯಾಪಾರ ವಿಫಲಗೊಂಡಾಗ ಆ ವ್ಯಾಪಾರಿ ಏನು ಮಾಡಬಹುದು? ಸ್ವಲ್ಪ ಯೋಚಿಸಿ ನೋಡಿದರೆ ನಮಗೆ ಅನೇಕ ಉತ್ತರಗಳು ಕಾಣಸಿಗುತ್ತವೆ. ಆ ವ್ಯಾಪಾರಿ ಹಳೆಯ ವ್ಯಾಪಾರವನ್ನು ಮುಚ್ಚಿ ಹೊಸ ವ್ಯಾಪಾರಕ್ಕೆ ಕಾಲಿಡಬಹುದು, ವ್ಯಾಪಾರವನ್ನೇ ಬಿಟ್ಟು ಹೊಸ ನೌಕರಿಯನ್ನು ಹಿಡಿಯಬಹುದು, ವಿಫಲಗೊಂಡ ವ್ಯಾಪಾರವನ್ನು ಯಾರಿಗಾದರೂ ಮಾರಿ ಸುಮ್ಮನಾಗಬಹುದು, ಆದರೆ ವಿಫಲ ವ್ಯಾಪಾರಿಗಳು ತಮ್ಮ ಪ್ರಾಣ ಕಳೆದುಕೊಳ್ಳುವುದನ್ನು ನಾವು ನೋಡುವುದಿಲ್ಲ. ಎಲ್ಲೋ ಆಗಾಗ ವ್ಯಾಪಾರಿಗಳು ಸಾಲದ ಹೊರೆಯನ್ನು ತಾಳಲಾರದೇ ಪ್ರಾಣ ತೆಗೆದುಕೊಂಡದ್ದನ್ನು ನಾವು ಕಾಣುತ್ತೇವಾದರೂ ಈ ಆತ್ಮಹತ್ಯೆಗಳ ಸಂಖ್ಯೆ ರೈತರ ಆತ್ಮಹತ್ಯೆಗಳ ಸಂಖ್ಯೆಗೆ ಹೋಲಿಸಿದರೆ ತೀರಾ ಕಡಿಮೆಯೇ.







ಯಂತ್ರ-ಮಾನವ ದ್ವಂದ್ವ!

ಹಲವು ವರ್ಷಗಳ ಹಿಂದೆ ಕೆನಡಾದ ಕ್ಯುಬೆಕ್ ಪ್ರಾಂತಕ್ಕೆ ಅಲ್ಲಿನ ಸಹಕಾರ ಸಂಘಗಳನ್ನು ಅಧ್ಯಯನ ಮಾಡಲು ಹೋಗಿದ್ದೆ. ಆಗ ಫ್ರಾಂಮ್ಟನ್ ಅನ್ನುವ ಒಂದು ಪುಟ್ಟ ಹಳ್ಳಿಯಲ್ಲಿದ್ದ ಸಹಕಾರ ಸಂಘವನ್ನು ಭೇಟಿಮಾಡುವ ಅವಕಾಶ ಸಿಕ್ಕಿತ್ತು. ಆ ಹಳ್ಳಿಯ ಸಹಕಾರ ಸಂಘ [ಕೇಸ್ ಪಾಪ್ಯುಲೇರ್]ದ ಮ್ಯಾನೇಜರ್ ಒಂದು ರೀತಿಯ ದುಃಖದಲ್ಲಿದ್ದ. ನಮ್ಮ ದೇಶದ ಹಾಗೆಯೇ ಮೂರು ಮಜಲಿನ ಸಹಕಾರೀ ವ್ಯವಸ್ಥೆಯಲ್ಲಿ ಫ್ರಾಂಮ್ಟನ್ ಹಳ್ಳಿಸ್ಥರದ ಸಹಕಾರೀ ಸಂಸ್ಥೆ. ಅದರ ಮೇಲೆ ಹಲವು ಪ್ರಾಂತೀಯ ಸಂಸ್ಥೆಗಳ ಒಕ್ಕೂಟ ಹಾಗೂ ಆಮೇಲೆ ರಾಜ್ಯಸ್ಥರದ ಸಹಕಾರೀ ಬ್ಯಾಂಕು. ಎಲ್ಲವೂ ನಮ್ಮಂತೆಯೇ. ವ್ಯತ್ಯಾಸವಿಷ್ಟೇ - ಒಟ್ಟಾರೆ ಆ ಸಹಕಾರ ವ್ಯವಸ್ಥೆ ಹೆಚ್ಚಿನ ಖರ್ಚಿನದ್ದಾಗಿದ್ದು ಲಾಭವನ್ನು ಮಿಕ್ಕ ಬ್ಯಾಂಕುಗಳಷ್ಟು ಆರ್ಜಿಸುತ್ತಿರಲಿಲ್ಲ. ಅದಕ್ಕಾಗಿ ವ್ಯವಸ್ಥೆಯಲ್ಲಿ ಆಂತರಿಕ ಅಧ್ಯಯನಗಳೂ ರಣನೀತಿಗಳೂ ತಯಾರಾಗತೊಡಗಿದ್ದುವು.




ನಾ ಹೇಗೆ ಬಡವನು ನಾ ಹೇಗೆ ಪರದೇಶಿ..

ಅಭಿವೃದ್ಧಿಯ ಮಾತನಾಡುವಾಗಲೆಲ್ಲಾ ಬಡತನದ ರೇಖೆಯ ಮಾತು ಸಹಜವಾಗಿ ಬರುತ್ತದೆ. ಬಡತನದ ರೇಖೆಯ ಮೇಲಿರುವ ಜನಸಂಖ್ಯೆ ಪ್ರಮಾಣ ಅಭಿವೃದ್ಧಿಯ ಅನೇಕ ಮಾಪಕಗಳಲ್ಲಿ ಒಂದು. ಭಾರತದಲ್ಲಿ ಈ ರೇಖೆಯನ್ನು ನಿರ್ಧರಿಸಲು ಕ್ಯಾಲೋರಿಫಿಕ್ ವ್ಯಾಲ್ಯೂ ಆಧಾರದ ಮೇಲೆ [ಅಂದರೆ ಇಂತಿಷ್ಟು ಶಕ್ತಿಯನ್ನು ಆರ್ಜಿಸಲು ಬೇಕಾದ ಆಹಾರವನ್ನು ಕೊಳ್ಳಲು ಆಗುವ ಖರ್ಚಿನ ಆಧಾರದ ಮೇಲೆ] ವಾರ್ಷಿಕ ಆದಾಯವನ್ನು ನಿಗದಿ ಮಾಡಲಾಗಿದೆ. ಪ್ರತೀ ವರ್ಷ ಸರಕಾರ ಇಂತಿಷ್ಟು ಮಂದಿ ಬಡತನದ ರೇಖೆಯನ್ನು ಉಲ್ಲಂಘಿಸಿದ್ದಾರೆಂದು ಘೋಷಿಸಿ ತನ್ನ ಬೆನ್ನನ್ನು ತಟ್ಟಿಕೊಳ್ಳುತ್ತದೆ. ಸರಕಾರದ ಯಾವುದೇ ಅಂಕಿ ಅಂಶಗಳನ್ನು ಅನುಮಾನದಿಂದ ನೋಡುವ ಜನ ಈ ಮಾಪನವನ್ನು ಸಹಜವಾಗಿ ಪ್ರಶ್ನಿಸುತ್ತಾರೆ. ವಿಶ್ವದಾದ್ಯಂತ ಬಡತನವನ್ನು ಅಳೆಯಲು [ಸ್ಥಳೀಯ ಹಣದ ಖರೀದಿಯ ಶಕ್ತಿಯನುಸಾರ] ದಿನಕ್ಕೊಂದು ಡಾಲರ್ ಸಮಾನವಾದ ಆದಾಯವನ್ನು ಮಾಪಕವನ್ನಾಗಿ ಇಟ್ಟುಕೊಳ್ಳಲಾಗಿದೆ. ಈಗೀಗ ಇದನ್ನು ಎರಡು ಹಂತಗಳಲ್ಲಿ ಅಳೆಯುವುದೂ ಉಂಟು. ದಿನಕ್ಕೊಂದು ಡಾಲರ್‌ಗಿಂತ ಕಡಿಮೆ ಆರ್ಜಿಸುವ ಅತೀ-ಬಡವರು ಹಾಗೂ ಎರಡು ಡಾಲರ್‌ವರೆಗೆ ಆದಾಯವಿರುವ ಬಡವರು.






ವಲಸೆ ಕಾರ್ಮಿಕರ ಹಣಪಾವತಿಯ ತಂತ್ರಜ್ಞಾನ

ಕಳೆದ ವರ್ಷ ನಾವುಗಳು ಕ್ಯಾತದೇವರಗುಡಿಯ ಅರಣ್ಯದ ಪ್ರಾಂತಕ್ಕೆ ಪ್ರವಾಸ ಹೋದಾಗ ಜಂಗಲ್ ಲಾಡ್ಜಸ್‍ನ ಗೈಡ್ ಕಂ ಡ್ರೈವರ್ ಹರ್ ಬಹದ್ದೂರ್ ಥಾಪಾ ಜೊತೆ ಮಾತು ಬೆಳೆಸಿದ್ದೆ. ಥಾಪಾ ಹಿಮಾಚಲ ಪ್ರದೇಶದವನು, ಭಾರತೀಯ ಸೇನೆಯಲ್ಲಿದ್ದು ಯಾವುದೋ ಲಕ್-ಬೈ-ಚಾನ್ಸ್ ಆಗಿ ಇಲ್ಲಿ ಕೆಲಸ ಸಿಕ್ಕಿತ್ತಂತೆ. ದೂರದ ಹಿಮಾಚಲಕ್ಕೆ ಅವನು ಹಣ ಪಾವತಿಸುವುದು ಹೇಗೆ ಅನ್ನುವ ಕುತೂಹಲ ನನ್ನಲ್ಲಿತ್ತು. ವಲೆಸೆ ಹೋಗುವ ಕೆಲಸಗಾರರಿಗೆ ಇದು ದೊಡ್ಡ ಸವಾಲೆನ್ನುವುದನ್ನು ನಾವುಗಳು ಅನೇಕ ಅಧ್ಯಯನಗಳಲ್ಲಿ ಕಂಡುಕೊಂಡಿದ್ದೆವು. ಸಾಮಾನ್ಯವಾಗಿ ವಲೆಸೆ ಹೋಗುವ ಕೆಲಸಗಾರರು ತಮ್ಮ ಮುಕದ್ದಂ [ಮೇಸ್ತ್ರಿಗಳ] ಮೂಲಕವೇ ಎಲ್ಲ ವ್ಯವಹಾರವನ್ನೂ ಮಾಡುತ್ತಾರೆ. ಆದರೆ ಮುಕದ್ದಂ ಇಲ್ಲದ ಕೆಲಸದಲ್ಲಿರುವ ಈತ ಕರ್ನಾಟಕದಲ್ಲಿ ಸಂಪಾದಿಸುವ ಹಣವನ್ನು ಹಿಮಾಚಲಕ್ಕೆ ತಲುಪಿಸುವುದೂ ಅಥವಾ ಸೂರತ್‍ನ ವಜ್ರದ ಯೂನಿಟ್ಟುಗಳಲ್ಲಿ ಕೆಲಸ ಮಾಡುವ ಒಡಿಯಾ ಕೆಲಸಗಾರರು ಒರಿಸ್ಸಾಗೆ ಹಣ ತಲುಪಿಸುವುದೂ ಒಂದು ಸವಾಲೇ ಆಗಿತ್ತು. ಕಾರಣಗಳು ಅನೇಕ.



ಗೋದಾವರಿಯ ಅಕ್ಷರಸ್ಥರೂ, ಧರ್ಮಪುರಿಯ ವಿದ್ಯಾವಂತರೂ..

ಈಚೆಗೆ ಒಂದು ಅಧ್ಯಯನಕ್ಕಾಗಿ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆ ಮತ್ತು ತಮಿಳುನಾಡಿನ ಧರ್ಮಪುರಿ ಜಿಲ್ಲೆಗಳಿಂದ ನಾವು ಮಾಹಿತಿಯನ್ನು ಸಂಗ್ರಹಿಸಿದೆವು. ಪಶ್ಚಿಮ ಗೋದಾವರಿ ಜಿಲ್ಲೆ ಎಲ್ಲ ರೀತಿಯಿಂದಲೂ ಧರ್ಮಪುರಿಗಿಂತ ಹೆಚ್ಚು ವಿಕಾಸ ಕಂಡಿರುವ ಜಿಲ್ಲೆ ಅನ್ನುವುದರಲ್ಲಿ ಅನುಮಾನವಿಲ್ಲ. ಇಲ್ಲಿ ಮಳೆಯೂ ಧರ್ಮಪುರಿಗಿಂತ ಹೆಚ್ಚು. ಪಶ್ಚಿಮ ಗೋದಾವರಿಯಲ್ಲಿ ೮೦ ಪ್ರತಿಶತ ಕೃಷಿ ಭೂಮಿಗೆ ನೀರಾವರಿಯ ವ್ಯವಸ್ಥೆ ಇದ್ದರೆ ಧರ್ಮಪುರಿಯಲ್ಲಿ ಅದು ಅರ್ಧಕ್ಕಿಂತಲೂ ಕಡಿಮೆ. ಸೆನ್ಸಸ್ ಮತ್ತು ಜಿಲ್ಲಾ ಮಾಹಿತಿಯನ್ನು ಗಮನಿಸಿದಾಗ ನಮಗೆ ಒಟ್ಟಾರೆ ಎಲ್ಲ ವಿಭಾಗಗಳಲ್ಲೂ ಧರ್ಮಪುರಿ ಹಿಂದುಳಿದಿರುವುದು ಕಾಣಿಸುತ್ತದೆ. ಉದಾಹರಣೆಗೆ, ಆರುವರುಷಕ್ಕೆ ಕಡಿಮೆ ವಯಸ್ಸಿನ ಮಕ್ಕಳ ಮಾಹಿತಿಯನ್ನು ಕಂಡಾಗ ಪ್ರತಿ ಸಾವಿರ ಗಂಡು ಮಕ್ಕಳಿಗೆ ಕೇವಲ ೮೩೩ ಹೆಣ್ಣು ಮಕ್ಕಳಿದ್ದಾರೆ. ಹಾಗಾಗಿ ಈ ಜಿಲ್ಲೆಯಲ್ಲಿ ಭ್ರೂಣ ಹತ್ಯೆ ಆಗುತ್ತಿರಬಹುದಾದ ಸಾಧ್ಯತೆಯನ್ನೂ ನಾವುಗಳು ತಳ್ಳಿಹಾಕುವಂತಿಲ್ಲ.



ಎರಡು ವರ್ಷಗಳ ನಂತರ... ಮುಚ್ಚಿದ ಪ್ರೀಮಿಯರ್

ವಿಸ್ತರಿಸಿಕೊಳ್ಳಲು ಸಹಾಯಕ ಕೋಚಿಂಗಿಗೆ ಹೋಗುತ್ತಿದ್ದಾಗ ಒಂದು ದಿನ ಅಲ್ಲಿ ಪಾಠ ಮಾಡುತ್ತಿದ್ದ ವಿಶ್ವನಾಥ್ ಹೇಳಿದ್ದರು: "ನಮ್ಮ ವಿತ್ತೀಯ ನಿರ್ಮತಿಯ ತಲ್ಲಣಗಳನ್ನು ಹೆಚ್ಚು ಅರ್ಥಮಾಡಿಕೊಳ್ಳಬೇಕಾದರೆ, ನೀನು ಶೂಮೇಕರನ ಸ್ಮಾಲ್ ಇಸ್ ಬ್ಯೂಟಿಫುಲ್ ಓದು. ನಾನು ಪ್ರೀಮಿಯರ್ ಬುಕ್ ಷಾಪಿನ ಶಾನ್‌ಭಾಗಿಗೆ ಹೇಳಿದ್ದೇನೆ. ನಮ್ಮವರಿಗೆ ಆತ ೧೫% ರಿಯಾಯಿತಿಯಲ್ಲಿ ಪುಸ್ತಕಗಳನ್ನು ಮಾರುತ್ತಾರೆ". ಹೀಗೆ ಸ್ಮಾಲ್ ಇಸ್ ಬ್ಯೂಟಿಫುಲ್ ಅನ್ನುವ ಪುಸ್ತಕವನ್ನು ಹುಡುಕಿ ಹೊರಟ ನನಗೆ ಆ ಪುಸ್ತಕದ ಟೈಟಲ್ಲಿನ ಅರ್ಥದ ಪದರ-ಮಜಲುಗಳು ಶಾನಭಾಗರ ಪ್ರೀಮಿಯರ್ ಬುಕ್ ಷಾಪ್ ನೋಡಿದಾಗ ತಟ್ಟಿತು. ಪುಟ್ಟ ಅಂಗಡಿಯಲ್ಲಿ ಎಷ್ಟೊಂದು ಭಂಡಾರವನ್ನು ಅಡಕಮಾಡಿ ಇಡಬಹುದು ಅನ್ನುವುದಕ್ಕೆ ಪ್ರೀಮಿಯರ್ ಸಂಕೇತವಾಯಿತು. ಆದರೆ ಅದನ್ನು ಬ್ಯೂಟಿಫುಲ್ ಎಂದು ಕರೆಯುವುದಕ್ಕೆ ಮಾತ್ರ ಸಾಧ್ಯವಾಗಿರಲಿಲ್ಲ. ಅದರ ಆತ್ಮ ಬ್ಯೂಟಿಫುಲ್ ಆದರೂ ಆ ಅಂಗಡಿಯಲ್ಲಿ ಪುಸ್ತಕಗಳನ್ನು ಆಯುವುದಕ್ಕೆ ಪಳಗಿದ ಕೈಗಳೇ  ಬೇಕಾಗಿದ್ದುವು.





ಸೊರಗಿದ ಪ್ರೀಮಿಯರ್....

ಅಹಮದಾಬಾದಿನಲ್ಲಿ ನನಗೆ ಸಿಗದಿರುವ ಹಾಗೂ ತಹತಹಿಸುವ ಅಂಶ ಒಂದು ಒಳ್ಳೆಯ ಪುಸ್ತಕದಂಗಡಿ ಇಲ್ಲದ್ದು. ಬೆಂಗಳೂರಿನಿಂದ ಬಂದಿರುವ ನನಗೆ ಎಂ.ಜಿ ರಸ್ತೆಯ ಆಸುಪಾಸಿನಲ್ಲಿರುವ ಹೊಸ-ಹಳೆಯ ಪುಸ್ತಕಗಳನ್ನು ಮಾರುವ ಅದ್ಭುತ ಪುಸ್ತಕದಂಗಡಿಗಳು, ಮೆಜೆಸ್ಟಿಕ್ಕಿನಲ್ಲಿ ಸಪ್ನಾ, ಕನ್ನಡಪುಸ್ತಕಗಳಿಗೆ ಸಾಹಿತ್ಯ ಭಂಡಾರ, ಗಾಂಧಿಬಜಾರಿನ ಅಂಕಿತಾ ಹಾಗೂ ರೆಸಿಡೆಂನ್ಷಿಯಲ್ ಪ್ರದೇಶಗಳಲ್ಲೂ ಇರುವ ಜಯನಗರದ ನಾಗಶ್ರೀ, ಪ್ರಿಸಂ ಎಲ್ಲವನ್ನೂ ಪರಿಗಣಿಸಿದಾಗ ಅಹಮದಾಬಾದಿನ ಬಗ್ಗೆ ಅಸಮಾಧಾನವಾಗುವುದು ಸಹಜವೇ. ಮೊದಲಬಾರಿಗೆ ನಾನು ವಿದ್ಯಾರ್ಥಿಯಾಗಿ ಗುಜರಾತ್ ಪ್ರವೇಶಮಾಡಿದಾಗ ಪುಟ್ಟ ನಗರವಾದ ಆಣಂದದ ಸ್ಟೇಷನ್ ರೋಡಿನಲ್ಲಿ ನಡೆದಾಡುತ್ತಾ "ಬುಕ್ಸ್" ಎಂದು ಸ್ವಾಗತಿಸುತ್ತಿದ್ದ ದೊಡ್ಡ ಫಲಕವನ್ನು ನೋಡಿ ವಿಚಿತ್ರ ಪುಳಕದಿಂದ ಅದರ ಸಮೀಪಕ್ಕೆ ಹೋದರೆ ನನಗೆ ಕಂಡದ್ದು ಕೆಂಪು ಬಣ್ಣದ "ಚೋಪಡಿ" ಎಂದು ಕರವ ಲೆಕ್ಕಪತ್ರದ ಲೆಡ್ಜರುಗಳು. ಈ ಚೋಪಡಿಗಳಲ್ಲಿ ಕಾಣುವುದು ಯಾವ ಆಯಕರ ಆಫೀಸರನೂ ಅರ್ಥೈಸಲು ಸಾಧ್ಯವಾಗದಂತಹ ಮೋಡಿ ಅಕ್ಷರಗಳ ಮಾಯಾಲೋಕ.

ಮುಂದೆ..............


ಗುರುಪ್ರಸಾದ್ ಕಾಗಿನೆಲೆ - ಈ ವರೆಗೆ

ಈಚೆಗಷ್ಟೇ ನಾನು ಗುರುವಿನ ಶಕುಂತಳಾ ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ಹಾಕಿಕೊಂಡಿದ್ದ ಟಿಪ್ಪಣಿಗಳಾಧಾರದ ಮೇಲೆ ಅವರ ಬಗೆಗೆ ಬರೆದಿದ್ದೆ. ಆ ಬರಹದ ಕಡೆಯ ಸಾಲುಗಳಿಂದ ಅವರ ಈ ವರೆಗಿನ ಬರವಣಿಗೆಯ ಅವಲೋಕನ ಮಾಡುತ್ತೇನೆ. 

"ಗುರುಪ್ರಸದ್ ನನ್ನ ಮಟ್ಟಿಗೆ ಕನ್ನಡದಲ್ಲಿ ಬರೆಯುತ್ತಿರುವ ಸಮಕಾಲೀನರಲ್ಲಿ ಒಂದು ಭಿನ್ನ ಧ್ವನಿ ಅನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಭಿನ್ನತೆಯೊಂದೇ ಅವರ ಗುಣವಲ್ಲ. ಅವರಿಗೆ ಕಥೆ ಕಟ್ಟುವ ಕಲೆ ಕೈವಶವಾಗಿದೆ. ಅವರ ಸಂದರ್ಭಕ್ಕೆ ತಕ್ಕಂತೆ ಮಾನವ ವ್ಯಾಪಾರಗಳ ಬಗ್ಗೆ ಅದರ ಅರ್ಥಹೀನತೆ-ಅರ್ಥವಂತಿಕೆಯ ಬಗ್ಗೆ ಅವರು ಸಮರ್ಥವಾಗಿ ಬರೆಯಬಲ್ಲರು. ಗ್ಲೋಬಲ್ ಆಗುತ್ತಿರುವ ನಮ್ಮ ಸಮಾಜದ ತಲ್ಲಣಗಳನ್ನು ಅವರು ಸೂಕ್ಷ್ಮವಾಗಿ ಗ್ರಹಿಸಬಲ್ಲರು. ಕನ್ನಡ ಲೋಕ ಅವರನ್ನು ಉತ್ಸಾಹದಿಂದ ಬರಮಾಡಿಕೊಂದು ಪ್ರೋತ್ಸಾಹಿಲಿ ಅನ್ನುವ ಆಶಯ ನನ್ನದು. ಈ ಮುಖ್ಯವಾದ ಧ್ವನಿಗೆ ಸಿಗಬೇಕಾದ ಪ್ರಾಮುಖ್ಯತೆ ಸಿಗಲೆಂದು ಹಾರೈಸುತ್ತೇನೆ."

ಹೀಗೆ ಬರೆಯುತ್ತಿದ್ದಾಗ ನನಗೆ ಗುರುವಿನ ಮಿಕ್ಕ ಕೃತಿಗಳ ಪರಿಚಯವಿರಲಿಲ್ಲ. ಅವರ ಕಾದಂಬರಿ ಬಿಳಿಯ ಚಾದರ ಬಿಡುಗಡೆಯಾಗಿರಲಿಲ್ಲ ಹಾಗೂ ಅವರ ಎರಡೂ ಪುಸ್ತಕಗಳಾದ ನಿರ್ಗುಣ ಮತ್ತು ಪ್ರಬಂಧಗಳ ಸಂಕಲನವಾದ ವೈದ್ಯ-ಮತ್ತೊಬ್ಬ ನಾನು ಓದಿರಲಿಲ್ಲ. ಈಗ ನಾನು ಅವುಗಳೆಲ್ಲವನ್ನೂ ಓದಿದ್ದೇನೆ. ಓದಿದ ನಂತರವೂ ನನ್ನ ಮೇಲಿನ ಅಭಿಪ್ರಾಯದಲ್ಲಿ ಮೂಲಭೂತ ಬದಲಾವಣೆಯೇನೂ ಆಗಿಲ್ಲ. ಆದರೂ ಒಬ್ಬ ಲೇಖಕನ ಕಾಳಜಿಗಳು ಹಾಗೂ ಬರಹಗಾರ ತೆರೆದುಕೊಳ್ಳುವ ರೀತಿಯಬಗ್ಗೆ ಕೆಲ ಒಳನೋಟಗಳನ್ನು ನಾನು ಈ ಹೊಸ ಓದಿನ ಮೂಲಕ ಪಡೆಯಲು ಪ್ರಯತ್ನಿಸುತ್ತಿದ್ದೇನೆ. 




ಚಿಕ್ಕಸಾಲಕ್ಕೆ ವಲಸೆಬಂದ ವಿಕಾಸವಾದಿಗಳು

ಎರಡು ದಶಕಗಳ ಕೆಳಗೆ ಮೈಕ್ರೊಫೈನಾನ್ಸ್ [ಚಿಕ್ಕಸಾಲ]ದ ಮೊದಲ ಅಲೆ ಪ್ರಾರಂಭವಾಯಿತು ಎನ್ನಬಹುದು. ಚಿಕ್ಕಸಾಲವೆಂದರೆ ಸ್ವ-ಸಹಾಯ ಗುಂಪುಗಳೆಂದು ನಾವುಗಳು ಸರಳವಾಗಿ ಅರ್ಥ ಮಾಡಿಕೊಳ್ಳುತ್ತಿದ್ದೆವು. ನಮ್ಮ ದೇಶಕ್ಕೆ ನಮ್ಮದೇ ಆದ ಸಹಕಾರೀ ತತ್ವದ ಮೇಲೆ ಆಧಾರಿತವಾದ ಮಹಿಳೆಯರಿಂದಲೇ ಚಲಾಯಿಸಲ್ಪಡುತ್ತಿದ್ದ ಲಕ್ಷಾಂತರ ಗುಂಪುಗಳು ಹೆಚ್ಚಾಗಿ ದಕ್ಷಿಣ ಭಾರತದಲ್ಲಿದ್ದುವು. ಈ ಗುಂಪುಗಳ ಜೊತೆಗೆ ಅಹಮದಾಬಾದಿನ ಸೇವಾ ಬ್ಯಾಂಕನ್ನು ಚಿಕ್ಕಸಾಲಿಗರೆಂದು ಕರೆಯುವುದು ಪ್ರತೀತಿಯಾಗಿತ್ತು. ಈ ಗುಂಪುಗಳನ್ನು ಆಯೋಜಿಸುತ್ತಿದ್ದ ಪ್ರದಾನ್, ಮೈರಾಡಾ, ಧಾನ್ ಫೌಂಡೇಷನ್, ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮೀಣ ವಿಕಾಸ ವಿಭಾಗದಂತಹ ಸ್ವಯಂ ಸೇವಾ ಸಂಸ್ಥೆಗಳು, ತಮ್ಮದೇ ಮಹಿಳಾ ಸೇವಾ ಸಹಕಾರಿ ಬ್ಯಾಂಕಿನ ಮೂಲಕ ಚಿಕ್ಕಸಾಲವನ್ನು ನೀಡುತ್ತಿದ್ದ ಅಹಮದಾಬಾದಿನ ಸೇವಾ ಈ ಎಲ್ಲ ಸಂಸ್ಥೆಗಳಿಗೂ ತಾವು ನಡೆಸುತ್ತಿದ್ದ ವಿಕಾಸ ಕಾರ್ಯದ ಒಂದು ಭಾಗವಾಗಿ, ಬ್ಯಾಂಕುಗಳು ನೀಡುವ ವಿತ್ತೀಯ ಸೇವೆಗೆ ಪೂರಕವಾಗಿ, ಹಾಗೂ ಬ್ಯಾಂಕುಗಳು ಇಂಥ ಸೇವೆಗಳನ್ನು ಬಡವರಿಗೆ ನೀಡದಿದ್ದಾಗ ಅವುಗಳಿಗೆ ಸವಾಲಾಗಿ ಈ ಸಂಸ್ಥೆಗಳು ಕೆಲಸ ಮಾಡುತ್ತಿದ್ದುವು.



ಬುದ್ಧಿವಂತಿಕೆಯ ಗೆರೆ

ಒಂದು ಸ್ವಯಂ ಸೇವಾ ಸಂಸ್ಥೆ ಯಾವ ಕೆಲಸವನ್ನು ಎಷ್ಟು ಮಾಡಬೇಕು - ಎಲ್ಲಿ ಅದನ್ನು ನಿಲ್ಲಿಸಬೇಕು ಅನ್ನುವುದು ಕುತೂಹಲದ ವಿಷಯ. ಇದು ನಮ್ಮ ಗ್ರಾಮೀಣ ಪ್ರಾಂತದಲ್ಲಿ ಕೆಲಸ ಮಾಡುತ್ತಿರುವ ಒಳ್ಳೆಯ ಸಂಸ್ಥೆಗಳ ಮುಂದೆ ಆಗಾಗ ತಲೆಯೆತ್ತಿ ನಿಲ್ಲುವ ದ್ವಂದ್ವ. ಉತ್ತರ ಭಾರತದ ಅನೇಕ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿರುವ ಪ್ರದಾನ್ [ಪ್ರೊಫೆಷನಲ್ ಅಸಿಸ್ಟೆಂಸ್ ಫರ್ ಡೆವೆಲಪ್ಮೆಂಟ್ ಆಕ್ಷನ್] ಸಂಸ್ಥೆಯ ಕಾರ್ಯಕಲಾಪಗಳು ಹೀಗೆ ಗ್ರಾಮೀಣ ಬಡವರ ಬದುಕಿನ ಅನೇಕ ಮಜಲುಗಳನ್ನು ಮುಟ್ಟಿ ಹೋಗುತ್ತದೆ. ಕೆಲ ವರ್ಷಗಳ ಹಿಂದೆ ನಾನು ಝಾರ್ಖಂಡ್ ರಾಜ್ಯದ ಗೊಡ್ಡಾ ಜಿಲ್ಲೆಗೆ ಅವರ ಕೆಲಸವನ್ನು ನೋಡಲು ಹೋಗಿದ್ದೆ. ಅಲ್ಲಿ ಕೆಲಸ ಪ್ರಾರಂಭವಾದದ್ದು ಸ್ವ-ಸಹಾಯ ಗುಂಪುಗಳನ್ನು ಏರ್ಪಾಟು ಮಾಡಿ ಆ ಮೂಲಕ ಉಳಿತಾಯ-ಸಾಲದ ಚಟುವಟಿಕೆಯನ್ನು ತಮ್ಮ ನಡುವೆಯೇ ನಡೆಸಿಕೊಳ್ಳುವುದರ ಮೂಲಕ. ಆದರೆ ಬಡವರು ಕೇವಲ ಉಳಿತಾಯ ಮಾಡುವುದು - ಸುಲಭವಾಗಿ ಸಾಲ ಪಡೆಯುವುದು - ಈ ಎರಡರಿಂದಾಗಿಯೇ ಅಭಿವೃದ್ಧಿಯಾಗುತ್ತದೆ ಎಂದು ನಾವು ನಂಬುವುದಕ್ಕೆ ಆಗುವುದಿಲ್ಲ. ಏಕೆಂದರೆ ಹೀಗೆ ಸಾಲವಾಗಿ ಪಡೆದ ಹಣವನ್ನು ಹೇಗೆ ಉಪಯೋಗಿಸಬೇಕು ಅದರಿಂದ ಹೇಗೆ ಹೆಚ್ಚು ಆದಾಯ ಪಡೆಯಬೇಕು ಅನ್ನುವ ಪ್ರಶ್ನೆಯನ್ನೂ ನಾವು ಎದುರಿಸಬೇಕಾಗುತ್ತದೆ. ಮೈಕ್ರೋಫೈನಾನ್ಸ್ [ಚಿಕ್ಕಸಾಲ] ದಿಂದ ಲೈವ್ಲಿಹುಡ್ ಫೈನಾನ್ಸ್ [ಜೀವನೋಪಾಧಿಯ ಸಾಲ]ಕ್ಕೆ ಬೆಳೆಯುವ ಬಗ್ಗೆ ಸಾಕಷ್ಟು ಚರ್ಚೆ ಈಚಿನ ದಿನಗಳಲ್ಲಿ ನಡೆಯುತ್ತಿದೆ.




ವೈಟ್ ಹೊಟೇಲ್: ಕೋಣೆಗೊಬ್ಬ ಕಲಾವಿದ - ಕಲಾವಿದನಿಗೊಂದು ಕೋಣೆ.

ಛಳಿಗಾಲದಲ್ಲಿ ನಡುಗಾಡುತ್ತಾ ಇಲ್ಲಿಗೆ ಬಂದು ಪಾಠಮಾಡುವುದು ಗಮ್ಮತ್ತಿನ ವಿಷಯವೇನೂ ಅಲ್ಲ. ಭಾಷೆ ಬಾರದ, ಊಟ ಒಗ್ಗದ, ಈ ಜಾಗದಲ್ಲಿ ನಾನು ಅನಕ್ಷರಸ್ಥ - ಬರೇ ಫ್ರೆಂಚ್ ಮತ್ತು ಫ್ಲೆಮಿಷ್ ಮಾತನಾಡುವ ಈ ಬಹುಭಾಷಾ ನಗರದಲ್ಲಿ ನಾನು ಇಳಿದಾಗಲೆಲ್ಲಾ ಒಂದೊಂದು ಹೆಜ್ಜೆಗೂ ಜನರನ್ನು ಮುಂದಿನ ಅಡಿ ಎಲ್ಲಿಡಬೇಕೆಂದು ಕೇಳಿಕೊಳ್ಳುತ್ತಾ ನಡೆಯಬೇಕು. ನಕ್ಷೆಗಳನ್ನು ನೋಡಿ ಓಡಾಡುವ ಜನರ ಮಧ್ಯೆ ಮತ್ತೆ ಮತ್ತೆ ದಾರಿ ಕೇಳುವ ವಿಚಿತ್ರಕ್ಕಿಳಿಯಬೇಕು. ಹಲವು ಬಾರಿ ನಕ್ಷೆಗಳೂ ಅವರ ಭಾಷೆಯಲ್ಲೇ ಇರುತ್ತವೆ. ಹೋಗಲಿ ಕಂಪ್ಯೂಟರನ್ನು ತಗೆದು ಗೂಗಲ್ ಭಗವಾನನ ಮೊರೆ ಹೋಗಬೇಕೆಂದರೆ ಆತನೂ ಸ್ಥಳೀಯ ಭಾಷೆಯನ್ನು ಬಿಟ್ಟು ಆಂಗ್ಲಕ್ಕೆ ಬರಲು ಸಮಯ ತೆಗೆದುಕೊಳ್ಳುತ್ತಾನೆ. ಹೀಗೆ ೨೪ ರಾಷ್ಟ್ರಗಳ ಪ್ರತಿನಿಧಿಸುವ ವಿದ್ಯಾರ್ಥಿವೃಂದಕ್ಕೆ ಭಾರತೀಯ ಮೈಕ್ರೊಫೈನಾನ್ಸ್ ಬಗ್ಗೆ ಲೆಕ್ಚರುಗಳನ್ನು ಕುಟ್ಟುವುದು ಸುಲಭವಲ್ಲ. ಮೊದಲ ದಿನದಂದೇ ನಾನು ಕ್ಲಾಸಿಗೆ ಹೇಳಿಬಿಟ್ಟೆ.



ಹೃದ್ರೋಗಿಗಳು ಕಡಿಮೆಯಾಗುತ್ತಾರೆ

ಬರಹಗಾರರು ನಗುವುದನ್ನ ಮರೆತಿಲ್ಲ. ಅವರು ಬರೆದ ಘನಘಂಭೀರ ಕೃತಿಗಳನ್ನು ವಿಮರ್ಶಕರು ಕುಯ್ದುಕುಯ್ದು ಒಳಗೆ ಅರ್ಥವನ್ನು ಹುಡುಕುವುದನ್ನು ನೋಡಿ ಅದನ್ನು ಅರ್ಥೈಸುವ ರೀತಿಯನ್ನ ನೋಡಿ, ವಿಮರ್ಶಕರ ಪದಪ್ರಯೋಗವನ್ನು ನೋಡಿ ನಗುತ್ತಲೇ ಇದ್ದಾರೆ. 

ಹೀಗೆ ಹೇಳಿದಾಗ ಬರಹಗಾರರಿಗೂ ವಿಮರ್ಶಕರಿಗೂ ವ್ಯತ್ಯಾಸವಿದೆ ಅನ್ನುವುದನ್ನು ನಾವು ಗಮನಿಸಬೇಕು. ಕವಿ, ಕಥೆಗಾರ, ನಾಟಕಕಾರರನ್ನು ಜನ ಬರಹಗಾರರೆಂದು ಗುರುತಿಸುತ್ತಲೇ ವಿಮರ್ಶಕರನ್ನು ಬೇರೆಯಾಗಿ ಇಟುಬಟ್ಟಿದ್ದಾರೆ! ಆದರೆ ಘಂಭೀರ ಕೃತಿಗಳಲ್ಲೂ ಹಾಸ್ಯವನ್ನು ಹುಡುಕುವುದು, ಖುಷಿಯನ್ನು ಹುಡುಕುವ ಜವಾಬ್ದಾರಿ ಇರುವುದು ಓದುಗನ ಮೇಲೆ ಅವಲಂಬಿತವಾಗಿದೆ. ಓದುಗನೇ ಆ ಕೃತಿಯನ್ನು ಘಂಭೀರವಾಗಿ ಸ್ವೀಕರಿಸಿದರೆ ಅದು ಬರಹಗಾರನ ತಪ್ಪೇ? 




ರಾಮಲಿಂಗ ರಾಜು ಎನ್ನುವ ಎನ್ ಮೈನಸ್ ವನ್ ಹೀರೋ

ಎಲ್ಲರ ನಂಬಿಕೆಗೆ ದ್ರೋಹ ಮಾಡಿರಬಹುದು ಆದರೆ ರಾಮಲಿಂಗ ರಾಜು ಕ್ರಿಮಿನಲ್ ಅಲ್ಲ ಎಂದು ತೆಲುಗು ಚಾನೆಲ್‌ಗಳು ನಡೆಸಿದ ಎಸ್.ಎಂ.ಎಸ್. ಪೋಲ್ ತಿಳಿಸಿದೆಯಂತೆ. ಇದೊಂದು ಆಸಕ್ತಿಯ ಸುದ್ದಿ! ಈ ರೀತಿಯ ಸಿಂಪತಿ ರಾಜುವಿಗೆ ಬರುವುದರಲ್ಲಿ ಅಷ್ಟು ಆಶ್ಚರ್ಯವಾಗಬಾರದೇನೋ. ಯಾಕೆಂದರೆ ಅವರು ಸತ್ಯಂ ವಧಾ ಮಾಡಿದ್ದಲ್ಲದೇ ಕನ್ನೇಶ್ವರ ಧರ್ಮಂ ಚರಾ ಮಾಡಿದ್ದಾರೆ!  "ಇದರಿಂದ ನನಗೆ ಒಂದು ರೂಪಾಯಿಯ ಲಾಭವೂ ನನಗಾಗಿಲ್ಲ", ಎಂದ ಮೇಲೆ ಅವರು ಅಪರಾಧಿ ಹೇಗಾಗುತ್ತಾರೆ? ಆದರೆ ನಮ್ಮ ಪ್ರಶ್ನೆ "ನಿಮಗಂತೂ ಲಾಭವಾಗಿಲ್ಲ.. ಆದರೆ ಇದರಿಂದ ಯಾರಿಗೆ ಲಾಭವಾಯಿತು?" ಅನ್ನುವುದು.




ಶುಷ್ಕ ವಕ್ರ ಈ ನಗೆ

ಹಾಸ್ಯದ ಬಗ್ಗೆ ವಿಶ್ಲೇಷಣೆ ಬರೆಯಬೇಕು ಎಂದು ಹಾಸ್ಯ ಬರೆಯುವ ಲೇಖಕರನ್ನಾಗಲೀ ಅಥವಾ ವಿಮರ್ಶಕರನ್ನಾಗಲೀ ಕೇಳುವುದೇ ಒಂದು ವಿಡಂಬನೆಯಲ್ಲವೇ. ಇನ್ನು ಆ ಬಗ್ಗೆ ಗಂಭೀರವಾಗಿ ಬರೆದರೆ ವಿಮರ್ಶಕರ ಮೀಮಾಂಸೆಯಾಗುತ್ತದೆ. ಆದರೆ ಅದನ್ನೇ ಲೇವಡಿ ಮಾಡಿದರೆ ಹೇಳಿದ ಕೆಲಸವನ್ನು ಮಾಡದಂತೆ ಆಗುತ್ತದೆ! ಈ ಇಕ್ಕಟ್ಟಿನಲ್ಲಿ ನನ್ನನ್ನು ಸಿಕ್ಕಿಹಾಕಿ ಎಲ್ಲ ಕುಹಕವನ್ನೂ ತೆರೆಮರೆಯಲ್ಲಿ ನೋಡುತ್ತಿರುವ ವಿಜಯ ಕರ್ನಾಟಕದ ಸಂಪಾದಕ ವೃಂದದ ಖುಷಿಯೇ ರೈ ಹಾಸ್ಯ. ಇದು ಡ್ರ್ರೈ ಹಾಗೂ ರೈ [ಐಶ್ವರ್ಯ, ಪ್ರಕಾಶ್...] ಹಾಸ್ಯಕ್ಕಿಂತ ಭಿನ್ನ.



  

ಮಕ್ಕಳಿಸ್ಕೂಲು ಮನೇಲಲ್ಲ

ಆಂಧ್ರಪ್ರದೇಶ - ರಂಗಾರೆಡ್ಡಿ ಜೆಲ್ಲೆ - ಶಂಕರಪಲ್ಲಿ ಮಂಡಲದ ಪೊದ್ದುಟೂರು ಗ್ರಾಮ ಸರಪಂಚ್ ಕಟಿಕೇ ಶ್ರೀನಿವಾಸ್ ಸಾಮಾನ್ಯ ಗ್ರಾಮೀಣ ರಾಜಕಾರಣಿಯಂತೆ ಕಾಣುವುದಿಲ್ಲ. ಯುವಕನೂ ವಿದ್ಯಾವಂತನೂ ಆಗಿರುವ ಆತ ತನ್ನ ಗ್ರಾಮದ ಬಗ್ಗೆ ಯೋಚಿಸುತ್ತಲೇ ಆ ಗ್ರಾಮದ ನಸೀಬು ವಿಸ್ತಾರವಾದ ಆರ್ಥಿಕ-ರಾಜಕೀಯ-ಸಾಮಾಜಿಕ ಆಗುಹೋಗುಗಳ ಜೊತೆ ಹೇಗೆ ಬೆಸೆದಿದೆ ಎಂದು ನೋಡಬಲ್ಲವ. ಹೀಗಾಗಿ ಆತನ ಜೊತೆ ಮಾತನಾಡುವುದೂ ಒಂದು ಒಳ್ಳೆಯ ಅನುಭವವೇ. ಆತ ಯಾವ ಪಕ್ಷಕ್ಕೆ ಸೇರಿದವ ಅನ್ನುವುದು ಮುಖ್ಯವಲ್ಲ, ಆದರೆ ಸರಪಂಚರಲ್ಲಿ ಇಂಥ ಯೋಚನಾಧೋರಣೆ ಇರುವುದು ನಿಜಕ್ಕೂ ಒಂದು ಉತ್ತಮ ಲಕ್ಷಣ ಅನ್ನಿಸುತ್ತದೆ.

ಆತನ ಸಹಜ ಬುದ್ಧಿವಂತಿಕೆಗೆ ತುಸುವಾದರೂ ಪೂರಕವಾಗಿರಬಹುದಾದ ಕಾರಣ ಆತ ಹಿಂದೆ ಎಂ.ವಿ.ಫೌಂಡೇಶನ್ [ಎಂ.ವಿ.ಎಫ್] ಜೊತೆಗೆ ಒಡನಾಡಿ ಅಲ್ಲಿನ ಗ್ರಾಮಾಂತರ ಶಾಲೆಯಲ್ಲಿ ಸ್ವಯಂ-ಪ್ರೇರಣೆಯಿಂದ ಪಾಠಮಾಡಿದ್ದ. ಎಂ.ವಿ.ಎಫ್ ರಂಗಾರೆಡ್ಡಿ ಜಿಲ್ಲೆಯಲ್ಲಿ ಹಲವಾರು ವರುಷಗಳಿಂದ ಕಷ್ಟ ಎನ್ನಿಸಬಹುದಾದ ಕೆಲಸವನ್ನು ಮಾಡುತ್ತಿದೆ. ಆ ಸಂಸ್ಥೆಯ ಮೂಲೋದ್ದೇಶ ಮಕ್ಕಳಿಗೆ ತಮ್ಮ ಸಹಜವಾದ ಹಕ್ಕುಗಳನ್ನು ಕೊಡಿಸುವುದು. ಹೀಗಾಗಿ ಅವರು ಹೇಳುವ ಮಾತುಗಳು ರಾಜಿಗೆ ಒಗ್ಗದ ಈ ಅಂಶಗಳ ಆಧಾರದಿಂದ ಕೂಡಿದೆ:


  

ಸ್ಲಂಡಾಗ್/ವೈಟ್ ಟೈಗರ್: ಸಂಭ್ರಮದ ನಡುವೆ ನೈತಿಕ ನಿಲುವಿನ ಕೆಲವು ಪ್ರಶ್ನೆಗಳು.

ಸ್ಲಂಡಾಗ್ ಮಿಲಿಯನೇರ್ ಮತ್ತು ಅರವಿಂದ ಅಡಿಗರ ಪುಸ್ತಕಗಳಿಗೆ ಅನಿರೀಕ್ಷಿತವಾದ ಪ್ರಚಾರ ಸಿಕ್ಕು ಎಲ್ಲೆಡೆ ಅದರ ಚರ್ಚೆಯಾಗುತ್ತಿರುವುದು ಒಳ್ಳೆಯ ಸಂಕೇತವೇ. ಈ ಎರಡೂ ಕೃತಿಗಳು ಜಗತ್ತಿನ ಸದಭಿರುಚಿಯ ಸಂಕೇತವೇ ಅನ್ನುವ ಪ್ರಶ್ನೆಗಳನ್ನು ಎಬ್ಬಿಸಿವೆ. ನಾನು ಈವರೆಗೂ ಮಾತನಾಡಿರುವ ಅನೇಕ ಜನರು ಇಲ್ಲವೇ ಈ ಎರಡೂ ಕೃತಿಗಳನ್ನು ಮೆಚ್ಚಿದ್ದಾರೆ, ಇಲ್ಲವೇ ಎರಡನ್ನೂ ಸಹಿಸಿಲ್ಲ. ಎರಡೂ ಕೃತಿಗಳ ಬಗ್ಗೆ ನನ್ನ ತಕರಾರನ್ನು ಚರ್ಚೆಗೆ ಹಚ್ಚಬೇಕಾದ್ದು ಮುಖ್ಯ. ಯಾಕೆಂದರೆ ಈ ಎರಡೂ ಕೃತಿಗಳು ಹಾಗೂ ಅವುಗಳಿಗೆ ದೊರಕಿರುವ ಮನ್ನಣೆ ನಾವು ಈ ವರ್ಷದಲ್ಲಿ ಸೃಜನಶೀಲತೆಯನ್ನು ಯಾವ ಮಾಪನದಲ್ಲಿ ನೋಡುತ್ತಿದ್ದೇವೆ ಅನ್ನುವ ಪ್ರಶ್ನೆಯನ್ನು ಎಬ್ಬಿಸುತ್ತವೆ.




ಸತ್ಯಂ ತಲ್ಲಣಗಳು

"ನೀವೆಲ್ಲರೂ ನಂಬಿರುವಂತೆ - ಹಾಗೂ ಕಂಪನಿಯ ಲೆಕ್ಕಪತ್ರದನುಸಾರವಾಗಿ ಇರಬೇಕಿದ್ದ ಏಳುಸಾವಿರ ಕೋಟಿ ರೂಪಾಯಿಗಳು ಇಲ್ಲ. ಆದರೆ ಇದರಿಂದ ನನಗೆ ಒಂದು ರೂಪಾಯಿಯ ಲಾಭವೂ ಆಗಿಲ್ಲ. ತಪ್ಪಾಯಿತು ಕ್ಷಮಿಸಿ". ಐದು ಪುಟಗಳ ದೊಡ್ಡ ಪತ್ರಬರೆದ ರಾಮಲಿಂಗ ರಾಜು ಹೇಳಿದ್ದರ ಮಜಕೂರು ಇಷ್ಟೇ. ಮಿಕ್ಕ ನಾಲ್ಕಾರು ಪುಟಗಳು ಏನೊಂದನ್ನೂ ವಿವರಿಸಲಾಗದ ಅನವಶ್ಯಕ ವಿವರಗಳು. ಹೀಗೆ ಹಣ ಮಾಯವಾಗುವುದರ ಸುಳಿವು ಯಾರಿಗೂ ಉಂಟಾಗಲಿಲ್ಲ. ಹಿಂದೆ ನಡೆದ ಅನೇಕ ಇಂತಹ ಭ್ರಷ್ಟ ನಡಾವಳಿಯಲ್ಲಿ ಈ ಇಂಥ ಪತನಕ್ಕೆ ಮುನ್ನ ಯಾವುದಾದರೂ ಸುದ್ದಿಯಿದ್ದೇ ಇರುತ್ತಿತ್ತು. ಅದು ಹರ್ಷದ್ ಮೆಹತಾ ಬಿಗ್ ಬುಲ್ ಆಗಿ ಉತ್ತುಂಗಕ್ಕೇರುತ್ತಿದ್ದ ಕಥೆಯೇ ಇರಬಹುದು, ಕೇತನ್ ಪಾರೀಕನ ಕಥೆಯೇ ಇರಬಹುದು, ಅಥವಾ ವಿಪರೀತವಾಗಿ ಬಿಸಿಯೇರಿದ್ದ ಆರ್ಥಿಕ ಸಂಸ್ಥೆಗಳ ಆಕರ್ಷಣೆಯ ಸಿ ಆರ್‍ ಬಿ ಸಂಸ್ಥೆಯಿಂದ ಪ್ರಾರಂಭವಾದ ಎನ್.ಬಿ.ಎಫ್.ಸಿ ಹಗರಣವೇ ಆಗಿರಬಹುದು.. ಇಲ್ಲವೇ ಡಾಟ್.ಕಾಂ ಕಂಪನಿಗಳು ಒಂದರ ನಂತರ ಒಂದು ಪತನಗೊಂಡ ಪರಿಯೇ ಇರಬಹುದು. ಎನ್ರಾನ್ ಸಂಸ್ಥೆ 




ರಾಮ್ ಗುಹಾ ಬರೆದ ಕ್ರಿಕೆಟ್ ರಾಜ್ಯ

ಈ ಬಾರಿ ರಾಮ್ ಗುಹಾ ಜೊತೆಗೆ ಮತಷ್ಟು ಸಮಯ ಕಳೆಯಲಿದ್ದೇನೆ; ನನ್ನ ಬಾಲ್ಯದ ಕ್ರಿಕೆಟ್ಟಿಗೆ ಪಯಣ ಮಾಡಲಿದ್ದೇನೆ. ಇತ್ತೀಚೆಗೆ ನಾನು ಓದಿದ ಪುಸ್ತಕಗಳಲ್ಲಿ ರಾಮ್ ಗುಹಾರ ಕ್ರಿಕೆಟ್ಟಿನ ಬಗೆಗಿನ ಪುಸ್ತಕವೂ ಒಂದು. ರಾಮ್ ಗುಹಾರ ಅನೇಕ ಬರವಣಿಗೆಗಳನ್ನು ನಾನು ಓದಿದ್ದೇನೆ, ಹಾಗೂ ಅವುಗಳನ್ನು ಇಷ್ಟಪಟ್ಟಿದ್ದೇನೆ. ವರಿಯರ್ ಎಲ್ವಿನ್ ಅವರ ಜೀವನ ಚರಿತ್ರೆ ರಾಮ್ ಅವರ ಅದ್ಭುತವಾದ ಸಂಶೋಧನಾ ಪ್ರತಿಭೆಯನ್ನು ತೋರುವ ಪುಸ್ತಕ. ರಾಮ್ ಒಳ್ಳೆಯ ಲೇಖಕರಷ್ಟೇ ಅಲ್ಲ, ಬರೇ ಬರವಣಿಗೆಯ ಆಧಾರದ ಮೇಲೆಯೇ ಜೀವನವನ್ನು ನಡೆಸುತ್ತಿರುವ ಅಪರೂಪದ ವ್ಯಕ್ತಿಗಳಲ್ಲಿ ಒಬ್ಬರು. ರಾಮ್ ಅವರ ಬರವಣಿಗೆಯನ್ನು ಶ್ರೇಣೀಕರಿಸುವುದು ಕಷ್ಟದ ಮಾತು.



ಅಹಮದಾಬಾದಿನಲ್ಲಿ ನಡೆ-ನುಡಿ

ಈಗೀಗ ಎಲ್ಲ ನಗರಗಳಲ್ಲೂ ’ಹೆರಿಟೇಜ್ ವಾಕ್’ ಆಯೋಜನೆ ಪ್ರಾರಂಭವಾಗಿದೆ. ನಗರದ ಹಿನ್ನೆಲೆ ಚರಿತ್ರೆ ತಿಳಿಯಲು ಇದೊಂದು ಒಳ್ಳೆಯ ಮಾರ್ಗ. ಅನೇಕ ವರ್ಷಗಳಿಂದ ಅಹಮದಾಬಾದಿನಲ್ಲಿ ಮುನಿಸಿಪಲ್ ಕಾರ್ಪೋರೇಶನ್ ನಡೆಸುತ್ತಿರುವ ಹೆರಿಟೇಜ್ ವಾಕ್ ಪ್ರಸಿದ್ಧವಾಗಿದೆ. ಮುಂಜಾನೆ ಏಳೂವರೆಗೆ ಪ್ರಾರಂಭವಾಗುವ ಈ ನಡಿಗೆ ಸುಮಾರು ಎರಡು ಘಂಟೆಕಾಲ, ನಿಧಾನಗತಿಯಲ್ಲಿ ಹಳೆಯ ಕಟ್ಟಡಗಳು, ಮನೆ ಮತ್ತು ಮಂದಿರಗಳನ್ನು ತೋರಿಸುತ್ತದೆ. ನಮ್ಮ ಹಿಂದಿನ ತಲೆಮಾರಿನವರು ತೋರಿದ ಕ್ರಿಯಾಶೀಲತೆ ಮತ್ತು ಸೃಜನಶೀಲತೆಯನ್ನು ಅರಿಯಲು ಇದು ಒಂದು ಉತ್ತಮ ವಿಧಾನ.





ಆತಂಕವಾದದ ಕಾಲದಲ್ಲಿ ಐಶಾರಾಮದ ಆತಂಕ

ಈ ಹಿಂದೆ ನಾನು ತಾಜ್ ಬಗ್ಗೆ ಬರೆದಾಗಲೂ ಇಂಥದೊಂದು ಪ್ರತಿಕ್ರಿಯೆ ಬರಬಹುದು ಅನ್ನುವ ಅನುಮಾನವಿತ್ತು. ಸಾಮಾಜಿಕ/ಆರ್ಥಿಕ ಸ್ಥರದಲ್ಲಿ ಭಿನ್ನತೆಯಿರುವ ಸಮಸಮಾಜದ ಉಟೋಪಿಯಾದಲ್ಲಿ ಬದುಕದಿರುವ ನಿಜಜಗತ್ತಿನಲ್ಲಿ ಈ ರೀತಿಯಾದಂತಹ ಪ್ರತಿಕ್ರಿಯೆ ಬರುವುದು ಸಹಜವೂ ಹೌದು, ಸಮಂಜಸವೂ ಹೌದು. ಈ ಮಾತು, ಅದರ ಹಿನ್ನೆಲೆಗೆ, ಪ್ರತಿಕ್ರಿಯೆಯಾಗಿ ನಾನು ಯಾವ ಸ್ಪಷ್ಟ ನಿಲುವನ್ನೂ ತೆಗೆದುಕೊಳ್ಳುವುದಕ್ಕೆ ಸಾಧ್ಯವಿಲ್ಲ. ಆದರೂ ಆ ಬಗ್ಗೆ ನನ್ನ ಅನುಮಾನಗಳನ್ನೂ, ಕಾಳಜಿಯನ್ನೂ, ಸಮಜಾಯಿಷಿಯನ್ನೂ, ಅಸಹಾಯಕತೆಯನ್ನೂ, ಅಷಾಢಭೂತಿತನವನ್ನೂ ಪ್ರಾಮಾಣಿಕವಾಗಿ ಮಂಡಿಸಲು ಸಿದ್ಧನಾಗಿದ್ದೇನೆ.

"ಇಷ್ಟುದಿನ ಆತಂಕ ನಮ್ಮನ್ನು ತಟ್ಟಿದಾಗ ಅದು ಒಂದು....

ಮುಂದೆ.....



ಟಂಕಸಾಲೆಯ ಬಿಂಕ

ಮುಂಬಯಿಯಲ್ಲಿ ನೋಡಲು ಅನೇಕ ಜಾಗಗಳಿವೆ. ನಾನು ಈ ಸರಣಿಯಲ್ಲಿ ನನ್ನ ಬರವಣಿಗೆಯನ್ನು ಪ್ರಾರಂಭಿಸಿದ್ದೇ ಜಯಂತ ಕಾಯ್ಕಿಣಿ ಕಾಣಿಸಿದ ಮತ್ತೊಂದು ಮುಂಬಯಿಯ ಬಗ್ಗೆ. ಆದರೆ ಕೆಲವು ವಿಶಿಷ್ಟ ಸಂಸ್ಥೆಗಳೂ ಮುಂಬಿಯಿಯಲ್ಲಿವೆ. ರಿಜರ್ವ್ ಬ್ಯಾಂಕು ನಡೆಸುವ ಮಾನೆಟರಿ ಮ್ಯೂಸಿಯಂ ಅಂಥ ಒಂದು ಆಸಕ್ತಿಕರ ಸಂಸ್ಥೆಗಳಲ್ಲಿ ಒಂದು. ಬಹುಮಹಡಿಯ ರಿಜರ್ವ್ ಬ್ಯಾಂಕಿನ ಕಟ್ಟಡದ ಎದುರಿನ ಗಲ್ಲಿಯಲ್ಲಿ ಹೋಗಿ ಬಲಕ್ಕೆ ತಿರುಗಿದರೆ, ಫಿರೋಜ್ ಷಾ ಮೆಹತಾ ಮಾರ್ಗದಲ್ಲಿ ಅಮರ್ ಬಿಲ್ಡಿಂಗ್ ಎನ್ನುವ ಪುಟ್ಟ ಜಾಗದಲ್ಲಿ ದುಡ್ಡಿನ ಚರಿತ್ರೆಯನ್ನು ಕಾಣಿಸುವ ಮಾನಿಟರಿ ಮ್ಯೂಸಿಯಂ ಇದೆ. ಪುಟ್ಟಜಾಗವಾದರೂ ಇದು ತುಂಬಾ ಆಸಕ್ತಿಕರವಾದ ಜಾಗ. ಅಲ್ಲಿ ತಿಳಿದ ಕೆಲವು ಆಸಕ್ತಿಯ ವಿಷಯಗಳು





ಗೋಡೆ ಗಡಿಯಾರ - ಕೈಗಡಿಯಾರ

ರಾಜಾಸ್ಥಾನದ ಡುಂಗರ್‍-ಪುರದಲ್ಲಿ ನಮ್ಮ ಅಧ್ಯಯನಕ್ಕಾಗಿ ಮಾಹಿತಿ ಸಂಗ್ರಹಿಸುತ್ತಿದ್ದ ಶಾಶ್ವತೀ ಒಂದು ದಿನ ಬಂದು ಒಂದು ವಿಚಿತ್ರವಾದ ಮಾತನ್ನು ಹೇಳಿದಳು. ಈ ಮಾತು ಮಾಹಿತಿಯನ್ನಾಧರಿಸಿದ್ದಲ್ಲ, ಬದಲಿಗೆ ತಾನು ಗಮನಿಸಿದ್ದ ವಿಷಯವೆಂದೂ ಹೇಳಿದಳು. ನಾವುಗಳು ಮಾಹಿತಿ ಸಂಗ್ರಹಿಸುತ್ತಿದ್ದದ್ದು ಬಡ ಕುಟುಂಬಗಳು ತಮ್ಮ ಆರ್ಥಿಕ ನಿರ್ವಹಣೆಯನ್ನು ಹೇಗೆ ಮಾಡುತ್ತಾರೆ ಹಾಗೂ ಎಲ್ಲೆಲ್ಲಿಂದ ಸಾಲ ಪಡೆಯುತ್ತಾರೆ ಅನ್ನುವ ವಿಷಯದ್ದಾಗಿತ್ತು. ಮಾಹಿತಿ ಸಂಗ್ರಹಿಸುವುದು ಒಂದು ಕೆಲಸವಾದರೆ ಆ ಮಾಹಿತಿಯನ್ನು ಅರ್ಥೈಸಲು ಕೆಲ ಒಳನೋಟಗಳೂ ಅವಶ್ಯಕವಾಗುತ್ತವೆ. ಹೀಗಾಗಿ ಶಾಶ್ವತೀ ಹೇಳಿದ್ದ ಮಾತಿಗೆ ನಾನು ಮಹತ್ವ ನೀಡುವ ಅಗತ್ಯವಿತ್ತು.




ರಾಮ್ ಗುಹಾಗೆ ಪದ್ಮಭೂಷಣ

ಬರಹಗಾರ ರಾಮಚಂದ್ರ ಗುಹಾಗೆ ಪದ್ಮಭೂಷಣ ಪ್ರಶಸ್ತಿಯನ್ನು ಇಂದು ಘೋಷಿಸಲಾಗಿದೆ. ಪದ್ಮ ಅವಾರ್ಡುಗಳ ಪಟ್ಟಿ ಸಾಮಾನ್ಯವಾಗಿ ನೂರಕ್ಕೂ ಹೆಚ್ಚಿನ ಸಂಖ್ಯೆಯದ್ದಾಗಿರುತ್ತದಾದ್ದರಿಂದ ಪತ್ರಿಕೆಗಳು ವಿಭೂಷಣ/ಭೂಷಣ ಪ್ರಸಸ್ತಿಗಳ ಪಟ್ಟಿಯನ್ನು ಕೊಟ್ಟು, ಪದ್ಮಶ್ರೀ ಪ್ರಸಸ್ತಿಗಳನ್ನು ಪಡೆದವರ ಪ್ರಮಖರ ಹೆಸರನ್ನು ಮಾತ್ರ ಹಾಕಿಡುತ್ತವೆ. ಹೀಗಾಗಿ ಗುಜರಾತಿನಲ್ಲಿರುವ ನನ್ನಂತಹವರು ಕರ್ನಾಟಕದ ಮತ್ತೂರು ಕೃಷ್ಣಮೂರ್ತಿಯವರಿಗೆ ಪ್ರಶಸ್ತಿ ಬಂದಿದೆಯೆನ್ನುವುದನ್ನು ತಿಳಿಯಲು ಅಂತರ್ಜಾಲಕ್ಕೆ ಹೋಗಿ ಸರಕಾರದ ಪಟ್ಟಿಯನ್ನು ಪರಿಶೀಲಿಸಬೇಕಾಗುತ್ತದೆ. ಪದ್ಮ ಪ್ರಶಸ್ತಿಗಳನ್ನು ಇಂತಿಥಹ ಸೇವೆ, ಇಂತಿಥಹ ರಾಜ್ಯಕ್ಕೆ ಸೇರಿದವರಿಗೆ ಕೊಡುತ್ತಾರೆನ್ನುವುದು ಪಟ್ಟಿಯನ್ನು ನೋಡಿದಾಗ ವೇದ್ಯವಾಗುತ್ತದೆ. ಉದಾಹರಣೆಗೆ ಈ ಬಾರಿಯ ಪದ್ಮ ಪ್ರಶಸ್ತಿ ಪಡೆದಿರುವ ಮ್ಯಾನೇಜ್‌ಮೆಂಟ್ ಚಿಂತಕ ಸಿ.ಕೆ.ಪ್ರಹ್ಲಾದ್‌ಅವರ ಹೆಸರಿನ ಮುಂದೆ ಸೇವೆ: ವಿದ್ಯಾರಂಗವೆಂದೂ ರಾಜ್ಯ: "ಎನ್.ಆರ್.ಐ/ಪಿ.ಐ.ಓ" ಎಂದೂ ಬರೆಯಲಾಗಿದೆ. ರಾಮ್ ಗುಹಾರ ಹೆಸರಿನ ಮುಂದೆ ಸಾಹಿತ್ಯ ಎಂದು ಬರೆಯಲಾಗಿದೆ. ಚರಿತ್ರೆಗಾಗಿ ಇತರರಿಗೆ ಪ್ರಶಸ್ತಿ ಬಂದಿದ್ದರೂ ಚರಿತ್ರಕಾರ ರಾಮ್‌ಗೆ ಸಾಹಿತ್ಯಕ್ಕೆ ಬಂದಿದೆ. ಇದರಿಂದ ದುಃಖವೇನೂ ಇಲ್ಲ, ಬಹುಶಃ ಅವರ ಒಟ್ಟಾರೆ ಬರವಣಿಗೆಯ ಸೃಜನಶೀಲತೆಯನ್ನು ನೋಡಿ ಅವರಿಗೆ "ಸಾಹಿತ್ಯ"ದ ಪದ್ಮಭೂಷಣ ಕೊಟ್ಟಿರಬಹುದು.




ನನಗೂ ಕೇಸ್ಲಾಗೂ ಅಂಟಿದ ನಂಟು

ಪಾಠ-ಪ್ರವಚನ ಮಾಡುವ ನನ್ನಂತಹವರಿಗೆ ಎಲ್ಲೆಲ್ಲಿ ಪಾಠ ಮಾಡಲು ಅವಕಾಶ ಸಿಗುತ್ತದೆ ಎಂದು ಹೇಳುವುದಕ್ಕೆ ಸಾದ್ಯವಿಲ್ಲ. ಪ್ರವಚನಕಾರರಂತೆಯೇ ಪಾಠಮಾಡುವವರೂ ಸಹ ಒಂದು ಗುಂಪಿನ ಕೇಳುಗರು ಸಿಕ್ಕಿದರೆ ಸಾಕು ತಮ್ಮ ಪುಂಗಿಯೂದುವುದಕ್ಕೆ ಪ್ರಾರಂಭಿಸುತ್ತಾರೇನೋ! ಆದರೆ ಸಾಮಾನ್ಯವಾಗಿ ಕ್ಯಾಂಪಸ್ ಬಿಟ್ಟು ಹೊರಗೆ ಹೋಗಿ ಪಾಠ ಮಾಡುವಾಗ ಒಂದು ಟೀಂ ಅಂತ ಇರುತ್ತದೆ. ಇಬ್ಬರಾದರೂ ಇರುವುದರಿಂದ ನಮಗೆ ಒಂದು ಥರದ ಕಂಪನಿ ಇರುತ್ತದೆ. ಆದರೆ ಒಮ್ಮೊಮ್ಮೆ ಅದೂ ಸಾಧ್ಯವಾಗುವುದಿಲ್ಲ. ಸ್ವಯಂ ಸೇವಾ ಸಂಸ್ಥೆಗಳವರು ಯಾರಾದರೂ ಹೀಗೆ ತರಬೇತಿ ಕಾರ್ಯಕ್ರಮನನ್ನು ಮಾಡಿ ಎಂದು ಕೇಳಿದಾಗಲೇ ಹೆಚ್ಚಿನ ಪೀಕಲಾಟಕ್ಕೆ ಬರುವುದು. ಯಾಕೆಂದರೆ ಅಂಥ ಸಂಸ್ಥೆಗಳಿಗೆ ಹೋಗುವಾಗ ಈ ಟೀಂ ಕೈಕೊಡುತ್ತದೆ. ಅವರು ಕೊಡುವ ಹಣ ಹೆಚ್ಚಲ್ಲವಾದ್ದರಿಂದ ನನ್ನ ಸಹಚರರಿಗೆ ಆಸಕ್ತಿ ಕಡಿಮೆಯೂ ಆಗಬಹುದು. ಜೊತೆಗೆ ಸ್ವಯಂ ಸೇವಾ ಸಂಸ್ಥೆಗಳವರ ಟ್ರೈನಿಂಗ್ ವಿಭಾಗಗಳು ದೂರದ ಜಾಗಗಳಲ್ಲಿರುತ್ತವೆ. ಅಥವಾ ನಗರದಲ್ಲಿದ್ದರೂ ಅಲ್ಲಿ ನಮಗೆ ಬೇಕಾದ ಪರಿಕರಗಳೆಲ್ಲವೂ ಸುಲಭವಾಗಿ ಸಿಗುವುದಿಲ್ಲ. ಒಂದು ಥರದಲ್ಲಿ ಈಡನ್ ಗಾರ್ಡನ್, ಚಿನ್ನಸ್ವಾಮಿ ಸ್ಟೇಡಿಯಂನಂತಹ ಜಾಗದಲ್ಲಿ ಅಂತರರಾಷ್ಟ್ರೀಯ ಮ್ಯಾಚುಗಳನ್ನು ಆಡಿದವರನ್ನು ಕಾಲೇಜಿನ ಮೈದಾನದಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಆಡಲು ಕೇಳಿದಂತೆ. ಒಂದೆರಡು ಬಾರಿ ತಮಾಷೆಗೆಂದು ಆ ಆಟ ಚೆನ್ನಾಗಿರುತ್ತದಾದರೂ ಇದನ್ನು ಇಡೀ ಟೀಮು ಆಡುವುದನ್ನು ಊಹಿಸುವುದು ಕಷ್ಟ. ಹೀಗಾಗಿ ಸ್ವಯಂ ಸೇವಾ ಸಂಸ್ಥೆಗಳು ಈ ರೀತಿಯ ತರಬೇತಿಯ ಕೋರಿಕೆಯನ್ನು ನಮ್ಮ ಮುಂದಿಟ್ಟಾಗ ಮಾಡಬೇಕೆನ್ನಿಸಿದರೂ, ಅದನ್ನು ಕಾರ್ಯರೂಪಗೊಳಿಸುವುದು ಸ್ವಲ್ಪ ಕಷ್ಟವೇ.





ಶಾಂತಾರಾಮ್-ಆತಂಕರಾಮ್

ಕಳೆದೆರಡು ವರುಷಗಳಿಂದ ನನ್ನ ಮುಂಬಯಿ ಯಾತ್ರೆಗಳು ಸುಮಾರು ತಿಂಗಳಿಗೊಮ್ಮೆ ಆಗುತ್ತಿದೆ. ಅಲ್ಲಿರುವ ಸಂಸ್ಥೆಯೊಂದರ ಬೋರ್ಡಿಗೆ ನನ್ನನ್ನು ಸೇರಿಸಿಕೊಂಡಿರುವುದರಿಂದ ಮೀಟಿಂಗಿಗಾಗಿ ಆಗಾಗ ಹೋಗಬೇಕಾಗುತ್ತದೆ. ಮೀಟಿಂಗು ಸಂಸ್ಥೆಯ ೧೬ನೇ ಮಹಡಿಯ ಆಫೀಸಿನಲ್ಲಾಗುತ್ತದಾದರೂ ಉಳಿದುಕೊಳ್ಳುವುದಕ್ಕೆ ಏರ್ಪಾಟು ಮುಖ್ಯತಃ ತಾಜ್ ಹೋಟೇಲಿನಲ್ಲಿ ಮಾಡುತ್ತಿದ್ದರು. ಮೊದಲಿಗೆ ಪಂಚತಾರಾ ಹೋಟೇಲಿನಲ್ಲಾಗುವ ಎಲ್ಲ ಮುಜುಗರಗಳಿಗೂ ನಾನು ಒಳಗಾಗಿದ್ದೆನಾದರೂ, ಬರಬರುತ್ತಾ ಆ ಜಾಗ ನನಗೆ ಅಭ್ಯಾಸವಾಗಹತ್ತಿತ್ತು. ಹೀಗಾಗಿಯೇ ಎರಡು ತಿಂಗಳುಗಳ ಹಿಂದೆ ಆ ಹೊಟೇಲಿನಲ್ಲಿ ಹೆಚ್ಚು ಉಳಿದದ್ದರ ಪ್ರತೀಕವಾಗಿ ಅವರು ನನಗೆ ಗೋಲ್ಡ್ ಕಾರ್ಡ್ ಒಂದನ್ನು ಕೊಟ್ಟಿದ್ದನ್ನು ಜೋಪಾನವಾಗಿ ಉಳಿಸಿಕೊಂಡಿದ್ದೆ.





ಕೋವಲಂನ ಮಣ್ಣು; ಪದ್ಮನಾಭಸ್ವಾಮಿ ಗುಡಿ

ಊರೂರು ಅಲೆಯುವಾಗ ಎರಡು ಭಿನ್ನ ರೀತಿಯ ಯಾತ್ರೆಗಳು ಸಾಧ್ಯವಾಗುತ್ತದೆ. ಒಂದು, ಕೆಲಸದ ಮೇಲೆ ಹೋಗುವುದು. ಹಾಗೆ ಹೋದಾಗ ಕಾಣುವುದು ಏರ್‌ಪೋರ್ಟು, ರೈಲು ನಿಲ್ದಾಣ, ಬಸ್ಸು, ಕಾರು, ಹೋಟೇಲಿನ ರೂಮು, ಪವರ್ ಪಾಯಿಂಟ್, ಮತ್ತು ಎಣ್ಣೆಭರಿತ ಊಟ. ಇದಿಲ್ಲವೆಂದರೆ ನಮ್ಮದೇ ರಜೆಗೆ ಹೋಗುವುದು. ಆಗ ಯಾತ್ರೆಯ ಸ್ವರೂಪವೇ ಬೇರು. ಹಿಂದಿನ ದಿನವೇ ಹೋಗೆ ಬೇಕರಿಯಿಂದ ಯಾತ್ರೆಗೆ ಬೇಕಾದ ಜ್ಯೂಸಿನ ಡಬ್ಬ, ಕುರುಕಲು, ಡಿಜಿಟಲ್ ಕ್ಯಾಮರಾ ಬರುವುದಕ್ಕೆ ಮುನ್ನ ಕೊಂಡು ತರುತ್ತಿದ್ದ ಕ್ಯಾಮರಾದ ಫಿಲಂ. ಹಾದೂ ಇಂಥ ರಜೆಗೆಂದೇ ವಿಶೇಷ ಪೋಷಾಕುಗಳು - ಬಹುಶಃ ಎಂದೂ ಧರಿಸದ ಚೆಡ್ಡಿ, ಟೀ ಷರ್ಟುಗಳು, ಟೋಪಿ ಮತ್ತು ಕಣ್ಣಿಗೆ ಬಣ್ಣದ ಕನ್ನಡಕ. ಕೆಲಸದ ಮೇಲಿನ ಯಾತ್ರೆಗಳಲ್ಲಿ ಯಾವುದೂ ನಮ್ಮ ಕೈಯಲ್ಲಿರುವುದಿಲ್ಲ. ರಜೆಯಲ್ಲಿ ನಾವೇ ಧಣಿಗಳು.



ಅರವಿಂದ ಅಡಿಗರ ಬಿಳಿಹುಲಿ

ಸಾಮಾನ್ಯವಾಗಿ ಹೊಸ ಲೇಖಕನ ಪ್ರಥಮ ಪುಸ್ತಕಕ್ಕೆ ದೊರೆಯುವುದಕ್ಕಿಂತ ಹೆಚ್ಚಿನ ಪ್ರಚಾರ ಈ ಪುಸ್ತಕಕ್ಕೆ ದೊರೆತಿರಬಹುದೇನೋ. ಈ ಪುಸ್ತಕ ಬಿಡುಗಡೆಯಾದ ಕೆಲದಿನಗಳಲ್ಲೇ ಎಲ್ಲೆಲ್ಲೂ ಕಾಣಿಸಿಕೊಳ್ಳತೊಡಗಿತ್ತು. ಅನೇಕ ಟಿವಿ ವಾಹಿನಿಗಳಲ್ಲಿ ಈ ಪುಸ್ತಕದ ಜಾಹಿರಾತೂ ಕಂಡಿತ್ತು. ನನ್ನ ಅರಿವಿನಲ್ಲಿ ಸಣ್ಣ ಪರದೆಯ ಮೇಲೆ ಮೊದಲಬಾರಿಗೆ ಕಾರ್ಯಕ್ರಮಗಳನ್ನು ಒಂದು ಸಾಹಿತ್ಯ ಕೃತಿ ಪ್ರಾಯೋಜಿಸುತ್ತಿತ್ತು. ಇದೆಲ್ಲವೂ ಒಂದು ಹೊಸತನದಿಂದ ಕೂಡಿದ್ದು. ಸಾಹಿತ್ಯದ ಒಂದು ಕೊನೆಯಲ್ಲಿ ಚೇತನ್ ಭಗತ್‍ರ ಪುಸ್ತಕಗಳು ವಿಚಿತ್ರ ದಾಖಲೆಗಳನ್ನು ಸ್ಥಾಪಿಸುತ್ತಾ, ಬೆಳೆಯುತ್ತಾ ಹೋದಂತೆಯೇ ಈಗ ಜಾಹೀರಾತಿನ ಬಲವನ್ನೂ ಉಪಯೋಗಿಸಿ ಮಾರಾಟಮಾಡುತ್ತಿರುವ ’ಸಾಹಿತ್ಯ ಕೃತಿ’ಯಿಂದಾಗಿ ಭಾರತೀಯ ಆಂಗ್ಲ ಬರವಣಿಗೆಯ ಮಾರುಕಟ್ಟೆ ಮತ್ತೊಂದು ಘಟ್ಟವನ್ನೇ ತಲುಪಿದೆ ಅನ್ನಿಸುತ್ತದೆ. ಭಾರತೀಯ ಸಂಜಾತ ಹಿಂದಿನ ವಿಜೇತರನ್ನು ನೋಡಿದರೆ ಯಾರಿಗೂ ಈ ರೀತಿಯ ಓಪನಿಂಗ್ ದೊರೆತಿರಲಿಲ್ಲವೇನೋ. ಅರುಂಧತಿ ರಾಯ್‍ ಅವರ ಪುಸ್ತಕವನ್ನು ಹಾರ್ಪರ್ ಕಾಲಿನ್ಸ್ ಸಂಸ್ಥೆ ಪ್ರಕಟಿಸಲು ನಿರಾಕರಿಸಿತ್ತು. ಅದರಲ್ಲಿನ ತಿರುಳನ್ನು ನೋಡಿದ ತರುಣ್ ತೇಜ್‍ಪಾಲ್ ಆ ಸಂಸ್ಥೆಯಿಂದ ಹೊರಬಿದ್ದು ಇಂಡಿಯಾ ಇಂಕ್ ಅನ್ನುವ ಪ್ರಕಾಶನ ಸಂಸ್ಥೆಯನ್ನು ಹುಟ್ಟುಹಾಕಿ ಆಕೆಯ ಗಾಡ್ ಆಫ್ ಸ್ಮಾಲ್ ಥಿಂಗ್ಸ್ ಪ್ರಕಟಿಸಿದ್ದರು. ಕಿರಣ್ ದೇಸಾಯಿ ಅವರ ಪುಸ್ತಕವನ್ನು ಪ್ರಕಟಿಸಲು [ಅದು ಅವರ ಎರಡನೆಯ ಪುಸ್ತಕವಾಗಿದ್ದು, ಆಕೆ ಅನಿತಾ ದೇಸಾಯಿಯವರ ಮಗಳಾಗಿದ್ದರೂ ಸಹ] ಅವರಿಗೆ ಪೀಕಲಾಟವಾಗಿತ್ತು ಅನ್ನುವ ಮಾತನ್ನು ಆಕೆಗೆ ಬುಕರ್ ಬಂದಾಗ ಕೇಳಿದ್ದೆವು. ಅರವಿಂದ ಅಡಿಗರ ಪುಸ್ತಕಕ್ಕೆ ಇಂಥಹ ತೊಂದರೆ ಉಂಟಾಗಲಿಲ್ಲ. ಅರುಂಧತಿಯನ್ನು ಇಲ್ಲವೆಂದ ಹಾರ್ಪರ್ ಕಾಲಿನ್ಸ್ ಸಂಸ್ಥೆ ಅಡಿಗರನ್ನು ಪ್ರಕಟಿಸಿದ್ದಲ್ಲದೇ ಸಾಕಷ್ಟು ಪ್ರಚಾರವನ್ನೂ ನೀಡಿತು.



ಕಂದೀಲಿನ ಮೇಲೆ ಧೂಳು!

ಗುಜರಾತ್ ಸರಕಾರ ವಿಕಾಸದ ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ. ಅದರ ಬಗ್ಗೆ ಹೆಚ್ಚಿನ ಚರ್ಚೆ ರಾಜ್ಯದ ಆಚೆ ಹೆಚ್ಚಾಗಿ ನಡೆಯುವುದಿಲ್ಲ. ಗುಜರಾತಿನ ಬಗ್ಗೆ ಹೊರಗೆ ಚರ್ಚೆ ನಡೆಯುವಾಗ ಎರಡು ಮುಖ್ಯ ವಿಚಾರಗಳು ಚರ್ಚಿತಗೊಳ್ಳುತ್ತವೆ. ಮೊದಲನೆಯ ಮತ್ತು ಅತಿ ಮುಖ್ಯ ವಿಷಯ ಗೋಧ್ರಾ ಮತ್ತು ತದನಂತರದ ಹತ್ಯಾಕಾಂಡ. ಆ ಬಗ್ಗೆ, ಅದರಲ್ಲಿ ಸರಕಾರದ ಪಾತ್ರದ ಬಗ್ಗೆ, ಪೋಲೀಸರ ಪಾತ್ರದ ಬಗ್ಗೆ ಎಷ್ಟೋ ಚರ್ಚೆ ನಡೆದಿದೆ. ಅದೇ ಸಮಯಕ್ಕೆ ಗುಜರಾತಿನಲ್ಲಿನ ವಿಕಾಸದ ಬಗೆಗಿನ ವಿಚಾರಗಳು ಹೊರಕ್ಕೆ ಬರುವುದೇ ಇಲ್ಲ. ಇಲ್ಲಿ ಜನ ಸುಖವಾಗಿದ್ದಾರೆಯೇ? ಒಂದು ಕೋಮಿನವರು ಭಯಭೀತಿಯಿಂದ ಜೀವಿಸುತ್ತಿದ್ದಾರೆಯೇ? ಇಲ್ಲಿ ರಾಕ್ಷಸತ್ವ ಕಾಣಿಸುತ್ತದೆಯೇ? ಈ ಎಲ್ಲಕ್ಕೂ ಸರಳವಾದ ಉತ್ತರಗಳನ್ನು ಕೊಡುವುದಕ್ಕೆ ಸಾಧ್ಯವಿಲ್ಲ. ಗುಜರಾತಿನ ವಿಷಯಕ್ಕೆ ಬಂದಾಗ ಚರ್ಚೆಗೊಳಗಾಗುವ ಮತ್ತೊಂದು ವಿಚಾರ ನರ್ಮದಾ, ಅಣೆಕಟ್ಟು, ನೀರು, ಮೇಧಾ ಮತ್ತು ಅದಕ್ಕೆ ಸಂಬಂಧಿಸಿದ ವಿವಾದದ್ದು.



ಕೈಮಗ್ಗದ ಬಿಕ್ಕಟ್ಟು

ಕರೀಂನಗರ ಜಿಲ್ಲೆಯ ಕೊತ್ತಪಲ್ಲಿ ಕೈಮಗ್ಗ ಸಹಕಾರ ಮಂಡಲಿಯ ಅಧ್ಯಕ್ಷರಾದ ಕಮಟಂ ರಾಜೇಶಂ ಮೆಲುದನಿಯಲ್ಲಿ ತಮ್ಮ ಮಂಡಳಿಯ ಕೆಲಸಕಾರ್ಯಗಳನ್ನು ವಿವರಿಸುತ್ತಾ ಹೇಳುತ್ತಾರೆ: "ನಾಲ್ಕಾರು ವರ್ಷಗಳ ಕೆಳಗೆ ನಾವು ೯೫ ಲಕ್ಷ ರೂಪಾಯಿಯ ವ್ಯಾಪಾರ ಮಾಡಿದ್ದೆವು. ಈ ವರ್ಷ ಅದು ೭೦ ಲಕ್ಷಗಳಿಗೆ ನಿಲ್ಲಲಿದೆ. ಹಾಗೂ ಆ ಸ್ಥರದಲ್ಲೇ ನಮ್ಮ ವ್ಯಾಪಾರ ಸ್ಥಗಿತಗೊಳ್ಳುತ್ತದೆ ಅನ್ನಿಸುತ್ತದೆ."


ಗೆಂಟ್ ಕೋಟೆಯಲ್ಲಿ ಕೋಕಾಕೋಲಾ

ಗೆಂಟಿನ ಸ್ಟೇಷನ್‍ನಲ್ಲಿ ಇಳಿದಾಗ ಅಲ್ಲಿಂದ ಮನೆಗೆ ಟ್ಯಾಕ್ಸಿ ತೆಗೆದು ಹೋಗಬಹುದು ಅನ್ನಿಸಿತು. ಎರಡು ದೊಡ್ಡ ಸೂಟ್‍ಕೇಸು, ಒಂದು ಲ್ಯಾಪ್‍ಟಾಪ್ ಬ್ಯಾಗು ಹೊತ್ತು ಟ್ರಾಂನಲ್ಲಿ ಹೋಗುವುದು ಕಿರಿಕಿರಿ ಅನ್ನಿಸಿದರೂ, ಹ್ಯಾನ್ಸ್ ಮಾತ್ರ ಟ್ರಾಮಿನಲ್ಲೇ ಹೋಗೋಣವೆಂದ. ಟ್ರಾಮಿನಲ್ಲೂ ಬಸ್ಸಿನಲ್ಲೂ ಪ್ರವೇಶಮಾಡುತ್ತಿದ್ದ ಹಾಗೆಯೇ ಟಿಕೇಟನ್ನು ಕೊಳ್ಳಬೇಕು. ಸಾಧಾರಣವಾಗಿ ಎಲ್ಲರ ಬಳಿಯೂ ಮೊದಲೇ ಕೊಂಡ ಟಿಕೇಟಿರುತ್ತದೆ. ಅದನ್ನು ಯಂತ್ರದೊಳಕ್ಕೆ ತೂರಿಸಿದರೆ ಅಂದಿನ ಯಾನದ ಮೊಬಲಗು ಅದರಲ್ಲಿ ನಮೂದಾಗುತ್ತದೆ. ಒಂದು ಟಿಕೇಟನ್ನು ತೂರಿಸಿದಾಗ ಅದು ಒಂದಿಷ್ಟು ದೂರಕ್ಕೆ ಮತ್ತು ಸಮಯಕ್ಕೆ ವ್ಯಾಲಿಡ್ ಆಗಿರುತ್ತದೆಂದು ಹ್ಯಾನ್ಸ್ ಹೇಳಿದ. ಉದಾಹರಣೆಗೆ ಆ ಟ್ರಾಮಿನಿಂದ ಇಳಿದು ಬೇರೆ ದಾರಿಯ ಟ್ರಾಂ ಹಿಡಿದರೂ, ಟಿಕೇಟಿನಿಂದ ಮೊಬಲಗನ್ನು ಕತ್ತರಿಸುವುದಿಲ್ಲವಂತೆ. ಆದರೆ ಅದೇ ಟಿಕೇಟನ್ನು ಎರಡು ಬಾರಿ ತಕ್ಷಣಕ್ಕೆ ತೂರಿಸಿದರೆ ಇಬ್ಬರು ಪ್ರಯಾಣಿಕರಿಗೆ ತಕ್ಕ ಮೊಬಲಗನ್ನು ಕತ್ತರಿಸುತ್ತದೆ. ಪ್ರೋಗ್ರಾಂನಲ್ಲಿ ಈ ರೀತಿಯ ಟೈಂ ಸಂಬಂಧಿತ ಕೋಡನ್ನು ಬರೆದಿರಬಹುದು ಅಂತ ಹ್ಯಾನ್ಸ್ ಹೇಳಿದ. ರೈಲು ಟಿಕೇಟು ಇಷ್ಟು ವಿಕಸಿತಗೊಂಡಿಲ್ಲ. ಹತ್ತೋ ಇಪ್ಪತ್ತೋ ಟ್ರಿಪ್ಪುಗಳಿಗಾಗುವ ರೈಲು ಟಿಕೇಟನ್ನು ನೀವು ಕೊಂಡು ಇಟ್ಟುಕೊಳ್ಳಬಹುದು. ಪ್ರತಿಬಾರಿ ರೈಲು ಹತ್ತುವಾಗಲೂ ಎಲ್ಲಿಂದ ಎಲ್ಲಿಗೆ ಪ್ರಯಾಣ ಮಾಡುತ್ತಿದ್ದೀರೆಂದು ಟಿಕೇಟಿನ ಮೇಲೆ ಬರೆಯಬೇಕು. ಇಬ್ಬರು ಆ ಟಿಕೇಟಿನ ಮೇಲೆ ಪ್ರಯಾಣ ಮಾಡುತ್ತಿದ್ದರೆ ಎರಡುಬಾರಿ. ಈ ಕೆಲಸವನ್ನು ರೈಲು ಹತ್ತುವ ಮೊದಲೇ ಮಾಡಬೇಕು. ಇಲ್ಲವಾದರೆ ಜುಲ್ಮಾನೆ. ಎಷ್ಟೋ ಆಸಕ್ತಿಕರ ಪದ್ಧತಿಗಳು ಈ ದೇಶದಲ್ಲಿವೆ.

ಬ್ರಸಲ್ಸ್ ನಲ್ಲಿ ಭಾರತ!


ಲಕ್ಸಂಬರ್ಗ್‌ನಿಂದ ಬ್ರಸಲ್ಸ್ ಗೆ ಬಂದದ್ದಾಯಿತು. ಭಾಯಿಸಾಬ್ ಎನ್ನುತ್ತಲೇ ಎರಡು ತಲೆಮಾರಿನ ಹಿಂದೆ ಭಾರತದಿಂದ ವಲಸೆ ಹೋಗಿದ್ದ ರಾಯ್ ಜೊತೆಗೆ ಜೋತುಬಿದ್ದು ಜಿಪಿ‌ಎಸ್ ಇದ್ದ ಅವನ ಹೊಸ ಕಾರಿನಲ್ಲಿ ನನ್ನನ್ನು ನಾನೇ ಹೇರಿಕೊಂಡಿದ್ದೆ. ಒಂದು ಥರದಲ್ಲಿ ಭಾರತದ ಯಾವುದೇ ಕೊಂಡಿಯಿದ್ದರೂ ಸಾಕು ಅವರೆಲ್ಲ ನಮ್ಮ ಬಂಧುಗಳೇ. ಎಲ್ಲಿಂದಲಾದರೂ ಒಂದು ಸಂಬಂಧವನ್ನು ನಾವು ಹೆಕ್ಕಿ ತೆಗೆಯುವುದರಲ್ಲಿ ನಿಷ್ಣಾತರು. ವಸುಧೈವ ಕುಟುಂಬಕಂ ಎನ್ನುವ ಕಾನ್ಸೆಪ್ಟನ್ನು ಜಗತ್ತಿಗೆ ಕೊಟ್ಟವರೇ ನಾವಲ್ಲವೇ? ಈಚೆಗೆ ಚಿದಾನಂದ ರಾಜಘಟ್ಟ ನೊಬೆಲ್ ಪುರಸ್ಕೃತರ ಬಗ್ಗೆ ಬರೆಯುತ್ತಾ, ಯಾರನ್ನೆಲ್ಲಾ ಭಾರತೀಯರೆಂದು ಹೇಳಿಕೊಂಡು ನಾವು ವಿನಾಕಾರಣ ಹೆಮ್ಮೆ ಪಡಬಹುದು ಎಂದು ಬರೆದಿದ್ದರು. ಅದರಲ್ಲಿ ನೈಪಾಲರ ಹೆಸರನ್ನೂ ಅವರು ಸೇರಿಸಿದ್ದರು. ನೈಪಾಲರು ಎಷ್ಟು ಭಾರತೀಯರೋ, ರಾಯ್ ಕೂಡಾ ಅಷ್ಟೇ ಭಾರತೀಯ. ಹೀಗಾಗಿ ದೇಶದ ಹೆಸರಿನಲ್ಲಿ ಅವನ ಕಾರಿನಲ್ಲಿ ಹೇರಿಕೊಳ್ಳುವುದು ನನ್ನ ಜನ್ಮದ ಹಕ್ಕಾಗಿತ್ತು. ಭಾಷೆಯ ಪರಿಜ್ಞಾನವಿಲ್ಲದ ಜಾಗದಲ್ಲಿ ಎರಡು ಭಾರೀ ಸೂಟ್‌ಕೇಸುಗಳನ್ನು ಹೇರಿಕೊಂಡು, ಟ್ಯಾಕ್ಸಿ ಹಿಡಿದು, ಗಂಟೆಗೊಮ್ಮೆ ಬ್ರಸಲ್ಸ್ ಗೆ ಹೋಗುವ ರೈಲನ್ನು ಹತ್ತಿ ಅದರಲ್ಲಿ ಪ್ರಯಾಣ ಮಾಡುವುದಕ್ಕಿಂತ, ಭಾರತೀಯನೆಂದು ಹೇಳಿಕೊಂಡು ಹೇರಿಕೊಂಡು ಹೋಗುವುದೇ ಉತ್ತಮ ಎನ್ನಿಸಿತ್ತು. ಮೇಲಾಗಿ ಈ ಮೂಲಕ ೨೮ ಯೂರೋಗಳನ್ನೂ ಉಳಿಸಿ ಅದರಲ್ಲಿ ಮನೆಗೆ ಬೆಲ್ಜಿಯನ್ ಚಾಕೊಲೇಟುಗಳನ್ನೂ ತರಬಹುದಿತ್ತು!

ಲಕ್ಸಂಬರ್ಗ್‌ನಲ್ಲಿ ಸಸ್ಯಾಹಾರಿ


ಸಾಮಾನ್ಯವಾಗಿ ಸೆಮಿನಾರುಗಳಿಗೆಂದು ವಿದೇಶಕ್ಕೆ ಹೋದಾಗ ಭಾರತೀಯರ ಒಂದು ತಂಡ ಯಾವಾಗಲೂ ಕಾಣಿಸುತ್ತದೆ. ಎಲ್ಲರೂ ಒಂದು ಗುಂಪಾಗಿ, ಅಲ್ಲಿ ಇಲ್ಲಿ ಓಡಾಡುವುದು, ಸ್ಥಳೀಯ ಪ್ರಾವಾಸೀ ತಾಣಗಳಿಗೆ ಭೇಟಿ ನೀಡುವುದು, ಹಾಗೂ ಬಂದ ಮುಖ್ಯಕೆಲಸವಾದ ಪೇಪರ್ ಓದುವುದು ಎಲ್ಲವೂ ನಡೆಯುತ್ತದೆ. ಸಾಮಾನ್ಯವಾಗಿ ದೇಸಿಗಳಲ್ಲಿ ಎರಡು ಭಾಗಗಳು ಸಹಜವಾಗಿಯೇ ಆಗುತ್ತವೆ. ಒಂದು ಭಾಗ ಸಾಹಸಿಗಳದ್ದು. ಅವರು ಯಾವುದೇ ರೀತಿಯ ಊಟವನ್ನಾದರೂ ತಿನ್ನಬಲ್ಲವರು, ಆಯಾ ಜಾಗದ ನೈಟ್ ಕ್ಲಬ್ಬುಗಳನ್ನು ಶೋಧಿಸಿ ನೋಡುವವರು ಮತ್ತು ಅಲ್ಲಿರಬಹುದಾದ ಯಾವುದೇ ಮನರಂಜನೆಯನ್ನಾಗಲೀ ಲಗಾಮಿಲ್ಲದೇ ಅಸ್ವಾದಿಸಲು ತಯಾರಾಗಿರುವವರು. ಎರಡನೇ ಭಾಗ ಛಳಿಯನ್ನು ತಡೆಯಲಾರದೇ ಒದ್ದಾಡುವ, ಮನೆಯಿಂದ ಎಂಟಿ‌ಆರ್ ಪ್ಯಾಕೆಟ್ಟುಗಳನ್ನು ಕಟ್ಟಿ ತಂದಿರುವ, ಯಾವ ರಿಸ್ಕನ್ನೂ ತೆಗೆದುಕೊಳ್ಳದೇ ಆಯೋಜಕರು ತೋರಿಸಿದ ನೋಟಗಳನ್ನು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದು ಬರುವ ಭಯಭೀತರು. ಅವರು ಯಾವಾಗಲೂ ತಮ್ಮ ಜೇಬನ್ನು ತಡಕಿ ನೋಡುತ್ತಾ, ಹಣವನ್ನು ಎಣಿಸುತ್ತಾ, ಪಾಸ್‍ಪೋರ್ಟ್ ಸರಿಯಾಗಿದೆಯೇ ಎಂದು ಪರೀಕ್ಷಿಸಿಕೊಳ್ಳುತ್ತಾ ಭಯಭೀತಿಯಿಂದ ಕಳೆಯುವವರು. ಅವರುಗಳಲ್ಲಿ ಕೆಲ ಧುರೀಣರು ಹಣ ಉಳಿತಾಯ ಮಾಡುವ ನಾನಾ ವಿಧಾನಗಳನ್ನು ಕಂಡು ಹಿಡಿದವರಾಗಿರುತ್ತಾರೆ. [ಉದಾಹರಣೆಗೆ, ಸೆಮಿನಾರಿನಲ್ಲಿ ಕೊಟ್ಟ ಅಲ್ಪಾಹಾರವನ್ನು ಹೆಚ್ಚಾಗಿ ತಿಂದರೆ ರಾತ್ರೆಯ ಊಟದ ಖರ್ಚು ತಪುತ್ತದೆ ಅನ್ನುವವರು, ಹಣ್ಣ್ದು ಹಂಪಲನ್ನು ಕೊಂಡು ರೂಮಿನಲ್ಲಿ ತಿನ್ನುವವರು, ಮತ್ತು ಸೂಪು ಕುಡಿದರೆ ಜೊತೆಗೆ ಕೊಡುವ ಬ್ರೆಡ್ಡಿನಲ್ಲೇ ಊಟಮುಗಿಸಬಹುದೆಂದು ಲೆಕ್ಕ ಹಾಕುವವರು].

ನಮ್ಮ ನಡುವೆಯೇ ಇರುವ ಸೀಮಂತಿನಿ ನಿರಂಜನ

ಮೇ ೨೭ ರಾತ್ರೆ ಹನ್ನೊಂದಕ್ಕೆ ಸೀಮಂತಿನಿ ನಿರಂಜನ ತೀರಿಕೊಂಡರೆಂಬ ಸುದ್ದಿ ಎಸ್.ಎಮ್.ಎಸ್ ಮೂಲಕ ಬಂತು. ಮುಂಜಾನೆ ದಸ್ತಕಾರ್ ಆಂಧ್ರಾದಿಂದ ಫೋನು. ಈ ಸುದ್ದಿಯು ದುಃಖ ಒಂದು ವಿಚಿತ್ರರೀತಿಯದ್ದು. ಎರಡು ವರುಷಗಳ ಕೆಳಗೆ ನನಗೆ ಸೀಮಂತಿನಿ ಒಂದು ಹೆಸರು ಮಾತ್ರ. ಅನುಪಮಾ-ನಿರಂಜನರ ಮಗಳೆಂದೂ, ನಿರಂಜನರ ಸಮಗ್ರ ಕೃತಿಗಳನ್ನು ಐಬಿ‌ಎಚ್‍ನವರು ತರುತ್ತಿದ್ದಾಗ ಅವರ ಕೃತಿಗಳ ಹಕ್ಕುಗಳು ಆಕೆಯ ಬಳಿಯಿದೆ ಎಂದೂ ನಾನು ಕಂಡಿದ್ದೆ. ಆಕೆ ಸಮಾಜಶಾಸ್ತ್ರದಲ್ಲಿ ಉನ್ನತ ಪದವಿ ಪಡೆದಿದ್ದರರು. ಇ.ಪಿ.ಡಬ್ಲುವಿನಲ್ಲಿ ಯಾವಾಗಲಾದರೂ ಬರೆಯುತ್ತಿದ್ದ ಆಕೆಯ ಉತ್ತಮ ಲೇಖನಗಳನ್ನು ನಾನು ನೋಡಿದ್ದೆ. ಆಕೆಯ ಸಹೋದರಿ ತೇಜಸ್ವಿನಿಯ ಜೊತೆಗೂಡಿ "ಸ್ತ್ರೀವಾದಿ ಸಹಿತ್ಯ ವಿಮರ್ಶೆ" ಅನ್ನುವ ಪುಸ್ತಕವನ್ನೂ ಆಕೆ ಸಂಪಾದಿಸಿದ್ದರು. ಎಂದಿನಂತೆ ಅದನ್ನು ರಾಜು ಮೇಷ್ಟರು ಪ್ರಕಟಿಸಿದ್ದರು.

ಹೈದರಾಬಾದ್: ಒಂದೆರಡು ಪುಸ್ತಕ, ಒಂದು ಸಿನೇಮಾ

ಹೈದರಾಬಾದಿನ ವಿಷಯಕ್ಕೆ ಬಂದಾಗ ನರೇಂದ್ರ ಲೂಥರ್ ಪಳಗಿದ ಕೈಯೆಂದೇ ಹೇಳಬೇಕು. ಆತನಿಗೆ ಈ ನಗರದ ಬಗ್ಗೆ ಚೆನ್ನಾಗಿ ಗೊತ್ತು, ಅವರು ನಗರದ ನಾಡಿಬಡಿತವನ್ನು ಕರಗತಮಾಡಿಕೊಂಡಿದ್ದಾರೆ. ಹೈದರಾಬಾದಿನ ಚರಿತ್ರೆಯ ಬಗ್ಗೆ ಆತ ಸಾಕಷ್ಟು ಬರೆದಿದ್ದಾರೆ. ಹೈದರಾಬಾದ್ ನಗರದ ಸ್ಥಾಪಕ ಕುಲಿಕುತುಬ್ ಷಾ ಬಗ್ಗೆಯೂ ಒಂದು ಪುಸ್ತಕ ಬರೆದಿದ್ದಾರಲ್ಲದೇ, ಈಚೆಗೆ ಹೈದರಾಬಾದಿನ ಜನರಿಂದ ಭಿನ್ನವಾಗಿ ಜೀವಿಸುತ್ತಿದ್ದ ರಾಜಮನೆತನದವರ ಬದುಕಿನ ಸಂಜೆ/ರಾತ್ರೆಗಳನ್ನು ಚಿತ್ರಿಸಿರುವ ಜೈಸಿಯ ನಾಕ್ಟರ್ನಲ್ ಕೋರ್ಟ್ [ರಾತ್ರೆಯ ದರಬಾರು] ಎಂಬ ಪುಸ್ತಕವನ್ನು ಉರ್ದುವಿನಿಂದ ಇಂಗ್ಲೀಷಿಗೆ ಅನುವಾದ ಮಾಡಿದ್ದಾರೆ. ಲೂಥರ್ ಅವರು ಇತ್ತೀಚಿನ ಮುಸ್ಥಕ ಮಾರುಕಟ್ಟೆಗೆ ಇಳಿದಿದೆ ಎನ್ನುವುದನ್ನು ನಾನು ಓದಿದಾಗ ಅದನ್ನು ನಾನು ಹುಡುಕಿ ಹೊರಟದ್ದು ನಿಜ. ಲೂಥರ್ ಹೈದರಾಬಾದಿನ ಚರಿತ್ರೆಯಬಗ್ಗೆ ಹೊಸತೇನನ್ನು ಹೇಳಿರಬಹುದು ಎನ್ನುವ ಕುತೂಹಲ ನನ್ನಲ್ಲಿದ್ದೇ ಇತ್ತು. ಅಹಮದಾಬಾದಿನ ಕ್ರಾಸವರ್ಡ್ ಪುಸ್ತಕದಂಗಡಿಯನ್ನು ನಾನು ಪುಸ್ತಕಗಳೂ ಇರುವ ಆಟಿಕೆಯಂಗಡಿಯೆಂದೇ ಕರೆಯುತ್ತೇನೆ. ಕಡೆಗೂ ನನ್ನ ಈ ಇಂಥ ಆಸಕ್ತಿಗಳಿಗೆಲ್ಲ ಸಹಕಾರ ನೀಡುವ ಪುಸ್ತಕದಂಗಡಿಯೆಂದರೆ ಶಾನಭಾಗ್ ನಡೆಸುವ ಬೆಂಗಳೂರಿನ ಪ್ರೀಮಿಯರ್ ಬುಕ್ ಷಾಪ್ ಮಾತ್ರ!


ಇಳಾಬೇನ್ ಮತ್ತು ಸೇವಾ: ಒಂದು ಖಾಸಗೀ ಪ್ರಬಂಧ


ಗುಜರಾತಿನಲ್ಲಿ ಜೀವನದ ಅರ್ಧಭಾಗದಷ್ಟು ಕಳೆದಿರುವ ನನ್ನಂಥವರು ಆ ರಾಜ್ಯದಲ್ಲೇ ಇದ್ದು, ಜನ ಮತ್ತು ದೇಶಕ್ಕಾಗಿ ಅಪ್ರತಿಮ ಕೆಲಸ ಮಾಡುತ್ತಿರುವ ತುಂಬಾ ಭಿನ್ನವಾಗಿರುವ ಇಬ್ಬರನ್ನು ಬೆರಗಿನಿಂದ, ಗೌರವದಿಂದ ಕಾಣದೇ, ಅವರಿಂದ ಪ್ರಭಾವಿತರಾಗದೇ ಇರುವುದು ಕಷ್ಟದ ಮಾತು. ಹಾಲು ಉತ್ಪಾದಕರ ಜೀವನದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತಂದ ಕುರಿಯನ್ ಬಗ್ಗೆ ನಾನು ಈಗಾಗಲೇ ಬರೆದಿದ್ದೇನೆ. ಕುರಿಯನ್ ಅವರ ಕೆಲಸ ಹೆಚ್ಚಿನಂಶ ಗ್ರಾಮ್ಯ ಪ್ರದೇಶಕ್ಕೆ ಸೀಮಿತವಾಗಿತ್ತು. ಪರಿಚಯದವರಿಂದ ಇಳಾಬೇನ್ ಎಂದು ಪ್ರೀತಿಯಿಂದ ಕರೆಸಿಕೊಳ್ಳಲ್ಪಡುವ ಇಳಾ ಭಟ್ ಕುರಿಯನ್‌ಗಿಂತ ತುಂಬಾ ಭಿನ್ನವಾಗಿದ್ದಾರೆ. ಆಕೆ ಹೆಚ್ಚಾಗಿ ಎಲ್ಲೂ ಕಾಣಿಸಿಕೊಳ್ಳುವುದಿಲ್ಲ. ಕಾಣಿಸಿಕೊಂಡರೂ ಧ್ವನಿಯೇರಿಸಿ ಮಾತನಾಡುವುದಿಲ್ಲ. ಮೇಜು ಗುದ್ದಿ ಕೂಗಾಡುವುದಿಲ್ಲ. ಹಾಗೆ ನೋಡಿದರೆ ಆಕೆ ಒಂದು ಸೊಳ್ಳೆಗೂ ಹಾನಿಯುಂಟುಮಾಡಬಹುದು ಅನ್ನಿಸುವುದಿಲ್ಲ. ಆಕೆಯ ಆಕಾರ ಗಾಂಧೀಜಿಯಂತೆ ಪುಟ್ಟದು, ಮಾತು ಮೃದು. ಆದರೆ ಆಕೆ ಕೈಗೊಂಡ ಯಾವುದೇ ಕೆಲಸವನ್ನು ಹಿಡಿದು ಹೊರಟಾಗ ಆ ಕೆಲಸಕ್ಕೆ ಆಕೆ ಹಾಕಿ ಹಿಡಿವ ಪಟ್ಟು ಗಟ್ಟಿಯಾದದ್ದು, ಉಕ್ಕಿನಂಥದ್ದು. ಜೀವಮಾನವಿಡೀ ಗುಜರಾತಿನ ಬಡ ಹೆಣ್ಣುಮಕ್ಕಳ ಸಮುದಾಯದ ಪರವಾಗಿ ಎಡಬಿಡದೇ ಕೆಲಸಮಾಡಿದ್ದಾರೆ.


ಹೈದರಾಬಾದ್: ಏಕೀಕರಣ?

ಏಳನೆಯ ನಿಜಾಮನ ಇಷ್ಟಕ್ಕೆ ವಿರುದ್ಧವಾಗಿ, ಜನರ ಅಭಿಪ್ರಾಯಗಳನ್ನು ಸಂಗ್ರಹಿಸದೇ ಹೈದರಾಬಾದ್ ಪ್ರಾಂತವನ್ನು ಭಾರತದ ಸಂವಿಧಾನದಡಿ ತಂದುದರ ಬಗ್ಗೆ ಸಾಕಷ್ಟು ಬರೆಯಲ್ಪಟ್ಟಿದೆ. ಈ ಬಗ್ಗೆ ಇರುವ ರಾಷ್ಟ್ರವಾದೀ ಅಭಿಪ್ರಾಯವೂ ಎಲ್ಲರಿಗೂ ವಿದಿತವಾದದ್ದೇ - ನಿಜಾಮ ಮೀರ್ ಉಸ್ಮಾನ್ ಅಲಿಯ ನಿಲುವಿನಲ್ಲಿ ಹುರುಳಿರಲಿಲ್ಲ; ಭಾರತದ ನಡುಮಧ್ಯದಲ್ಲಿದ್ದ ಹೈದರಾಬಾದಿಗಿದ್ದ ಭೌಗೋಳಿಕ ಮಹತ್ವವನ್ನು ಗಮನಿಸಿದಾಗ ಆ ಪ್ರಾಂತವನ್ನು ಪಾಕಿಸ್ತಾನದ ಅಂಗವನ್ನಾಗಿ ಮಾಡುವ ಯೋಚನೆಯನ್ನು ಮಾಡುವುದಾಗಲೀ, ಹೈದರಾಬಾದನ್ನು ಸ್ವತಂತ್ರ ರಾಜ್ಯವಾಗಿ ಬಿಟ್ಟುಕೊಡುವುದಾಗಲೀ ಅಸಾಧ್ಯದ ಮಾತೇ ಆಗಿತ್ತು. ಹೀಗಾಗಿ ಪೋಲೀಸ್ ಕಾರ್ಯಾಚರಣೆ ಹಾಗೂ ಹೈದರಾಬಾದನ್ನು ಭಾರತದ ಸೇರಿಸುವ ಪ್ರಕ್ರಿಯೆಯಲ್ಲಿ ಉಕ್ಕಿನ ಮಾನವ ಸರದಾರ್ ಪಟೇಲರ ಸಾಧನೆಗಳಲ್ಲಿ ಮಹತ್ವದ್ದೆಂದು ಗುರುತಿಸುವುದು ಸಹಜವೂ ಆಗಿದೆ.

ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು


ಇತರ ಹಿಂದುಳಿದ ಜಾತಿಯವರಿಗೆ ವಿದ್ಯಾಸಂಸ್ಥೆಗಳಲ್ಲಿ ೨೭% ಮೀಸಲಾತಿ ನೀಡುವಂತಹ ಕಾನೂನನ್ನು ಎತ್ತಿಹಿಡಿದ ಸರ್ವೋಚ್ಚ ನ್ಯಾಯಾಲಯದ ತೀರ್ಪು ಬರುತ್ತಿದ್ದಂತೆಯೇ ಸಮಾನತೆ, ಗುಣಮಟ್ಟ ಇತ್ಯಾದಿಯ ಬಗೆಗಿನ ಚರ್ಚೆ ಮತ್ತೆ ಆರಂಭವಾಗಿದೆ. ಚರ್ಚೆಗೆ ಒಂದು ಸ್ಪಷ್ಟ ಉತ್ತರ ಸಿಗುವುದಾಗಿದ್ದರೆ ಇಷ್ಟು ಗೊಂದಲಮಯ ವಸ್ತುವೇ ಆಗುತ್ತಿರಲ್ಲ. ಇದರಿಂದಾಗಿ .ಬಿ.ಸಿಗಳಿಗೆ ಒಳಿತಾಗುವುದೇ? ಮೇಲ್ವರ್ಗದವರ ಅವಕಾಶಗಳು ಕಡಿಮೆಯಾಗುವುದೇ? ಎಲ್ಲರನ್ನೂ ಸಮಾನ ಮಾನದಂಡದ ಮೇಲೆ ಅಳೆಯುತ್ತಿದ್ದ ಸಿದ್ಧಾಂತಕ್ಕೆ ಧಕ್ಕೆ ಬಂದಿದೆಯೇ? ಎಲ್ಲ ಪ್ರಶ್ನೆಗಳೂ ಉದ್ಭವಿಸುತ್ತವೆ. ಜಟಿಲವಾದ ವಿಷಯದ ನಿರಚನೆ ಅಷ್ಟೇ ಜಟಿಲವಾದದ್ದು.

ಸರ್ವರಿಗೂ ಸಮಬಾಳು ಅನ್ನುವ ಮಾತು ಎಂದಿಗಾದರೂ ನಿಜವಾಗಲು ಸಾಧ್ಯವೇ?

ಮುಂದೆ...

ಸಾಲಮನ್ನಾ ರಾಜಕಾರಣ


ಕರ್ನಾಟಕದಲ್ಲಿ ಚುನಾವಣೆಯ ಬಿಸಿಯೇರುತ್ತಿದ್ದಂತೆ, ಅನೇಕ ಹೊಸ ಆಶ್ವಾಸನೆಗಳು, ಹೊಸ ಭರವಸೆಗಳನ್ನು ವಿವಿಧ ಪಕ್ಷಗಳು ನೀಡುತ್ತಿವೆ. ಸಾಮಾನ್ಯವಾಗಿ ಗ್ರಾಮೀಣ ಮತದಾರರನ್ನು ಓಲೈಸಲು ಪಕ್ಷಗಳು ಕೃಷಿ, ಗ್ರಾಮೀಣ ಪ್ರದೇಶಗಳಿಗೆ ಸಂಬಂಧಿಸಿದ ಅನೇಕ ಯೋಜನೆಗಳನ್ನು ಕೈಗೊಳ್ಳುವ ಮಾತನ್ನಾಡುವುದನ್ನು ನಾವು ಕಂಡೇ ಇದ್ದೇವೆ. ಎಲ್ಲ ಪಕ್ಷಗಳಿಗೂ ಪ್ರಿಯವಾದ ಯೋಜನೆಗಳೆಂದರೆ ಕೃಷಿ ಸಂಬಂಧಿತವಾದ ಸಾಲವನ್ನು ಮನ್ನಾ ಮಾಡುವುದು, ಅಥವಾ ಕೃಷಿ ಸಾಲದ ಮೇಲಿನ ಬಡ್ಡಿದರದಲ್ಲಿ ಕಡಿತವನ್ನು ಘೋಷಿಸುವುದು, ಉಚಿತ ವಿದ್ಯುತ್ ಸರಬರಾಜಿನ ಭರವಸೆ ನೀಡುವುದು ಹಾಗೂ ಕರುಣಾನಿಧಿಯವರ ಕರುಣೆಯ ನಂತರ ಹೊಸತಾಗಿ ಚುನಾವಣಾ ಭರವಸೆಗೆ ಸೇರಿರುವ ಉಚಿತ ಬಣ್ಣದ ಟೀವಿಗಳನ್ನು ಹಂಚುವುದು. ಮೊದಲಿಗೆ ಯಾವುದಾದರೂ ಯೋಜನೆಯಿದ್ದಲ್ಲಿ ಅದರ ಕರ್ತೃವಿನ ಛಾಪು ಇರುತ್ತಿತ್ತು. ಉದಾಹರಣೆಗೆ ೨ ರೂಪಾಯಿಗಳಿಗೊಂದು ಕಿಲೋ ಅಕ್ಕಿಯನ್ನು ಕೊಡಲು ಪ್ರಾರಂಭಿಸಿದವರು ತೆಲುಗುದೇಶಂ ಪಕ್ಷದ ನಾಯಕರಾಗಿದ್ದ ಎನ್.ಟಿ.ರಾಮಾರಾವು ಅವರು. ಆದರೆ ಅದನ್ನು ಕಾಂಗ್ರೆಸ್ ಪಕ್ಷ ಈಗ ತನ್ನದಾಗಿಸಿಕೊಂಡಿದೆ. ಕರ್ನಾಟಕದಲ್ಲಿ ಬಿಜೆಪಿ ಪಕ್ಷದವರು ಉಚಿತ ವಿದ್ಯುತ್ತಿನ ಬಗ್ಗೆ ಮಾತಾಡುತ್ತಿರುವಾಗಲೇ ಅವರದೇ ಪಕ್ಷದ ಸರಕಾರ ಗುಜರಾತಿನಲ್ಲಿ ವಿದ್ಯುತ್ತಿಗೆ ಪೂರ್ಣ ಶುಲ್ಕವನ್ನು ವಿಧಿಸಿಯೂ ಚುನಾವಣೆ ಗೆದ್ದಿದೆ. ಡಿಎಂಕೆ ನೀಡಿದ ಬಣ್ಣದ ಟೀವಿಯ ಭರವಸೆಯನ್ನು ಕಾಂಗ್ರೆಸ್ ತನ್ನದೇ ಎಂಬಂತೆ ಸ್ವೀಕರಿಸಿದೆ. ಹೀಗಾಗಿ ರಾಷ್ಟ್ರೀಯ ಪಕ್ಷಗಳಿಗೂ ಪ್ರಾಂತೀಯ ಪಕ್ಷಗಳಿಗೂ ವ್ಯತ್ಯಾಸವೇ ಕಾಣದಂತಾಗಿದೆ.

ಮುಂದೆ...

ರೀತಿ ರೀವಾ-ಜು, ಸಿದ್ದಿ, ಭಯಭೀತಿ.... ಮತ್ತು ಈ ಎಲ್ಲದರ ನಡುವೊಂದು ಅದ್ಭುತ ಜಲಪಾತ



ನನ್ನ ರಿಸರ್ಚ್ ಪ್ರಾಜೆಕ್ಟುಗಳಿಂದಾಗಿ ಆಗಾಗ ಕೆಲವು ಕುತೂಹಲಕಾರಿ ಜಾಗಗಳಿಗೆ ಹೋಗುವ ಅವಕಾಶ ಸಿಗುತ್ತದೆ. ಗ್ರಾಮೀಣ ಪ್ರದೇಶದ ಕುಟುಂಬಗಳು ತಮ್ಮ ಆರ್ಥಿಕ ವ್ಯವಹಾರಗಳನ್ನು ಯಾವರೀತಿಯಲ್ಲಿ ಕೈಗೊಳ್ಳುತ್ತಾರೆ, ಯಾವ ರೀತಿಯ ಅವಶ್ಯಕತೆಗಳಿಗಾಗಿ ಯಾವ ಮೂಲದಿಂದ ಹಣ ಮತ್ತು ಸವಲತ್ತುಗಳನ್ನು ಸಂಯೋಜಿಸುತ್ತಾರೆನ್ನುವ ಕುತೂಹಲಕಾರಿ ವಿಷಯವನ್ನು ನಾನು ಒಂದೆರಡು ವರ್ಷಗಳಿಂದ ಅಧ್ಯಯನ ಮಾಡುತ್ತಾ ಬಂದಿದ್ದೇನೆ. ಈ ಅಧ್ಯಯನಕ್ಕಾಗಿ ಅನೇಕ ಕುಟುಂಬಗಳಿಂದ ಮಾಹಿತಿ ಸಂಗ್ರಹಿಸಿ ಅದರಿಂದ ಅರ್ಥವಾಗುವಂತಹ ವಿಷಯವೇನಾದರೂ ಹೊರಬರಬಹುದೋ ಅನ್ನುವುದೇ ನಮ್ಮ ಕುತೂಹಲ. ಹೀಗಾಗಿ ಈ ವಿಷಯವಾಗಿ ರಾಜಾಸ್ಥಾನ, ಝಾರಖಂಡ್, ಛತ್ತೀಸಘಡ, ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕದಿಂದ ಮಾಹಿತಿಯನ್ನು ಸಂಗ್ರಹಿಸಿ ಅದನ್ನು ಜೀರ್ಣಿಸಿಕೊಳ್ಳುವ ಪ್ರಯತ್ನದಲ್ಲಿದ್ದಾಗಲೇ - ಈ ಅಧ್ಯಯನವನ್ನು ಮಧ್ಯಪ್ರದೇಶದಲ್ಲಿ ಮುಂದುವರೆಸುವ ಅವಕಾಶ ನನಗೆ ಒದಗಿಬಂತು.

ವೈನ್‍ಕೆ-ರಾಜುಮೇಷ್ಟ್ರು: ತಲೆಮಾರುಗಳಿಗಿಬ್ಬರು


ಇಬ್ಬರು ಭಿನ್ನ ವ್ಯಕ್ತಿಗಳನ್ನು ಒಂದೇ ಲೇಖನದಡಿ ಯಾಕೆ ತರುತ್ತಿರುವೆ ಅನ್ನುವುದು ನನಗೇ ತಿಳಿಯುತ್ತಿಲ್ಲ ವೈ‌ಎನ್‍ಕೆ ತೀರಿಕೊಂಡರು ಅನ್ನುವ ಸುದ್ದಿ ಬಂದ ದಿನ ಮನಕ್ಕೆ ಆದಷ್ಟೇ ನೋವು ರಾಜು ತೀರಿಕೊಂಡ ದಿನವೂ ಆಯಿತು. ಏನೂ ಮಾತಾಡಲು ತೋಚಲಿಲ್ಲ, ಇದ್ದಕ್ಕಿದ್ದಂತೆ ಮಾಯವಾದ ಈ ಇಬ್ಬರೂ ನನ್ನ ವಾರಗೆಯವರು, ತಕ್ಷಣದ ಹಿರಿಯರು, ಅವರಿಗಿಂತ ಹಿರಿಯರು ನನಗಿಂತ ಕಿರಿಯರು, ಅವರಿಗಿಂತ ಕಿರಿಯರು.. ಹೀಗೆ ವಯಸ್ಸಿನ ಭೇದವಿಲ್ಲದೇ ಎಷ್ಟೋ ಜನರನ್ನು ಪ್ರೋತ್ಸಾಹಿಸಿ, ಅವರ ಬರಹಗಳನ್ನು ಪ್ರಕಟಿಸಿ, ಕನ್ನಡವನ್ನು ಶ್ರೀಮಂತಗೊಳಿಸಿದವರು. ಇಬ್ಬರೂ ಹೇಳದೇ ಕೇಳದೇ ಇದ್ದಕ್ಕಿದ್ದಂತೆ ಮಾಯವಾಗಿಬಿಟ್ಟರು.

ತಂಜಾವೂರಿನ ಬೃಹದೀಶ್ವರ


ತಮಿಳುನಾಡಿನ ದೇವಸ್ಥಾನಗಳು ಭವ್ಯ ಎನ್ನುವುದು ನಮಗೆಲ್ಲ ತಿಳಿದದ್ದೇ. ದೇವರನ್ನು ನಂಬದ ನನ್ನಂಥವರಿಗೆ ದೇವಸ್ಥಾನಗಳ ಜೊತೆ ಏನು ಕೆಲಸ? ಈ ಪ್ರಶ್ನೆಯನ್ನು ನಾನು ಅನೇಕ ಬಾರಿ ಕೇಳಿಕೊಂಡಿದ್ದರೂ ದೇವಸ್ಥಾನಗಳಿಗೆ ಹೋಗುವುದಿಲ್ಲ ಎನ್ನುವ ನಿಲುವನ್ನು ನಾನು ಎಂದೂ ತೆಗೆದುಕೊಂಡಿಲ್ಲ. 

ಮುಂದೆ....

ಜೈ ಅಂತ - ವಾಹ್ ತಾಜ್

ಮುಂಬಯಿಗೆ ನಾನು ಅನೇಕ ಬಾರಿ ಹೋಗಿದ್ದರೂ, ಕೆಲವು ಯಾತ್ರೆಗಳು ಮಾತ್ರ ನೆನಪಿನಲ್ಲಿ ಉಳಿಯುಂವಥಹವಾಗಿವೆ. ಮೊದಲ ಬಾರಿಗೆ ನಾನು ಮುಂಬಯಿಗೆ ಹೋದಾಗ ನಾನು ಹದಿನಾರುವರುಷದವನಾಗಿದ್ದೆ. ಒಬ್ಬನೇ ಹೋಗಿ ಮುಲುಂದಿನ ನನ್ನ ಬಂಧುಗಳ ಮನೆಯಲ್ಲಿ ಉಳಿದು ಮುಂಬಯಿಯನ್ನು ನೋಡಿಬಂದಿದ್ದೆ. ಗೇಟ್‌ವೇ, ವಿಟಿ, ಲೋಕಲ್ ರೈಲು ಎಲ್ಲದರ ಅನುಭವವೂ ಆಗಿತ್ತು. ಪ್ರತಿದಿನ ನಾನು ಪೀಕ್ ಅವರ್ ತಪ್ಪಿಸಿ ಹೊರಗೆ ಹೋಗುವುದು, ಮತ್ತೆ ಯಾವ ಕಷ್ಟವೂ ಇಲ್ಲದೇ ವಾಪಸ್ಸಾಗುವುದು, ಒಟ್ಟಾರೆ ಮುಂಬಯಿ ಎಂದರೆ ಬಂದವರ ಭೀತಿಯೊಂದಿಗೆ ಅತಿಥೇಯರ ಭೀತಿಯೂ ಇರುತ್ತಿತ್ತು ಅನ್ನಿಸುತ್ತದೆ. ಮೊದಲ ಯಾವ ತೊಂದರೆಯೂ ಇಲ್ಲದೇ ಆಯಿತು. ಅನೇಕ ಸ್ಥಳಗಳನ್ನು ನೋಡಿದೆ ಹಾಗೂ ಒಂದು ವಿಚಿತ್ರ ಭಾವನೆಯೊಂದಿಗೆ ವಾಪಸ್ಸಾದೆ. ರಾಘವೇಂದ್ರ ಪಾಟೀಲರ ಅಜ್ಞಾತ ಮುಂಬಯಿ ಓದಿದಾಗ ನನ್ನ ಮೊದಲ ಭೇಟಿಯ ನೆನಪಾಯಿತು.
ಮುಂದೆ....

ಶಿಸ್ತಿನ ಚಿತ್ತಾಲರಿಗೆ ಪಂಪ...

ಯಶವಂತ ಚಿತ್ತಾಲರಿಗೆ ಪಂಪ ಪ್ರಶಸ್ತಿ ಬಂದಿದೆ ಅನ್ನುವುದು ಖುಶಿಯ ವಿಷಯ. ದೂರದೂರಿನಲ್ಲಿ ಕೂತು ತಮ್ಮಷ್ಟಕ್ಕೆ ತಾವು ಕೆಲಸ ಮಾಡುತ್ತಿರುವ ಚಿತ್ತಾಲರು ಯಾವ ಪ್ರಶಸ್ತಿಯನ್ನೂ ಅಟ್ಟಿಸಿಕೊಂಡು ಹೋದವರಲ್ಲ. ಅಥವಾ ಅಲ್ಲಿ ಇಲ್ಲಿ ಸೆಮಿನಾರುಗಳಲ್ಲಿ ಕಾಣಿಸಿಕೊಂಡವರಲ್ಲ. ತಮ್ಮಷ್ಟಕ್ಕೆ ತಾವು ಬ್ಯಾಂಡ್‍ಸ್ಟಾಂಡಿನಲ್ಲಿ ಕೂತು ಸಾಹಿತ್ಯದ ಬಗ್ಗೆ ಸದಾ ಚಿಂತಿಸುತ್ತ, ಹೊಸ ಸಾಹಿತ್ಯವನ್ನು ಬೆರಗಿನಿಂದ ನೋಡುತ್ತಾ, ಕ್ರಿಕೆಟ್ ಮ್ಯಾಚುಗಳನ್ನು ಚಾಚೂ ಬಿಡದೇ ನೋಡುತ್ತಾ ಶಿಸ್ತಿನ ಜೀವನವನ್ನು ಜೀವಿಸುತ್ತಿರುವವರು. ಕಣ್ಣಿಗೆ ಬೀಳದಿರುವ ವ್ಯಕ್ತಿಗಳನ್ನು ನಾವು ಬಹುತೇಕ ಮರೆತುಬಿಡುತ್ತೇವೆ. ಹಾಗೆ ಮರೆಯದಿರುವಂತೆ ಸದಾ ನೆನಪಿನಲ್ಲಿ ಉಳಿಯಬೇಕಾದರೆ ಎರಡು ಮಾರ್ಗಗಳು ಮಾತ್ರ ಇವೆ. ಒಂದು: ಚಿತ್ತಾಲ, ರಾಘವೇಂದ್ರ ಖಾಸನೀಸ, ದೇವನೂರ ಮಹಾದೇವ -- ಇಂಥವರ ಥರ ಅದ್ಭುತ ಪ್ರತಿಭೆ ಇರಬೇಕು, ಇಲ್ಲವೇ ಆಗಾಗ ಏನಾದರೊಂದು ಬರೆದು ಜನರ ಗಮನವನ್ನು ಸೆಳೆಯುತ್ತಿರಬೇಕು. ಚಿತ್ತಾಲರಿಗೆ ಅದ್ಭುತ ಪ್ರತಿಭೆಯೂ ಇದೆ, ಜೊತೆಗೆ ನಿರಂತರ ಒಳ್ಳೆಯ ಕೃತಿಗಳನ್ನು ಸಾಹಿತ್ಯಕ್ಕರ್ಪಿಸುವ ಶಿಸ್ತೂ ಇದೆ. ಹೀಗಾಗಿಯೇ ಅವರು ಒಂದಕ್ಕಿಂದ ಒಂದು ಉತ್ತಮ ಕೃತಿಗಳನ್ನು ನಮಗೆ ನೀಡುತ್ತಾ, ನಮ್ಮನ್ನೆಲ್ಲ ಪ್ರೋತ್ಸಾಹಿಸುತ್ತಾ, ಹುರುದುಂಬಿಸುತ್ತಾ ಬೆಳೆದು ನಿಂತಿದ್ದಾರೆ.


ಮುಂದೆ...

ಮಾವೋತೊ ನಕ್ಸಲ್


ಆರು ವರ್ಷಗಳ ಹಿಂದೆ, ನೌಕರಿಗೆಂದು ಹೈದರಾಬಾದ್ ಹೊಕ್ಕಾಗ, ಮೊದಲ ಬಾರಿಗೆ ಕಾಳಜಿಪೂರ್ವಕವಾಗಿ ನಕ್ಸಲೈಟ್ ಎಂಬ ಪದ ಬಳಕೆಯಾಗುವುದನ್ನು ಕಂಡೆ.


ಅದಕ್ಕೂ ಮೊದಲು -

ಇಲ್ಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾದಲ್ಲಿ ಓದಿದ್ದ - ಸಿಲಿಗುಡಿಯ ಬಳಿಯ ನಕ್ಸಲ್ಬರಿ ಗ್ರಾಮದ ರೈತಾಂಗ ಬಂಡೆದ್ದ ಕಥೆ, ಮಿಥುನ್ ಚಕ್ರಬೋರ್ತಿ ಎಂಬಂಥ ಹಿಂದಿ ಚಿತ್ರನಟ ಹಿಂದೆ ನಕ್ಸಲೈಟ್ ಆಗಿದ್ದ ಎಂಬ ವದಂತಿ, ಎಲ್ಲವೂ, ೧೮೯೫ರಲ್ಲಿ ಬಂಡೆದ್ದು ದಂತ ಕಥೆಯಾದ ಬಿರ್ಸಾ ಮುಂಡಾನ ಕಥೆಯಷ್ಟೇ, ಅಥವಾ ತೆಲಂಗಾಣಾ ರೈತಾಂಗ ಹೋರಾಟದಲ್ಲಿ ಅಮರನಾದ ದೊಡ್ಡಿ ಕೊಮುರಯ್ಯನ ಕಥೆಯಷ್ಟೇ ಪರಕೀಯವಾಗಿ ನನ್ನಂತರಂಗವನ್ನ ಹೊಕ್ಕಿತ್ತು.

ಮುಂದೆ...


ಇಕೊಳ್ಳಿ ಉಂಬರ್ಟೋ!


ನಾನು ಓದಿರುವ ಲೇಖಕರಲ್ಲಿ ಅತ್ಯಂತ ಪ್ರಭಾವಶಾಲಿಯಾದ ಅದ್ಭುತ ಲೇಖಕರಲ್ಲಿ ಮುಂಚೂಣಿಯಲ್ಲಿ ನಿಲ್ಲುವವರು ಉಂಬರ್ಟೋ ಇಕೊ. ಆತ ಪತ್ರಿಕೆಗಳಲ್ಲಿ ಬರೆಯುವ ಲೇಖನಗಳು ಸಮಕಾಲೀನ ಆಗುಹೋಗುಗಳಿಗೆ ಬುದ್ಧಿಜೀವಿಯೊಬ್ಬನ ಸರಳ ಹಾಸ್ಯಭರಿತ ಭಾಷೆಯ ಪ್ರತಿಕ್ರಿಯೆಯಾದರೆ, ಭಾಷಾಶಾಸ್ತ್ರ ಮತ್ತು ಅದಕ್ಕೆ ಸಂಬಂಧಿಸಿದ ಗಹನ ಲೇಖನಗಳು ಆ ಕ್ಷೇತ್ರದಲ್ಲಿ ಎದ್ದು ನಿಲ್ಲುತ್ತವೆ. ಕೆಲವರ್ಷಗಳ ಹಿಂದೆ deconstruction [ನಿರಚನೆ]ಯ ಬಗ್ಗೆ ಬರೆದಿದ್ದ ಪಾಂಡಿತ್ಯ ಪೂರ್ಣ ಲೇಖನವನ್ನು ನಾನು ಓದಿದ್ದ ನೆನಪು. ಕಳೆದ ವರ್ಷ ಇಕೊ ಭಾರತದಲ್ಲಿ ಹಲವುದಿನಗಳು ಇದ್ದು ಹೋದರು. ಕಾದಂಬರಿಕಾರರಾಗಿ ಇಕೋ ತಮ್ಮ ಬರವಣಿಗೆಯಲ್ಲಿ ಇತರ ಅನೇಕರು ತರಲು ಸಾಧ್ಯವಾಗದ ಅನೇಕ ಆಯಾಮಗಳನ್ನು ತರಲು ಪ್ರಯತ್ನಿಸುತ್ತಾರೆ. ಹಾಗೆ ಇತರೆ ಆಯಾಮಗಳನ್ನು ತರುವಾಗ ಅದನ್ನು ಕೇವಲ ಉತ್ಪ್ರೇಕ್ಶೆ ಅಥವಾ ಅತಿರಂಜಕತೆಗಾಗಿ ತರದಿರುವ ಎಚ್ಚರವನ್ನು ಅವರು ವಹಿಸುತ್ತಲೇ ತಾವು ಬರೆದದ್ದನ್ನು ಆಸಕ್ತಿಕರವಾಗಿ ಇರುವಂತೆ ಮಾಡುತ್ತಾರೆ. ಅದಕ್ಕೇ ನೇಮ್ ಆಫ್ ದ ರೋಸ್ ಕಾದಂಬರಿಯಲ್ಲಿ [ಮತ್ತು ಅದನ್ನು ಬರೆದ ಪ್ರಕ್ರಿಯೆಯ ಬಗ್ಗೆ ಬರೆದ ರಿಫ್ಲೆಕ್ಷನ್ಸ್ ಆನ್ ದ ನೇಮ್ ಆಫ್ ದ ರೋಸ್] ಅವರ ಬರವಣಿಗೆ ಡಾವಿಂಚಿ ಕೋಡ್‌ನಂತಹ ಕಾದಂಬರಿಗಿಂತ ಎಷ್ಟು ಭಿನ್ನವಾಗಿದೆ ಎನ್ನುವುದನ್ನು ನಾವು ಕಾಣಬಹುದು. ಎರಡೂ ಕಾದಂಬರಿಗಳು ಚರಿತ್ರೆಯ ಕೆಲ ಘಟನೆಗಳ ಸಂಶೋಧನೆಯ ಆಧಾರದ ಮೇಲೆ ಬರೆದವುಗಳಾದದ್ದರಿಂದ ನಾವು ಈ ವ್ಯತ್ಯಾಸವನ್ನು ಸುಲಭವಾಗಿ ನೋಡಬಹುದು. ಇದಲ್ಲದೇ ಇಕೋ ಅವರ ಕಾದಂಬರಿಗಳನ್ನು ಸುಮ್ಮನೆ ತಿರುವಿಹಾಕುತ್ತಲೂ ಇರಬಹುದು. ಅವರ ಬರವಣೆಗೆಯ ಬಿಡಿಭಾಗಗಳೇ ಮನಸ್ಸಿಗೆ ಸಾಕಷ್ಟು ಗ್ರಾಸವನ್ನು ಒದಗಿಸುತ್ತವೆ.

ಹೈದರಾಬಾದ್: ಮೂರು ಕಾದಂಬರಿಗಳು

ನನ್ನ ಹೈದರಾಬಾದಿನ ಆಸಕ್ತಿ ಮುಂದುವರೆಯುತ್ತದೆ. ಹೀಗಾಗಿಯೇ ಅಷ್ಟೇನೂ ಒಳ್ಳೆಯದು ಅನ್ನಿಸದಿದ್ದರೂ ಆ ಬಗ್ಗೆ ಬಂದ ಪುಸ್ತಕಗಳನ್ನೆಲ್ಲಾ ಕೊಳ್ಳುತ್ತೇನೆ. ಇದು ಒಂದು ಥರದ ಕುತೂಹಲ, ಬೇಕೆಂದರೆ ಸ್ವಲ್ಪ ಚಟವೆನ್ನಿ. ಹೈದರಾಬಾದಿಗೆ ಸಾಧ್ಯವಾದಾಗಲೆಲ್ಲ ಹೋಗುವುದು ಆ ನಗರದ ಬಗ್ಗೆ ಓದುವುದು, ಬರೆಯುವುದು ನನಗೆ ಪ್ರಿಯ ಕಾಯಕ. ಆ ನಗರಕ್ಕೆ ಇರುವ ವಿಚಿತ್ರ ಚರಿತ್ರೆ ಯಾವಾಗಲೂ ನನ್ನ ಗಮನವನ್ನು ಸೆಳೆಯುತ್ತಲೇ ಇರುತ್ತದೆ. ಕಳೆದ ಹದಿನೈದು ವರ್ಷಗಳಲ್ಲಿ ನಾನು ಆ ಪ್ರಾಂತದ ಬಗ್ಗೆ ಸಿಕ್ಕಿದ್ದನ್ನೆಲ್ಲಾ ಓದಿದ್ದೇನೆ. ಹೀಗಾಗಿ ಅಲ್ಲಿಂದ ಬಂದ ಕಾದಂಬರಿಗಳನ್ನು ಓದದೇ ಇರಲಾಗಲಿಲ್ಲ. ಕಳೆದ ಕೆಲವು ದಿನಗಳಲ್ಲಿ ನಾನು ಮೂರು ಭಿನ್ನ ಕಾದಂಬರಿಗಳನ್ನು ಓದಿದೆ. ಮೂರೂ ಬೇರೆಯದಾಗಿಯೇ ಇವೆ. ಕಥಾನಕದಲ್ಲಿ ಮತ್ತು ನಿರೂಪಣೆಯಲ್ಲಿ ಸುಮಾರಾದ ವೈವಿಧ್ಯತೆ ಇದೆ - ಎಲ್ಲಕ್ಕೂ ಸಮಾನವಾದ ಕೊಂಡಿಯೆಂದರೆ ಅವು ಹೈದರಾಬಾದಿನಲ್ಲಿ ನಡೆವ ಕಥೆಗಳು ಅನ್ನುವುದಷ್ಟೇ. ಆ ಕಥೆಗಳು ನಡೆದ ಕಾಲಕ್ರಮಾನುಸಾರವಾಗಿ ಅವುಗಳ ಬಗ್ಗೆ ನಾನು ಇಲ್ಲಿ ಚರ್ಚಿಸುತ್ತೇನೆ... ನಾನು ಈ ಪುಸ್ತಕಗಳನ್ನು ಓದಿದ ಕ್ರಮವೂ ನಾನು ಅವುಗಳನ್ನು ಕಾಲಕ್ರಮಾನುಸಾರವಾಗಿಯೇ ಅನ್ನುವುದರಲ್ಲಿ ಯಾವ ಕಾಕತಾಳೀಯವೂ ಇಲ್ಲ.

ಮುಂದೆ...

ಒಡೆದ ಹೃದಯ; ಮಿಡಿದ ಹೃದಯ



`ಚರಿತ್ರೆಯಿಂದ ಪಾಠ ಕಲಿಯದವರು ಅದನ್ನು ಪುನಃ ಜೀವಿಸುವ ಶಾಪ ಪಡೆಯುತ್ತಾರೆ' 
ಎಂದು ಹೇಳಿದ್ದು ತತ್ವಜ್ಞಾನಿ ಜಾರ್ಜ್ ಸಾಂತಾಯನ. ಸಾಂತಾಯನನ ಮಾತಿನ ಸತ್ಯಾಸತ್ಯತೆ ಸ್ವಲ್ಪ ಕುತೂಹಲದ ವಿಷಯ.
ಚರಿತ್ರೆ:

`ಯಾವುದೇ ಜನಾಂಗದಲ್ಲಿ ಕೋಮುಸೌಹಾರ್ದತೆಯನ್ನು ಮುಂದುವರೆಸಿ ಬರಲು ಕೆಲವು ವಿಶೇಷ ಕ್ರಮ ಕೈಗೊಳ್ಳುನ ಅಗತ್ಯ ಬೀಳುತ್ತಿತ್ತು. ಇಂಥ ಒಂದು ಸಂದರ್ಭದಲ್ಲಿ ನಿಜಾಮನೇ ಸ್ವತಃ ಹೀಗೊಂದು ಕ್ರಮ ಕೈಗೊಳ್ಳುವ ಪರಿಸ್ಥಿತಿ ಒದಗಿ ಬಂತು (ನಿಜಾಮ: ಮಹಬೂಬ್ ಅಲಿ ಪಾಷಾ - ೧೮೬೬-೧೯೧೧). ಅನೇಕ ಭಾರತೀಯ ಹಬ್ಬಗಳು ಚಾಂದ್ರಮಾನ ಪಂಚಾಂಗಕ್ಕನುಸಾರವಾಗಿ, ವರ್ಷದ ಬೇರೆ ಬೇರೆ ತಿಂಗಳುಗಳಲ್ಲಿ ಘಟಿಸುವುದುಂಟು. ಹೀಗಾಗಿ ಎರಡು ಭಿನ್ನ ಹಬ್ಬಗಳು ಒಂದೇ ದಿನ ಬೀಳುವ ಸಾಧ್ಯತೆಯೂ ಉಂಟು. ಇಂಥ ಒಂದು ಕಾಕತಾಳೀಯ ಶಿಯಾ ಮುಸಲ್ಮಾನರ ದುಃಖಭರಿತ ಮೊಹರಂ ತಿಂಗಳಿಗೂ, ಸಂತೋಷದಿಂದ ಬಣ್ಣ ಎರಚುವ ಹೋಳಿ ಹುಣ್ಣಿಮೆಗೂ ನಡುವೆ ಉಂಟಾಯಿತು.'  
ಮುಂದೆ...

ಗ್ರಾಮೀಣ್‌ನಿಂದ ಗ್ರಾಮೀಣ್ ಬ್ಯಾಂಕ್‍ನತ್ತ: ಬೆಳವಣಿಗೆಯ ಪಥ.


ಯೂನಸ್‌ಗೆ ನೊಬೆಲ್ ಪ್ರಶಸ್ತಿ ಬಂದಾಗಿನಿಂದಲೂ ಅವರ ಗ್ರಾಮೀಣ್‍ ವಿತ್ತಪದ್ಧತಿಯ ಬಗ್ಗೆ ಜಗದಾದ್ಯಂತ ಆಸಕ್ತಿ ಬೆಳೆದಿರುವುದಲ್ಲದೇ ಅವರ ಸಂಸ್ಥೆಯ ಕಾರ್ಯವೈಖರಿ ಗ್ರಾಮೀಣವಿಕಾಸದಲ್ಲಿ ಹಾಗೂ ಬ್ಯಾಂಕಿಂಗ್‌ನಲ್ಲಿ ಒಲವಿರುವ ಎಲ್ಲರ ಕುತೂಹಲವನ್ನೂ ಕೆರಳಿಸಿದೆ. ಇದು ಸಾಲದ್ದಕ್ಕೆ ಆ ಪದ್ಧತಿಯನ್ನು ಅನುಸರಿಸಿ ಧಂಧೆ ನಡೆಸುವ ಬಂಡವಾಳಹೂಡಿಕೆದಾರರ ಗಮನವನ್ನೂ "ಗ್ರಾಮೀಣ್" ತನ್ನೆಡೆಗೆ ಸೆಳೆದುಕೊಂಡಿದೆ. ಗ್ರಾಮೀಣ್ ಬಗ್ಗೆ ಅನೇಕ ವಿದ್ವಾಂಸರು, ಪತ್ರಕರ್ತರು ಬರೆದಿದ್ದಾರಾದರೂ, ಆ ಸಂಸ್ಥೆಯ ಬಗ್ಗೆ ಈಚೆಗೆ ಬಂದಿರುವ ಹೊಸ ಪುಸ್ತಕ ಆತ್ಮಚರಿತ್ರೆಯ ಮಾದರಿಯದ್ದು. ಅದರ ಲೇಖಕರಾದ ದೀಪಲ್ ಬರೂವ ಗ್ರಾಮೀಣ್ ಸಂಸ್ಥೆಯ ಉಪ ಕಾರ್ಯನಿರ್ವಾಹಕ ನಿರ್ದೇಶಕರು ಮತ್ತು ಆಸಿಫ್ ದೌಲಾ ಗ್ರಾಮೀಣ್ ಸ್ಥಾಪಿಸಿದ ಮೂಲ ತಂಡದಲ್ಲಿ ಕೆಲಸ ಮಾಡಿದ್ದ ಯೂನಸ್ ವಿದ್ಯಾರ್ಥಿ. 

ಶಕುಂತಳಾ ತಂದ ಹೊಸ ಹುರುಪು

ಈಚೆಗೆ ಬಿಡುಗಡೆಯಾದ ಶಕುಂತಳಾ ಪುಸ್ತಕಬಿಡುಗಡೆಯ ಸಂದರ್ಭದಲ್ಲಿ ಮಾತಾಡುತ್ತಾ "ಅಶೋಕ ಹೆಗಡೆ, ವಿವೇಕ, ನಾಗರಾಜ್ ವಸ್ತಾರೆ, ಶ್ರೀರಾಮ್ ಮತ್ತು ನಾನು - ಎಲ್ಲರೂ ಸಾಹಿತ್ಯೇತರ ವಲಯದಲ್ಲಿ ಕೆಲಸ ಮಾಡುತ್ತಾ, ಕನ್ನಡದಲ್ಲಿ ಕಥೆಗಳನ್ನು ಬರೆಯುತ್ತಿರುವುದು ಅದ್ಭುತವಲ್ಲವೇ?" ಎಂದು ವಸುಧೇಂದ್ರ ಹೇಳಿದರು. "ಇರಬಹುದು, ಸೋ ವಾಟ್?" ಅಂತ ನಾಗರಾಜ ವಸ್ತಾರೆ ಅವರನ್ನು ಪ್ರಶ್ನಿಸಿದರಂತೆ. ಆದರೆ ಆಲೋಚಿಸಿ ನೋಡಿದರೆ ಎರಡೂ ಮುಖ್ಯ ಮಾತುಗಳು ಅನ್ನಿಸುತ್ತದೆ. ಭಿನ್ನ ವೃತ್ತಿಯಲ್ಲಿದ್ದವರು ಭಿನ್ನ ರೀತಿಯ ಅನುಭವವನ್ನು ಕನ್ನಡದ ಬರವಣಿಗೆಗೆ ಅಳವಡಿಸುತ್ತಾರೆ ಅನ್ನುವುದು ಒಂದು ವಾದ. ಆದರೆ ಆ ಭಿನ್ನತೆ ಹೇಗೆ ಸಾಹಿತ್ಯವನ್ನು ಪೋಷಿಸುತ್ತದೆ, ಬೆಳೆಸುತ್ತದೆ ಅನ್ನುವುದನ್ನು ನಾವು ನೋಡಬೇಕಾಗಿದೆ. ಭಿನ್ನವಾದ್ದೆಲ್ಲವೂ ಉತ್ತಮವಾಗಿರಬೇಕಿಲ್ಲ ಅನ್ನುವ ದೃಷ್ಟಿಯಿಂದ ವಸ್ತಾರೆಯವರ "ಸೋ ವಾಟ್?" ಪ್ರಶ್ನೆಯನ್ನು ನಾವು ಪರಿಗಣಿಸಬೇಕಾಗುತ್ತದೆ. ಹೀಗಾಗಿ ಹೊಸ ಬರವಣಿಗೆಯನ್ನು ನಾವು ಅದರ ಭಿನ್ನತೆಯ ಕಾರಣಕ್ಕಾಗಿಯೇ ಅದು ಮುಖ್ಯ ಅಂತ ಪರಿಗಣಿಸಬೇಕಾಗಿಲ್ಲ ಅನ್ನುವ ಮಾತನ್ನು ಒಪ್ಪಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ನಾನು ಗುರುಪ್ರಸಾದ್ ಕಾಗಿನೆಲೆಯವರ ಕಥಾಸಂಕಲನ ಶಕುಂತಳಾ ಬಗ್ಗೆ ಕೆಲವು ಮಾತುಗಳನ್ನು ಬರೆಯಹೊರಟಿದ್ದೇನೆ.

ತೇಜಸ್ವಿ ಇದ್ದಾರೆ

ಮೊನ್ನೆ ಮೊನ್ನೆಯಷ್ಟೇ ಜಯಂತನ ಶಬ್ದತೀರ ಬಿಡುಗಡೆಯ ದಿನ ಮೊದಲ ಬಾರಿಗೆ ತೇಜಸ್ವಿಯವರನ್ನು ಭೇಟಿ ಮಾಡಿದ್ದೆ. ಅವರು ಬರುತ್ತಾರೆಂಬ ನಿರೀಕ್ಷೆ ಅಂದು ಯಾರಿಗೂ ಇರಲಿಲ್ಲ. ಬಹುಶಃ ಇಂಥ ಸಮಾರಂಭಗಳಿಗೆ ಅವರು ಬರುವುದಿಲ್ಲವೆಂದೇ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಬಹುದಾದ ಸಾಧ್ಯತೆಯ ಬಗ್ಗೆ ಯಾರೂ ಯೋಚಿಸಿರಲಿಕ್ಕಿಲ್ಲ. ನಿಜಕ್ಕೂ ನಾನು ತೇಜಸ್ವಿಯವರನ್ನು ಹೊರಗೆ, ಸೆಮಿನಾರುಗಳಲ್ಲಿ, ವೇದಿಕೆಯ ಮೇಲೆ ನೋಡಿದ ನೆನಪೇ ಇಲ್ಲ. ಆದರೆ ಅವರು ಸರ್ವಾಂತರ್ಯಾಮಿ. ಅವರ ಪುಸ್ತಕಗಳು ಅವರಿಗಿಂತ ಹೆಚ್ಚಿನ ಮಾತುಗಳನ್ನಾಡಿದುವು, ಅವರಿಗಿಂತ ಹೆಚ್ಚು ಕಂಡವು. ಅದಕ್ಕೇ ಏನೋ ಆದಿನ ಅವರು ಅನಿರೀಕ್ಷಿತವಾಗಿ ಅಲ್ಲಿಗೆ ಬಂದಾಗ ಜಯಂತ "ದೇವರು ಪ್ರತ್ಯಕ್ಷವಾಗುವುದನ್ನು ನಾವು ಕಥೆಗಳಲ್ಲಿ ಓದಿದ್ದೇವೆ, ಸಿನೇಮಾದಲ್ಲಿ ನೋಡಿದ್ದೇವೆ.. ಆದರೆ ಅದು ಏನೆನ್ನುವುದು ಈ ದಿನ ನಮಗೆ ಅರ್ಥವಾಯಿತು" ಅಂದ.

ಕಾವೇರಿ ಆದೇಶ: ಕೆಲವು ಪ್ರಶ್ನೋತ್ತರಗಳು


ಮೂಲ:
ರಾಮಸ್ವಾಮಿ. ಆರ್. ಐಯ್ಯರ್ 
ಅನುವಾದ: ಎಂ.ಎಸ್.ಶ್ರೀರಾಮ್.

ಬಹಳ ದಿನಗಳಿಂದ ನಿರೀಕ್ಷಿಸಿದ್ದ ಕಾವೇರಿ ಆಯೋಗದ ಅಂತಿಮ ತೀರ್ಪು ಕಡೆಗೂ ಬಂದಿದೆ. ಮೊದಲಿಗೆ ಆಯೋಗದಲ್ಲೇ ಕೆಲವು ಭಿನ್ನಾಭಿಪ್ರಾಯಗಳಿರಬಹುದೆಂಬ ಸೂಚನೆಗಳು ಇದ್ದುವಾದರೂ ಅದು ಸರ್ವಾನುಮತದ ತೀರ್ಪೆಂಬುದು ತೃಪ್ತಿಯ ಮಾತು. ಇದರಿಂದ ಆಯೋಗ ಮುಕ್ತಿ ಪಡೆದಂತಾಗಿದೆ. ಈ ಲೇಖನದ ಮುಖ್ಯ ಉದ್ದೇಶ ಆಯೋಗದ ತೀರ್ಪಿಗೆ ಪತ್ರಿಕೆಗಳಲ್ಲಿ ಬಂದಿರುವ ಕೆಲ ಪ್ರತಿಕ್ರಿಯೆಗಳನ್ನು ಪರಿಗಣಿಸಿ, ಅವುಗಳ ವಿಷಯದಲ್ಲಿ ಕೆಲವು ಸ್ಪಷ್ಟೀಕರಣಗಳನ್ನು ನೀಡುವುದಕ್ಕೆ ಸೀಮಿತವಾಗಿದೆ. ಕಾವೇರಿ ವಿವಾದದ ಇತಿಹಾಸ, ಅಲ್ಲಿಂದ ಮುಂದೆ ನಡೆದ ಪ್ರಕ್ರಿಯೆಗಳು ಮತ್ತು ಅಂತಿಮವಾಗಿ ಬಂದ ತೀರ್ಪು - ಈ ಘಟ್ಟಗಳನ್ನು ಮೊದಲಿಗೆ ಪರಿಶೀಲಿಸೋಣ. ನಂತರ ತೀರ್ಪಿನ ಹೂರಣವನ್ನು ಅರ್ಥಮಾಡಿಕೊಳ್ಳೋಣ. ತದನಂತರ ಈ ತೀರ್ಪಿಗೆ ಬಂದ ಪ್ರತಿಕ್ರಿಯೆಗಳನ್ನು ಚರ್ಚಿಸೋಣ. [ಈ ವಿವಾದದ ಇತಿಹಾಸವು ಇದೇ ಲೇಖಕರ ಹಿಂದಿನ ಬರಹಗಳ ಮೇಲೆ ಆಧರಿತವಾಗಿವೆ]

ಮಾತು ಮಾತು ಮಥಿಸಿ, ಹೊಸೆದು ಕವಿತೆ ಹೊಸದು..

ದೊಡ್ಡ ದೊಡ್ಡ ಘನ ವಿಚಾರಗಳ ಬಗ್ಗೆ ಪುಟ್ಟ ಪುಟ್ಟ ಹನಿಗವಿತೆಗಳನ್ನು ಬರೆದು ನಮ್ಮೆಲ್ಲರನ್ನು ಹಗುರಾಗಿಸುತ್ತಿದ್ದ ಡುಂಡಿ ಈಗಿತ್ತಲಿಂದಾಗಿ ಸಣ್ಣ ಸಣ್ಣ ವಿಷಯಗಳ ಬಗ್ಗೆ ದೊಡ್ದ ದೊಡ್ದ ಪ್ರಬಂಧಗಳನ್ನು ಯಾವುದೇ ಬಂಧವಿಲ್ಲದೆ ಮಾತನಾಡುವಷ್ಟೇ ಸಹಜವಾಗಿ ಬರೆಯುತ್ತಿರುವುದನ್ನು ನಾವೆಲ್ಲ ಗಮನಿಸಿದ್ದೇವೆ. ಡುŀ